ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಧಾನಿ ನರೇಂದ್ರ ಮೋದಿ ಅವರ ದೂರದರ್ಶಿತ್ವದ ನಾಯಕತ್ವದಲ್ಲಿ ಕಳೆದ 12 ವರ್ಷಗಳಲ್ಲಿ ಭಾರತವು ಐತಿಹಾಸಿಕ ಮೂಲಸೌಕರ್ಯ ಸ್ಥಿತ್ಯಂತರಕ್ಕೆ ಸಾಕ್ಷಿಯಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಶ್ಲಾಘಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ದೇಶದ ಹೆದ್ದಾರಿ, ರೈಲ್ವೆ, ಮೆಟ್ರೋ ಮತ್ತು ನಾಗರಿಕ ವಿಮಾನಯಾನ ಕ್ಷೇತ್ರಗಳಲ್ಲಿ ಆಗಿರುವ ಅಭೂತಪೂರ್ವ ಪ್ರಗತಿಯ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದ್ದಾರೆ.
ಜಗತ್ತಿನ 2ನೇ ಅತಿ ದೊಡ್ಡ ರಸ್ತೆ ಜಾಲ:
ಭಾರತವು ಪ್ರಸ್ತುತ 64 ಲಕ್ಷ ಕಿಲೋಮೀಟರ್ ಉದ್ದದ ಬೃಹತ್ ರಸ್ತೆ ಜಾಲವನ್ನು ಹೊಂದಿದ್ದು, ಜಗತ್ತಿನಲ್ಲೇ ಎರಡನೇ ಅತಿ ದೊಡ್ಡ ರಸ್ತೆ ಜಾಲವನ್ನು ಹೊಂದಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
ರಾಷ್ಟ್ರೀಯ ಹೆದ್ದಾರಿ: ದೇಶದಲ್ಲಿ ಸದ್ಯ 1.46 ಲಕ್ಷ ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ ಇದೆ.
ಎಕ್ಸ್ಪ್ರೆಸ್ವೇ ಕ್ರಾಂತಿ: ಕೇವಲ 93 ಕಿಲೋಮೀಟರ್ ಇದ್ದ ಎಕ್ಸ್ಪ್ರೆಸ್ವೇ ಜಾಲವು ಇಂದು 3,052 ಕಿಲೋಮೀಟರ್ಗೆ ವಿಸ್ತರಣೆಯಾಗಿದೆ.
ವೇಗದ ನಿರ್ಮಾಣ: ಹಿಂದೆ ದಿನಕ್ಕೆ 12 ಕಿಮೀ ಇದ್ದ ಹೆದ್ದಾರಿ ನಿರ್ಮಾಣದ ವೇಗವು ಈಗ ಮೂರು ಪಟ್ಟು ಹೆಚ್ಚಾಗಿದ್ದು, ದಿನಕ್ಕೆ 34 ಕಿಲೋಮೀಟರ್ಗೆ ತಲುಪಿದೆ. ಕಳೆದ 12 ವರ್ಷಗಳಲ್ಲಿ 55,000 ಕಿಲೋಮೀಟರ್ಗಿಂತಲೂ ಹೆಚ್ಚು ಹೆದ್ದಾರಿಯನ್ನು ನಿರ್ಮಿಸಲಾಗಿದೆ.
ಭಾರತೀಯ ರೈಲ್ವೆಯ ಅಭೂತಪೂರ್ವ ಬದಲಾವಣೆಛ
ಹೊಸ ಹಳಿಗಳ ನಿರ್ಮಾಣ: ದೇಶದಲ್ಲಿ 36,000 ಕಿಲೋಮೀಟರ್ಗಿಂತಲೂ ಹೆಚ್ಚು ಹೊಸ ರೈಲ್ವೆ ಹಳಿಗಳನ್ನು ಅಳವಡಿಸಲಾಗಿದೆ.
