ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರದ ಸ್ವಚ್ಛತಾ ದೃಷ್ಟಿಯಿಂದ ಹೊಸ ಘನತಾಜ್ಯ ನಿರ್ವಹಣಾ ನಿಯಮಗಳು -2026 ಅನ್ವಯದಂತೆ ನಗರದೆಲ್ಲೆಡೆ ನಾಗರಿಕರು ಎಲ್ಲೆಂದರಲ್ಲಿ ಕಸ ಬಿಸಾಡುವ ಹಲವಾರು ಜಾಗಗಳನ್ನು ಗುರ್ತಿಸಿ ಹಂತ ಹಂತವಾಗಿ ಕಸದ ಸ್ಥಳಗಳನ್ನು ನಗರಸಭೆ ವತಿಯಿಂದ ಸ್ವಚ್ಛ ಗೊಳಿಸಿ ಕಸ ಹಾಕದಂತೆ ನಾಗರಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ.
ಅದರನ್ವಯ ವಾರ್ಡ್ ನಂ-3 ಮುತ್ಸದ್ರ ಟಿಬಿ ಕ್ರಾಸ್ ಬಳಿ ಸುಮಾರು ವರ್ಷಗಳಿಂದ ನಿರಂತರವಾಗಿ ಸಾರ್ವಜನಿಕರು ಈ ಸ್ಥಳದಲ್ಲಿ ಅಜಾಗರೂಕತೆಯಿಂದ ಕಸವನ್ನು ಎಸೆಯುತಿದ್ದರು. ಇದರಿಂದ ವಾರ್ಡಿನ ಸೌಂದರ್ಯಕ್ಕೂ ಹಾಗೂ ಸಾರ್ವಜನಿಕರ ಆರೋಗ್ಯದ ಮೇಲೆ ಹಾನಿ ಉಂಟು ಮಾಡುತ್ತಿತ್ತು. ಪೌರಾಯುಕ್ತರ ಆದೇಶದಂತೆ ಈ ಸ್ಥಳವನ್ನು ಗುರುತಿಸಿ ಸ್ವಚ್ಛ ಸ್ಥಳವನ್ನಾಗಿ ಮಾಡುವ ಮಹತ್ವದ ಕಾರ್ಯ ಕ್ಯೆಗೊಳ್ಳಲಾಗಿದೆ.
ಈ ಬ್ಯುಟಿಫಿಕೇಶನ್ ಸ್ಥಳದಲ್ಲಿ ಸುಂದರವಾದ ಚಿತ್ರಕಲೆ,ಹಸಿರು ಗಿಡ ನೆಡುವ ಹಾಗೂ ಸ್ವಚ್ಛತಾ ಸಂದೇಶ ನೀಡುವ ಹಾಗೂ ವಿನ್ಯಾಸಗಳನ್ನು ಅಳವಡಿಸಲಾಗಿದೆ. ಇದರಿಂದ ಕಸ ಹಾಕುತಿದ್ದ ಈ ಜಾಗದಲ್ಲಿ ಸುಂದರ ಹಾಗೂ ಆಕರ್ಷಕ ಸ್ಥಳವಾಗಿ ಮಾರ್ಪಟ್ಟಿದೆ.
ಈ ಕಾರ್ಯಕ್ರಮಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಜಿಲ್ಲಾಧಿಕಾರಿ ಅನುರಾಧ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲಾ ನಗರ ಅಭಿವೃದ್ಧಿ ಇಲಾಖೆಯ ಯೋಜನಾ ಅಧಿಕಾರಿಗಳು, ಪೌರಾಯುಕ್ತರು, ಹಾಗೂ ನಗರಸಭೆ ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು.



