ಚಂದ್ರವಳ್ಳಿ ನ್ಯೂಸ್, ಬೆಂಗಳೂರು / ಬಿಡದಿ:
ಬಿಡದಿ ಟೌನ್ಶಿಪ್ ಯೋಜನೆಗಾಗಿ ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿರುವ ರೈತರು ಕಳೆದ 500 ದಿನಗಳಿಂದ ನಡೆಸುತ್ತಿದ್ದ ಶಾಂತಿಯುತ ಪ್ರತಿಭಟನಾ ಸ್ಥಳಕ್ಕೆ ಏಕಾಏಕಿ ಅಧಿಕಾರಿಗಳು ಸರ್ವೇ ನಡೆಸಲು ಆಗಮಿಸಿರುವುದಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಈ ನಡೆಗೆ ರಾಜ್ಯ ಸರ್ಕಾರದ ಬೇಜವಾಬ್ದಾರಿತನ ಮತ್ತು ಚಿತಾವಣೆಯೇ ನೇರ ಕಾರಣ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಟ್ವೀಟ್ (ಎಕ್ಸ್) ಹಾಗೂ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ಸುದೀರ್ಘ ಕಾಲದಿಂದ ನ್ಯಾಯಕ್ಕಾಗಿ ಹೋರಾಡುತ್ತಿರುವ ರೈತರ ಆಕ್ರೋಶ ಸಹಜವಾದುದು ಎಂದಿದ್ದಾರೆ. ಇದೇ ವೇಳೆ ರೈತರು ಹಾಗೂ ಪೊಲೀಸ್ ಇಲಾಖೆಗೆ ಮಹತ್ವದ ಮನವಿ ಮತ್ತು ಎಚ್ಚರಿಕೆಯನ್ನು ನೀಡಿದ್ದಾರೆ.
ರೈತರಲ್ಲಿ ಕುಮಾರಸ್ವಾಮಿ ಮನವಿ:
"ಯಾವುದೇ ಕಾರಣಕ್ಕೂ ಕಾನೂನು ಕೈಗೆತ್ತಿಕೊಳ್ಳಬೇಡಿ. ಕೆಟ್ಟ ಘಟನೆಗಳು ಸಂಭವಿಸಲು ಆಸ್ಪದ ನೀಡದೆ ನಿಮ್ಮ ಶಾಂತಿಯುತ ಹೋರಾಟವನ್ನು ಮುಂದುವರಿಸಿ. ನಾವು ಈ ಹೋರಾಟವನ್ನು ಕಾನೂನಾತ್ಮಕವಾಗಿ ಎದುರಿಸೋಣ. ನಿಮ್ಮ ನೋವು ಮತ್ತು ಆಕ್ರೋಶವನ್ನು ರಾಜಕೀಯವಾಗಿ ದುರುಪಯೋಗಪಡಿಸಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಯಾವುದೇ ಅವಕಾಶ ನೀಡಬೇಡಿ." ಎಂದು ರೈತರಲ್ಲಿ ವಿನಂತಿಸಿದ್ದಾರೆ.
ಪೊಲೀಸ್ ಇಲಾಖೆಗೆ ಕಡಕ್ ಎಚ್ಚರಿಕೆ:
ಪೊಲೀಸ್ ಇಲಾಖೆಯ ಕಾರ್ಯವೈಖರಿಯ ಬಗ್ಗೆಯೂ ಪ್ರಸ್ತಾಪಿಸಿರುವ ಎಚ್ಡಿಕೆ, "ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ಅನ್ನದಾತರ ವಿರುದ್ಧ ಸರ್ಕಾರ ನಿಮ್ಮನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಸರ್ಕಾರದ ದರ್ಪ ಹಾಗೂ ಒತ್ತಡಕ್ಕೆ ಮಣಿದು ಯಾವುದೇ ಕಾರಣಕ್ಕೂ ರೈತ ವಿರೋಧಿ ನೀತಿಯನ್ನು ಅನುಸರಿಸಬೇಡಿ. ಒಂದು ವೇಳೆ ಸರ್ಕಾರದ ಹಠಮಾರಿ ಧೋರಣೆಗೆ ಸಾಥ್ ನೀಡಿದರೆ, ಮುಂದಿನ ದಿನಗಳಲ್ಲಿ ಸರ್ಕಾರದ ಕೆಟ್ಟ ನಡವಳಿಕೆಯ ಪಾಪದ ಪಾಲನ್ನು ನೀವೂ ಹಂಚಿಕೊಳ್ಳಬೇಕಾಗುತ್ತದೆ" ಎಂದು ಎಚ್ಚರಿಸಿದ್ದಾರೆ.
ಬಿಡದಿ ಭಾಗದ ರೈತರ ಫಲವತ್ತಾದ ಭೂಮಿಯನ್ನು ರಕ್ಷಿಸಲು ತಾವು ಸದಾ ಸಿದ್ಧರಿದ್ದು, ರೈತರ ಪರವಾಗಿ ಕಾನೂನು ಹೋರಾಟ ಮುಂದುವರಿಸುವುದಾಗಿ ಕುಮಾರಸ್ವಾಮಿ ಈ ಸಂದರ್ಭದಲ್ಲಿ ಪುನರುಚ್ಚರಿಸಿದ್ದಾರೆ.



