ಚಂದ್ರವಳ್ಳಿ ನ್ಯೂಸ್, ನವದೆಹಲಿ:
"ಹಿಂದಿನ ಪೇಪರ್ ಲೀಕ್ ಹಗರಣಗಳಿಂದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಯಾವುದೇ ಪಾಠ ಕಲಿಯದೇ ಇರುವುದು ಅತ್ಯಂತ ಬೇಸರದ ಸಂಗತಿ" ಎಂದು ಸುಪ್ರೀಂ ಕೋರ್ಟ್ ಸೋಮವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ವೈದ್ಯಕೀಯ ಪ್ರವೇಶ ಪರೀಕ್ಷೆ (NEET) ನಡೆಸಲು ಎನ್ಟಿಎ ಬದಲಿಗೆ ಹೆಚ್ಚು ಬಲಿಷ್ಠ ಹಾಗೂ ಸ್ವಾಯತ್ತ ಸಂಸ್ಥೆಯನ್ನು ನೇಮಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಈ ಕುರಿತು ಕೇಂದ್ರ ಸರ್ಕಾರ, ಎನ್ಟಿಎ ಹಾಗೂ ಸಿಬಿಐ (CBI) ಗೆ ನೋಟಿಸ್ ಜಾರಿ ಮಾಡಿ ಪ್ರತಿಕ್ರಿಯೆ ಕೇಳಿದೆ.
ನ್ಯಾಯಮೂರ್ತಿಗಳಾದ ಪಿ. ಎಸ್. ನರಸಿಂಹ ಮತ್ತು ಅಲೋಕ್ ಆರಾಧೆ ಅವರಿದ್ದ ಪೀಠವು ಈ ಮಹತ್ವದ ಆದೇಶ ನೀಡಿದ್ದು, ಪ್ರಕರಣದ ಮುಖ್ಯಾಂಶಗಳು ಇಲ್ಲಿವೆ.
ಗುರುವಾರದೊಳಗೆ ಅಫಿಡವಿಟ್ ಸಲ್ಲಿಸಲು ಸುಪ್ರೀಂ ಕೋರ್ಟ್ ಗಡುವು!-
ಈ ಹಿಂದೆ ನೀಟ್ ಪರೀಕ್ಷೆಯ ಅಕ್ರಮಗಳು ಮುನ್ನೆಲೆಗೆ ಬಂದಾಗ ಸುಪ್ರೀಂ ಕೋರ್ಟ್ ಕೆಲವು ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿತ್ತು.
"ಈ ವಿಷಯ ಈ ಹಿಂದೆಯೂ ನ್ಯಾಯಾಲಯದ ಮೆಟ್ಟಿಲೇರಿತ್ತು. ಆಗ ಒಂದು ಉನ್ನತ ಮಟ್ಟದ ಮೇಲ್ವಿಚಾರಣಾ ಸಮಿತಿಯನ್ನು ರಚಿಸಿ, ಕೆಲವು ಶಿಫಾರಸುಗಳನ್ನು ಮಾಡಲಾಗಿತ್ತು. ನಂತರ ಆ ಶಿಫಾರಸುಗಳನ್ನು ಅಂಗೀಕರಿಸಲಾಗಿತ್ತು. ಆದರೆ, ಸಮಿತಿ ಸೂಚಿಸಿದ ಸುಧಾರಣಾ ಕ್ರಮಗಳನ್ನು ಜಾರಿಗೆ ತರಲು ಎನ್ಟಿಎ ಏನು ಮಾಡಿದೆ? ಈ ಬಗ್ಗೆ ಗುರುವಾರದೊಳಗೆ ಸ್ಪಷ್ಟ ಅಫಿಡವಿಟ್ ಸಲ್ಲಿಸಬೇಕು" ಎಂದು ಪೀಠವು ಖಡಕ್ ಸೂಚನೆ ನೀಡಿದೆ.
