ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮನವರ ನಿಧನಕ್ಕೆ ಜೆಡಿಎಸ್ ಹಿರಿಯ ಮುಖಂಡರಾದ ಎಂ. ರವೀಂದ್ರಪ್ಪ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಪಿಲಾಜನಹಳ್ಳಿ ಎಂ. ಜಯಣ್ಣ ಹಾಗೂ ಜೆಡಿಎಸ್ ಮುಖಂಡ ಹೆಚ್. ನಾಗರಾಜ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಮಂಜುನಾಥ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಚೆನ್ನಮ್ಮನವರ ಅಗಲಿಕೆ ತಮಗೆ ತುಂಬಾ ನೋವಿನ ಸಂಗತಿಯಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರವರ ಕುಟುಂಬದಲ್ಲಿ ಚೆನ್ನಮ್ಮನವರು ಕೇವಲ ಪತ್ನಿಯಾಗಿರದೆ, ಇಡೀ ಕುಟುಂಬಕ್ಕೆ ದೊಡ್ಡ ಮಾರ್ಗದರ್ಶಕರಾಗಿದ್ದರು. ಸರಳತೆ ಹಾಗೂ ಕೌಟುಂಬಿಕ ಮೌಲ್ಯಗಳಿಗೆ ಪ್ರತಿರೂಪವಾಗಿದ್ದ ಅವರು, ತಮ್ಮ ಶಿಸ್ತುಬದ್ಧ ಬದುಕಿನ ಮೂಲಕ ಇತರರಿಗೆ ಸದಾ ಮಾದರಿಯಾಗಿದ್ದರು ಎಂದು ಮುಖಂಡರು ಸ್ಮರಿಸಿದ್ದಾರೆ.
ಅವರ ನಿಧನದಿಂದ ಗೌಡರ ಕುಟುಂಬಕ್ಕೆ ಮಾತ್ರವಲ್ಲದೆ, ಜೆಡಿಎಸ್ನ ಲಕ್ಷಾಂತರ ಕಾರ್ಯಕರ್ತರಿಗೂ ತುಂಬಲಾರದ ನಷ್ಟ ಉಂಟಾಗಿದೆ. ಈ ತೀವ್ರ ದುಃಖದಲ್ಲಿ ತಾವೂ ಭಾಗಿಗಳಾಗಿದ್ದು, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹಾಗೂ ಅವರ ಕುಟುಂಬದವರಿಗೆ ಈ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಮುಖಂಡರು ಜಂಟಿ ಪ್ರಕಟಣೆಯಲ್ಲಿ ಪ್ರಾರ್ಥಿಸಿದ್ದಾರೆ.



