ಚಂದ್ರವಳ್ಳಿ ನ್ಯೂಸ್, ಕಲಬುರಗಿ:
ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಓಲೈಸಲು ಬಿಜೆಪಿ ತೀವ್ರವಾಗಿ ಶ್ರಮಿಸುತ್ತಿದೆ ಎಂದು ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಲಬುರಗಿಯ ಸಿದ್ದಾರ್ಥ ವಿಹಾರ ಟ್ರಸ್ಟ್ ವಿಚಾರವಾಗಿ ತಮ್ಮ ವಿರುದ್ಧ ಕೇಳಿಬರುತ್ತಿರುವ ಆರೋಪಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ನೇರವಾಗಿ ತಿರುಗೇಟು ನೀಡಿರುವ ಅವರು ತನಿಖೆಗೆ ಮುಕ್ತ ಸವಾಲು ಹಾಕಿದ್ದಾರೆ.
‘ರಾಮಮಂದಿರದ ಲೆಕ್ಕ ಬಿಟ್ಟು ಬುದ್ಧನ ಲೆಕ್ಕ ಕೇಳ್ತಿದ್ದಾರೆ’:
"ದೇಶದ ಜನತೆ ಅಯೋಧ್ಯೆಯ ರಾಮಮಂದಿರದ ವೆಚ್ಚ ಮತ್ತು ದೇಣಿಗೆಯ ಲೆಕ್ಕ ಕೇಳುತ್ತಿದ್ದಾರೆ. ಆದರೆ, ಬಿಜೆಪಿ ಮಾತ್ರ ಕಲಬುರಗಿಯಲ್ಲಿರುವ ಭಗವಾನ್ ಬುದ್ಧನ (ಸಿದ್ದಾರ್ಥ ವಿಹಾರ ಟ್ರಸ್ಟ್) ಹೊಣೆಗಾರಿಕೆಯನ್ನು ಪ್ರಶ್ನಿಸಲು ಹಗಲಿರುಳು ಕೆಲಸ ಮಾಡುತ್ತಿದೆ," ಎಂದು ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.
‘ಐದು ವರ್ಷ ನಿಮ್ಮದೇ ಸಿಎಂ ಇದ್ದರಲ್ಲ, ಯಾಕೆ ಕ್ರಮ ಕೈಗೊಳ್ಳಲಿಲ್ಲ?’:ಕರ್ನಾಟಕದಲ್ಲಿ ಈ ಹಿಂದೆ ಬಿಜೆಪಿ ಆಡಳಿತದಲ್ಲಿದ್ದ ಅವಧಿಯನ್ನು ನೆನಪಿಸಿರುವ ಪ್ರಿಯಾಂಕ್, "ರಾಜ್ಯದಲ್ಲಿ ನಿಮ್ಮದೇ ಪಕ್ಷದ ಐದು ಜನ ಮುಖ್ಯಮಂತ್ರಿಗಳು ಅಧಿಕಾರ ನಡೆಸಿದ್ದರಲ್ಲ (ಬಿಜೆಪಿ ಆಡಳಿತಾವಧಿ), ಆಗ ಅವರಲ್ಲಿ ಯಾರೊಬ್ಬರೂ ಈ ಬಗ್ಗೆ ಏಕೆ ಕ್ರಮ ಕೈಗೊಳ್ಳಲಿಲ್ಲ?" ಎಂದು ಪ್ರಶ್ನಿಸಿದ್ದಾರೆ.
‘೧೨ ವರ್ಷಗಳಿಂದ ಮೋದಿ ಸರ್ಕಾರ ಇದೆ, ನಾನೇಕೆ ಜೈಲಿನಲ್ಲಿಲ್ಲ?’:
ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿರುವ ಅವರು, "ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದು ೧೨ ವರ್ಷಗಳಾಗಿವೆ. ಒಂದು ವೇಳೆ ನಾನು ಯಾವುದೇ ತಪ್ಪು ಅಥವಾ ಅಕ್ರಮ ಎಸಗಿದ್ದರೆ, ನಾನೇಕೆ ಇನ್ನು ಮುಕ್ತವಾಗಿ ತಿರುಗಾಡುತ್ತಿದ್ದೇನೆ? ನನ್ನನ್ನು ಏಕೆ ಜೈಲಿಗೆ ಹಾಕಿಲ್ಲ?" ಎಂದು ಸವಾಲು ಹಾಕಿದ್ದಾರೆ.
ಆರ್ಎಸ್ಎಸ್ ಲೆಕ್ಕ ಕೇಳಿದ ಸಚಿವ:
ತಮ್ಮ ಸಂಸ್ಥೆ ಹಾಗೂ ವೈಯಕ್ತಿಕ ದಾಖಲೆಗಳು ಅತ್ಯಂತ ಪಾರದರ್ಶಕವಾಗಿವೆ ಎಂದು ಸ್ಪಷ್ಟಪಡಿಸಿರುವ ಪ್ರಿಯಾಂಕ್ ಖರ್ಗೆ, "ನನ್ನ ಎಲ್ಲಾ ದಾಖಲೆಗಳು ಸಾರ್ವಜನಿಕವಾಗಿ ಲಭ್ಯವಿವೆ. ಯಾವುದೇ ವೇದಿಕೆಯಲ್ಲಾದರೂ ಈ ಬಗ್ಗೆ ಚರ್ಚಿಸಲು ನಾನು ಸಿದ್ಧನಿದ್ದೇನೆ. ಮೊದಲು ಇದನ್ನು ಹೇಳಿ, ನಿಮ್ಮ ರಾಜಕೀಯ ಗುರುಗಳಾದ ಆರ್ಎಸ್ಎಸ್ನವರು ತಮ್ಮ ಲೆಕ್ಕಪತ್ರ ಹಾಗೂ ದಾಖಲೆಗಳನ್ನು ಯಾವಾಗ ಬಹಿರಂಗಪಡಿಸುತ್ತಾರೆ?" ಎಂದು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
ಕಲಬುರಗಿಯ ಜಮೀನು ಹಂಚಿಕೆ ಹಾಗೂ ಟ್ರಸ್ಟ್ ವಿಚಾರವಾಗಿ ಬಿಜೆಪಿ ಇತ್ತೀಚೆಗೆ ಪ್ರಿಯಾಂಕ್ ಖರ್ಗೆ ವಿರುದ್ಧ ಸರಣಿ ಆರೋಪಗಳನ್ನು ಮಾಡುತ್ತಿರುವ ಬೆನ್ನಲ್ಲೇ, ಸಚಿವರು ನೀಡಿರುವ ಈ ನೇರ ಕೌಂಟರ್ ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸುತ್ತಿನ ವಾಗ್ದಾಳಿಗೆ ಕಾರಣವಾಗಿದೆ.



