ಶಾಸಕ ಕೆ.ಎಸ್. ನವೀನ್ ಪಿತೃವಿಯೋಗ: ಶ್ರೀ ಜಯಪದ್ಮ ಮೋಟಾರ್ಸ್ ಮಾಲೀಕ ಕೆ.ಆರ್. ಶಿವಪ್ರಕಾಶ್ ಇನ್ನಿಲ್ಲ
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಚಿತ್ರದುರ್ಗದ ಹಿರಿಯ ಉದ್ಯಮಿಗಳು ಹಾಗೂ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಎಸ್. ನವೀನ್ ಅವರ ಪೂಜ್ಯ ತಂದೆಯವರಾದ ಕೆ.ಆರ್. ಶಿವಪ್ರಕಾಶ್ (86) ಅವರು ಗುರುವಾರ (ಮೇ 07) ದೈವಾಧೀನರಾಗಿದ್ದಾರೆ.
ಶ್ರೀ ಜಯಪದ್ಮ ಮೋಟಾರ್ ಸರ್ವಿಸ್ನ ಮಾಲೀಕರಾಗಿದ್ದ ಶಿವಪ್ರಕಾಶ್ ಅವರು ಜಿಲ್ಲೆಯ ಸಾರಿಗೆ ಕ್ಷೇತ್ರದಲ್ಲಿ ಹಾಗೂ ಸಾಮಾಜಿಕ ವಲಯದಲ್ಲಿ ಗುರುತಿಸಿಕೊಂಡಿದ್ದರು.
ಮೃತರು ಪುತ್ರ ಶಾಸಕ ಕೆ.ಎಸ್. ನವೀನ್ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಅಂತಿಮ ದರ್ಶನ ಮತ್ತು ಅಂತ್ಯಕ್ರಿಯೆಯ ವಿವರ:
ಮೃತರ ಅಂತಿಮ ದರ್ಶನಕ್ಕೆ ಬೆಂಗಳೂರು, ಚಿತ್ರದುರ್ಗ ಹಾಗೂ ಅವರ ಸ್ವಗ್ರಾಮದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ವಿವರಗಳು ಕೆಳಗಿನಂತಿವೆ:
ಬೆಂಗಳೂರು: ಇಂದು (ಮೇ 07) ಸಂಜೆ 5:30 ರಿಂದ ಶುಕ್ರವಾರ (ಮೇ 08) ಬೆಳಿಗ್ಗೆ 10:00 ಗಂಟೆಯವರೆಗೆ ಬೆಂಗಳೂರಿನ ವಸಂತನಗರದ ಕಾವೇರಿಯಪ್ಪ ಲೇಔಟ್ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶವಿರುತ್ತದೆ.
ಚಿತ್ರದುರ್ಗ: ಮೇ 08ರ ಶುಕ್ರವಾರ ಮಧ್ಯಾಹ್ನ 3:00 ಗಂಟೆಯಿಂದ ಶನಿವಾರ (ಮೇ 09) ಬೆಳಿಗ್ಗೆ 10:00 ಗಂಟೆಯವರೆಗೆ ಚಿತ್ರದುರ್ಗದ ವಿ.ಪಿ. ಬಡಾವಣೆಯ ಆರ್ಟಿಒ ಆಫೀಸ್ ರಸ್ತೆಯಲ್ಲಿರುವ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಅಂತ್ಯಕ್ರಿಯೆ: ಮೇ 09ರ ಶನಿವಾರ ಮಧ್ಯಾಹ್ನ 3:00 ಗಂಟೆಗೆ ಹೊಳಲ್ಕೆರೆ ತಾಲೂಕಿನ ಸ್ವಗ್ರಾಮವಾದ ಎನ್.ಜಿ. ಹಳ್ಳಿಯ ತೋಟದ ಆವರಣದಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕೆ.ಆರ್. ಶಿವಪ್ರಕಾಶ್ ಅವರ ನಿಧನಕ್ಕೆ ಜಿಲ್ಲೆಯ ಗಣ್ಯರು, ರಾಜಕೀಯ ಮುಖಂಡರು ಹಾಗೂ ಹಿತೈಷಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.


