ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತಾತ್ಮಕ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ಉತ್ತರ ಕರ್ನಾಟಕದ ಜನರ ಜೀವನಾಡಿಯಾದ ಮಹದಾಯಿ ಯೋಜನೆಯ ಮಹತ್ವದ ಪ್ರಸ್ತಾವನೆಯು ಕೇಂದ್ರ ಅರಣ್ಯ ಸಚಿವಾಲಯದ ಪಟ್ಟಿಯಿಂದ ‘ಡಿ-ಲಿಸ್ಟ್’ (ಖಾರೀಜು) ಆಗಿದೆ. ಸರ್ಕಾರದ ಈ ದಿವ್ಯ ನಿರ್ಲಕ್ಷ್ಯವನ್ನು ಜನತಾದಳ (ಜಾತ್ಯತೀತ) ಪಕ್ಷವು ಅತ್ಯಂತ ತೀವ್ರವಾಗಿ ಖಂಡಿಸಿದೆ.
4 ತಿಂಗಳಾದರೂ ಸಿಗದ ಉತ್ತರ; ಡಿ-ಲಿಸ್ಟ್ ಆಗಿದ್ದೇಗೆ?:
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ನೆರಸೆ, ಮಂತುರ್ಗಾ ಹಾಗೂ ಬಚೋಲಿ ಗ್ರಾಮಗಳ ವ್ಯಾಪ್ತಿಯಲ್ಲಿ ಸುಮಾರು 71 ಎಕರೆ ಅರಣ್ಯ ಪ್ರದೇಶವನ್ನು ಯೋಜನೆ ಕಾಮಗಾರಿಗಳಿಗೆ ಬಳಸಿಕೊಳ್ಳಲು ಕರ್ನಾಟಕ ನೀರಾವರಿ ನಿಗಮವು ಕೇಂದ್ರದ ಅನುಮೋದನೆ ಕೋರಿ ಪ್ರಸ್ತಾವ ಸಲ್ಲಿಸಿತ್ತು.
ಈ ಕುರಿತು ಪರಿಶೀಲನೆ ನಡೆಸಿದ್ದ ಕೇಂದ್ರ ಮಟ್ಟದ ಸಮಿತಿಯು ಕೆಲವು ತಾಂತ್ರಿಕ ಹಾಗೂ ಪರಿಸರ ಸಂಬಂಧಿತ ಸ್ಪಷ್ಟೀಕರಣಗಳನ್ನು ಕೇಳಿ, ಅಗತ್ಯ ಉತ್ತರ ಮತ್ತು ಸಮಗ್ರ ವರದಿಯನ್ನು ಸಲ್ಲಿಸುವಂತೆ ಜನವರಿ 20ರಂದೇ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಆದರೆ, ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಇಲಾಖೆಗಳು ಕಳೆದ 4 ತಿಂಗಳಿನಿಂದ ಯಾವುದೇ ಸಮರ್ಪಕ ಉತ್ತರ ನೀಡದೆ ಕಾಲಹರಣ ಮಾಡಿವೆ. ಪರಿಣಾಮವಾಗಿ ಕೇಂದ್ರ ಸರ್ಕಾರವು ಈ ಪ್ರಸ್ತಾವನೆಯನ್ನೇ ಸದ್ಯಕ್ಕೆ ಪಟ್ಟಿಯಿಂದ ಕೈಬಿಟ್ಟಿದೆ (ಡಿ-ಲಿಸ್ಟ್ ಮಾಡಿದೆ).
ಜಲಸಂಪನ್ಮೂಲ ಹಾಗೂ ಅರಣ್ಯ ಸಚಿವರ ವಿರುದ್ಧ ಜೆಡಿಎಸ್ ಕಿಡಿ:
ಮಹದಾಯಿ ವಿಷಯದಲ್ಲಿ ರಾಜ್ಯದ ಜನರ ಹಿತಾಸಕ್ತಿ, ಗಡಿಭಾಗದ ನೀರಿನ ಪ್ರಶ್ನೆ ಹಾಗೂ ಉತ್ತರ ಕರ್ನಾಟಕದ ಭಾವನಾತ್ಮಕ ಸಂಬಂಧಗಳು ಬೆರೆತಿವೆ. ಇಂತಹ ಸೂಕ್ಷ್ಮ ವಿಷಯದಲ್ಲೂ ಕಾಂಗ್ರೆಸ್ ಸರ್ಕಾರ ತೋರಿಸುತ್ತಿರುವ ಹೊಣೆಗೇಡಿತನ ಹಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಜೆಡಿಎಸ್ ಆರೋಪಿಸಿದೆ.
"ಕೇಂದ್ರ ಸರ್ಕಾರದ ವಿರುದ್ಧ ದ್ವೇಷ ರಾಜಕಾರಣ ಮಾಡುವುದರಲ್ಲೇ ಕಾಲ ಕಳೆಯುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ, ರಾಜ್ಯದ ನೀರಾವರಿ ಯೋಜನೆಗಳ ಜಾರಿ ಮತ್ತು ಅನುಷ್ಠಾನದ ವಿಚಾರದಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಸಚಿವರ ನಿರಾಸಕ್ತಿಯೇ ಇದಕ್ಕೆ ಕಾರಣ," ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.
ಸಂಘರ್ಷ ಬಿಟ್ಟು ಕೆಲಸ ಮಾಡಿ: ಕೇಂದ್ರದ ಜೊತೆಗಿನ ರಾಜಕೀಯ ಸಂಘರ್ಷವನ್ನು ಬದಿಗಿಟ್ಟು, ತಕ್ಷಣವೇ ಡಿ-ಲಿಸ್ಟ್ ಆಗಿರುವ ಮಹದಾಯಿ ಪ್ರಸ್ತಾವನೆಯನ್ನು ಮರುಸಕ್ರಿಯಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.
ತಕ್ಷಣ ವರದಿ ಸಲ್ಲಿಸಿ: ಕೇಂದ್ರ ಸಮಿತಿ ಕೇಳಿರುವ ಎಲ್ಲಾ ತಾಂತ್ರಿಕ ಹಾಗೂ ಪರಿಸರ ಸಂಬಂಧಿತ ಸ್ಪಷ್ಟೀಕರಣಗಳು ಮತ್ತು ಅಗತ್ಯ ದಾಖಲೆಗಳನ್ನು ತಕ್ಷಣವೇ ಸಲ್ಲಿಸಬೇಕು.
ರೈತರ ಹಿತರಕ್ಷಣೆ ಮಾಡಿ: ಉತ್ತರ ಕರ್ನಾಟಕದ ರೈತರ ಹಾಗೂ ಜನರ ಹಿತಾಸಕ್ತಿಗಾಗಿ ಈ ಯೋಜನೆಯನ್ನು ಆದ್ಯತೆಯ ಮೇರೆಗೆ ಕಾರ್ಯಗತಗೊಳಿಸಬೇಕು.
ಕಾಂಗ್ರೆಸ್ ಸರ್ಕಾರದ ಈ ಆಡಳಿತಾತ್ಮಕ ವಿಫಲತೆಯಿಂದಾಗಿ ಉತ್ತರ ಕರ್ನಾಟಕದ ರೈತರು ಮತ್ತೊಮ್ಮೆ ಆತಂಕಕ್ಕೆ ಒಳಗಾಗುವಂತಾಗಿದ್ದು, ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಲಿದೆಯೇ ಎಂದು ಕಾದು ನೋಡಬೇಕಿದೆ.