ಅಲ್ಲದೆ, ಎನ್ಟಿಎ ಕಾರ್ಯನಿರ್ವಹಣೆಯ ಕೂಲಂಕಷ ಪರಿಶೀಲನೆಗಾಗಿ ಕೇಂದ್ರ ಸರ್ಕಾರ ನೇಮಿಸಿದ್ದ ಇಸ್ರೋ ಮಾಜಿ ಮುಖ್ಯಸ್ಥ ಕೆ. ರಾಧಾಕೃಷ್ಣನ್ ನೇತೃತ್ವದ ಸಮಿತಿಯ ಶಿಫಾರಸುಗಳ ಅನುಷ್ಠಾನಕ್ಕೆ ಕೈಗೊಂಡಿರುವ ಕ್ರಮಗಳ ವಿವರವನ್ನೂ ನೀಡುವಂತೆ ಕೋರ್ಟ್ ನಿರ್ದೇಶಿಸಿದೆ.
ವೈದ್ಯಕೀಯ ಸಂಘಗಳ ಒಕ್ಕೂಟ ನ್ಯಾಯಾಲಯಕ್ಕೆ ಸಲ್ಲಿಸಿದ ಮನವಿಗಳೇನು?- ಅಖಿಲ ಭಾರತ ವೈದ್ಯಕೀಯ ಸಂಘಗಳ ಒಕ್ಕೂಟವು ವಕೀಲ ತನ್ವಿ ದುಬೆ ಅವರ ಮೂಲಕ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದೆ. ಅರ್ಜಿಯಲ್ಲಿ ಉಲ್ಲೇಖಿಸಲಾದ ಪ್ರಮುಖ ಅಂಶಗಳು.
ವಿದ್ಯಾರ್ಥಿಗಳ ಹಕ್ಕಿನ ಮೇಲೆ ದಾಳಿ: ಪುನರಾವರ್ತಿತ ಪ್ರಶ್ನೆಪತ್ರಿಕೆ ಸೋರಿಕೆಯ ದೆಸೆಯಿಂದಾಗಿ ದೇಶದ 22.7 ಲಕ್ಷಕ್ಕೂ ಹೆಚ್ಚು ವೈದ್ಯಕೀಯ ಆಕಾಂಕ್ಷಿಗಳ ಮೂಲಭೂತ ಹಕ್ಕುಗಳ ಮೇಲೆ "ನೇರ ದಾಳಿ" ನಡೆಯುತ್ತಿದೆ.
ಎನ್ಟಿಎ ಬದಲಾವಣೆ:
ನಿರಂತರವಾಗಿ ವಿಫಲವಾಗುತ್ತಿರುವ ಎನ್ಟಿಎಯನ್ನು ಸಂಪೂರ್ಣವಾಗಿ ಪುನರ್ರಚಿಸಬೇಕು ಅಥವಾ ಅದರ ಜಾಗಕ್ಕೆ ಮತ್ತೊಂದು ಪಾರದರ್ಶಕ ಸ್ವಾಯತ್ತ ವ್ಯವಸ್ಥೆಯನ್ನು ತರಬೇಕು.
ಹೊಸ ಉನ್ನತಾಧಿಕಾರ ಸಮಿತಿ ರಚನೆ: ಹೊಸ ಪರೀಕ್ಷಾ ಸಂಸ್ಥೆ ಅಸ್ತಿತ್ವಕ್ಕೆ ಬರುವವರೆಗೆ, ಮರು ಪರೀಕ್ಷೆಯ ಮೇಲ್ವಿಚಾರಣೆಗಾಗಿ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು, ಸೈಬರ್ ಭದ್ರತಾ ತಜ್ಞರು ಮತ್ತು ವಿಧಿವಿಜ್ಞಾನಿಗಳನ್ನು ಒಳಗೊಂಡ ಹೊಸ ಸಮಿತಿಯನ್ನು ನೇಮಿಸಬೇಕು.
ಹಿನ್ನೆಲೆ: ರದ್ದಾಗಿದ್ದ ಮೇ 3ರ ನೀಟ್ ಪರೀಕ್ಷೆ-
ದೇಶಾದ್ಯಂತ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ ಎನ್ಟಿಎ ಮೇ 3 ರಂದು ನಡೆಸಿದ್ದ ಪದವಿಪೂರ್ವ ಮಟ್ಟದ 'ನೀಟ್'ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು.
ಈ ಹಿನ್ನೆಲೆಯಲ್ಲಿ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾದ ಕಾರಣ, ಮೇ 12 ರಂದು ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಸದ್ಯ ಈ ಇಡೀ ಹಗರಣದ ತನಿಖೆಯನ್ನು ಕೇಂದ್ರ ತನಿಖಾ ದಳ ನಡೆಸುತ್ತಿದೆ.



