ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಖಾತೆ ಹಂಚಿಕೆಯಾಗಿ 13 ದಿನಗಳು ಕಳೆದರೂ ಇದ್ದ ಅಸಮಾಧಾನಕ್ಕೆ ಕೊನೆಗೂ ತೆರೆ ಬಿದ್ದಿದೆ. ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನಡೆಸಿದ ಸಂಧಾನ ಯಶಸ್ವಿಯಾದ ಬೆನ್ನಲ್ಲೇ, ಸಚಿವ ಕೃಷ್ಣಬೈರೇಗೌಡ ಅವರು ಮಂಗಳವಾರ ಅಧಿಕೃತವಾಗಿ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಕಚೇರಿಯಲ್ಲಿ ಐದು ನಗರ ಪಾಲಿಕೆಗಳ ಮುಖ್ಯ ಆಯುಕ್ತರು ಹಾಗೂ ಹಿರಿಯ ಇಂಜಿನಿಯರ್ಗಳ ಮೊದಲ ಜಂಟಿ ಸಭೆ ನಡೆಸಿದ ಸಚಿವರು, ಬೆಂಗಳೂರಿನ ರಸ್ತೆ ಗುಂಡಿ ಹಾಗೂ ಕಸದ ಸಮಸ್ಯೆಯ ಬಗ್ಗೆ ಅಧಿಕಾರಿಗಳ ಚಳಿ ಬಿಡಿಸಿದರು.
"ಬೆಂಗಳೂರು ರಸ್ತೆ ಮಾಡೋದು ಏನು ರಾಕೆಟ್ ಸೈನ್ಸಾ?" – ಸಚಿವರ ತರಾಟೆ ಮೊದಲ ಸಭೆಯಲ್ಲೇ ಬೆಂಗಳೂರಿನ ರಸ್ತೆಗಳ ದುಸ್ಥಿತಿಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕೃಷ್ಣಬೈರೇಗೌಡ, ಜಿಬಿಎ ಇಂಜಿನಿಯರ್ಗಳನ್ನು ತರಾಟೆಗೆ ತೆಗೆದುಕೊಂಡರು.
"ರಸ್ತೆ ಗುಂಡಿಗಳು ಇಲ್ಲದಂತೆ ಗುಣಮಟ್ಟದ ರಸ್ತೆ ನಿರ್ಮಾಣ ಮಾಡುವುದು ಏನು ರಾಕೆಟ್ ಸೈನ್ಸಾ? ನೆರೆ ರಾಜ್ಯಗಳಲ್ಲಿ ಪಾತ್ ಹೋಲ್ (ರಸ್ತೆ ಗುಂಡಿ) ಇಲ್ಲದ ರಸ್ತೆಗಳನ್ನು ನೋಡಿ ಕಲಿಯಿರಿ. ಸದಾ ಮಳೆ ಬೀಳುವ ರಾಜ್ಯಗಳಲ್ಲೂ ರಸ್ತೆಗಳು ಅತ್ಯುತ್ತಮವಾಗಿವೆ. ನಿಮಗೇಕೆ ಉತ್ತಮ ರಸ್ತೆ ಮಾಡಲು ಸಾಧ್ಯವಾಗುತ್ತಿಲ್ಲ? ನಿಮಗೇನಾದರೂ ಬಜೆಟ್ ಕಡಿಮೆ ಕೊಟ್ಟಿದ್ದೇವಾ?" ಎಂದು ಅಧಿಕಾರಿಗಳನ್ನು ನೇರವಾಗಿ ಪ್ರಶ್ನಿಸಿದರು.
ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ತಮ್ಮ ಮುಂದಿರುವ ಯೋಜನೆಗಳನ್ನು ಹಂಚಿಕೊಂಡರು.
ವಿಕೇಂದ್ರೀಕರಣದ ಮಹತ್ವ: "ಬೆಂಗಳೂರು ಇಡೀ ವಿಶ್ವಕ್ಕೆ ಬೇಕಾಗಿರುವ ಆಸ್ತಿ. ಇಲ್ಲಿ 1.5 ಕೋಟಿ ಜನ ವಾಸಿಸುತ್ತಿದ್ದಾರೆ. ಕೇವಲ ಒಂದೇ ಬಿಬಿಎಂಪಿ ಇದ್ದರೆ ಇಷ್ಟೊಂದು ದೊಡ್ಡ ನಗರದ ಆಡಳಿತ ಸುಧಾರಿಸುವುದು ಕಷ್ಟ. ಇದೇ ಕಾರಣಕ್ಕೆ ಐದು ನಗರ ಪಾಲಿಕೆಗಳನ್ನು ಮಾಡಿ ಆಡಳಿತ ವಿಕೇಂದ್ರೀಕರಣ ಮಾಡಲಾಗಿದೆ. ಕಳೆದ 3 ವರ್ಷಗಳ ಸತತ ಪ್ರಯತ್ನದಿಂದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ದೀರ್ಘಾವಧಿ ಯೋಜನೆಗಳಿಗೆ ರೂಪುರೇಷೆ ತಂದಿದ್ದಾರೆ" ಎಂದರು.