ವಿದ್ಯುದ್ದೀಕರಣ: ಬ್ರಾಡ್-ಗೇಜ್ ರೈಲು ಮಾರ್ಗಗಳ ವಿದ್ಯುದ್ದೀಕರಣವು ಶೇ. 99.6 ರಷ್ಟು ಪೂರ್ಣಗೊಂಡಿದ್ದು, ಒಟ್ಟು 69,873 ರೂಟ್ ಕಿಲೋಮೀಟರ್ ಮಾರ್ಗವನ್ನು ವಿದ್ಯುದ್ದೀಕರಿಸಲಾಗಿದೆ.
ಅಮೃತ್ ಭಾರತ್ ನಿಲ್ದಾಣಗಳು: ದೇಶದಾದ್ಯಂತ 1,330 ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳನ್ನು 'ಅಮೃತ್ ಭಾರತ್' ಯೋಜನೆಯಡಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಮರು ಅಭಿವೃದ್ಧಿಪಡಿಸಲಾಗುತ್ತಿದೆ.
ಐದು ಪಟ್ಟು ಹೆಚ್ಚಾದ ಮೆಟ್ರೋ ಜಾಲಛ
ಮೆಟ್ರೋ ವಿಸ್ತರಣೆ: ಕೇವಲ 248 ಕಿಲೋಮೀಟರ್ ಇದ್ದ ಮೆಟ್ರೋ ಮಾರ್ಗವು ಇಂದು 1,155 ಕಿಲೋಮೀಟರ್ಗೆ ಐದು ಪಟ್ಟು ವಿಸ್ತರಣೆಯಾಗಿದೆ.
ಪ್ರಸ್ತುತ ದೇಶದ 26 ನಗರಗಳಲ್ಲಿ ಮೆಟ್ರೋ ಸೇವೆ ಲಭ್ಯವಿದ್ದು, ಪ್ರತಿದಿನ 1 ಕೋಟಿಗೂ ಅಧಿಕ ಜನ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ.
ವಿಮಾನಯಾನ ಮತ್ತು ಇಂಧನ ವಲಯದಲ್ಲಿ ಮುನ್ನಡೆಛ
ವಿಮಾನ ನಿಲ್ದಾಣಗಳು ಮತ್ತು ಉಡಾನ್ ಯೋಜನೆ: ದೇಶದಲ್ಲಿ ಒಟ್ಟು ವಿಮಾನ ನಿಲ್ದಾಣಗಳ ಸಂಖ್ಯೆ 164ಕ್ಕೆ ಏರಿಕೆಯಾಗಿದ್ದು, ಪ್ರಾದೇಶಿಕ ಸಂಪರ್ಕ ಕಲ್ಪಿಸುವ 'ಉಡಾನ್' ಯೋಜನೆಯಡಿ 663 ಮಾರ್ಗಗಳು ಕಾರ್ಯನಿರ್ವಹಿಸುತ್ತಿವೆ.
ವಿದ್ಯುತ್ ಉತ್ಪಾದನೆ: ದೇಶದ ಒಟ್ಟು ಸ್ಥಾಪಿತ ವಿದ್ಯುತ್ ಸಾಮರ್ಥ್ಯವು 530 ಮೆಗಾವ್ಯಾಟ್ ಗಿಂತಲೂ ಅಧಿಕವಾಗಿದೆ.
"ಇದು ಅಭೂತಪೂರ್ವ ವೇಗ ಮತ್ತು ಪ್ರಮಾಣದಲ್ಲಿ ಮುನ್ನಡೆಯುತ್ತಿರುವ 'ನವ ಭಾರತ'ದ ಯಶೋಗಾಥೆ. ಪ್ರಧಾನಿ ನರೇಂದ್ರ ಮೋದಿ ಅವರ ಮೂಲಸೌಕರ್ಯ ಅಭಿವೃದ್ಧಿಯ ಬದ್ಧತೆಯು ಸಶಕ್ತ, ವೇಗವಂತ ಮತ್ತು ಸಮೃದ್ಧ ಭಾರತಕ್ಕೆ ಗಟ್ಟಿ ಮುಡಿಪಾಗಿದೆ."
ಹೆಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವರು.