ಕಸದ ಸಮಸ್ಯೆಗೆ ಜನರ ಸಹಕಾರ ಅಗತ್ಯ: "ಕಸದ ನಿರ್ವಹಣಾ ವ್ಯವಸ್ಥೆಯಲ್ಲಿ ಲೋಪದೋಷಗಳಿರುವುದು ನಿಜ. ಆದರೆ ಇದಕ್ಕೆ ಸಾರ್ವಜನಿಕರ ಸಹಕಾರವೂ ಅಷ್ಟೇ ಮುಖ್ಯ. ಕಸದ ಟೆಂಡರ್ ವಿಚಾರವಾಗಿ ಈಗಾಗಲೇ ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸಿದ್ದು, ಸಮಿತಿಯ ಸಲಹೆಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು" ಎಂದು ಸ್ಪಷ್ಟಪಡಿಸಿದರು.
ಅಳಿಲು ಸೇವೆ: "ನನ್ನ ಕೈಲಾದ ಮಟ್ಟಿಗೆ ಬೆಂಗಳೂರಿಗೆ ಅಳಿಲು ಸೇವೆ ಮಾಡುತ್ತೇನೆ. ರಸ್ತೆ ಸರಿಯಾಗಿರಬೇಕು ಎಂಬ ಜನರ ಭಾವನೆ ನನಗೂ ಗೊತ್ತು. ಗುತ್ತಿಗೆದಾರರು ಮತ್ತು ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು" ಎಂದರು.
ಖಾತೆ ಅಸಮಾಧಾನದ ಬಗ್ಗೆ ಸಚಿವರ ಮುಕ್ತ ಸ್ಪಷ್ಟನೆ:
ಪೂರ್ಣ ಪ್ರಮಾಣದ ಅಧಿಕಾರ ಸಿಗದ ಹಿನ್ನೆಲೆಯಲ್ಲಿ ಇಷ್ಟು ದಿನ ಅಧಿಕಾರ ವಹಿಸಿಕೊಳ್ಳದ ಬಗ್ಗೆಯೂ ಸಚಿವರು ಇದೇ ವೇಳೆ ಸ್ಪಷ್ಟನೆ ನೀಡಿದರು.
"ಬೆಂಗಳೂರಿನಲ್ಲಿ ಸಮರ್ಪಕವಾಗಿ ಆಡಳಿತ ನಡೆಸಲು ಪೂರ್ಣ ಖಾತೆಯ ಅವಶ್ಯಕತೆ ಇದೆ ಎಂಬ ನನ್ನ ವೈಯಕ್ತಿಕ ಅಭಿಪ್ರಾಯವನ್ನು ಸಿಎಂ ಹಾಗೂ ವರಿಷ್ಠರಿಗೆ ತಿಳಿಸಿದ್ದೆ. ಸಂಪೂರ್ಣ ಕ್ಲಾರಿಟಿ ಸಿಕ್ಕ ಬಳಿಕವೇ ಅಧಿಕಾರ ವಹಿಸಿಕೊಳ್ಳಬೇಕು ಅಂದುಕೊಂಡಿದ್ದೆ. ಆದರೆ, ಸಿಎಂ ಅವರು ತಮ್ಮ ವಿವೇಚನೆ ಬಳಸಿ ತೀರ್ಮಾನ ಮಾಡಿದ್ದಾರೆ. ನಮ್ಮ ಅರ್ಹತೆಗೆ ತಕ್ಕ ಖಾತೆ ಮುಂದಿನ ದಿನಗಳಲ್ಲಿ ಸಿಗಲಿದೆ ಎನ್ನುವ ನಂಬಿಕೆ ಇದೆ. ಸದ್ಯ ವರಿಷ್ಠರ ಸೂಚನೆಯಂತೆ ಇಲಾಖೆಯ ಜವಾಬ್ದಾರಿ ಸ್ವೀಕರಿಸಿ ಕೆಲಸ ಆರಂಭಿಸಿದ್ದೇನೆ" ಎಂದು ಕೃಷ್ಣಬೈರೇಗೌಡ ತಿಳಿಸಿದರು.
ಖಾತೆ ಗೊಂದಲದ ನಡುವೆಯೂ ಸಚಿವರು ಮೊದಲ ದಿನವೇ ಸಭೆ ನಡೆಸಿ ರಸ್ತೆ ಮತ್ತು ಕಸದ ಸಮಸ್ಯೆಗೆ ಯುದ್ಧೋಪಾದಿಯಲ್ಲಿ ಚಾಲನೆ ನೀಡಿರುವುದು ಸಾರ್ವಜನಿಕ ವಲಯದಲ್ಲಿ ಭರವಸೆ ಮೂಡಿಸಿದೆ.



