ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪರಿಸರ ಸಂರಕ್ಷಣೆ ಮತ್ತು ಹಸಿರು ವಿಸ್ತರಣೆಯ ಮಹತ್ವವನ್ನು ಸಾರುವ ಉದ್ದೇಶದಿಂದ ನಗರದ ಪ್ರಸಿದ್ಧ ಆಡು ಮಲ್ಲೇಶ್ವರ ಕಿರು ಅರಣ್ಯದಲ್ಲಿ ಭಾನುವಾರ ಬೆಳಿಗ್ಗೆ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ವಿಧಾನ ಪರಿಷತ್ ಶಾಸಕರಾದ ಕೆ.ಎಸ್. ನವೀನ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ, ಕಾಡಿನಲ್ಲಿ ಬೀಜದ ಉಂಡೆಗಳನ್ನು ಬಿತ್ತುವ ಮೂಲಕ ಹಸಿರು ಕ್ರಾಂತಿಗೆ ಕೈಜೋಡಿಸಿದರು.
ವಿದ್ಯಾರ್ಥಿಗಳಲ್ಲಿ ಬಾಲ್ಯದಿಂದಲೇ ಪ್ರಕೃತಿಯ ಬಗ್ಗೆ ಕಾಳಜಿ ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಕಾಡಿನಾದ್ಯಂತ ಸಂಚರಿಸಿದ ಶಾಲಾ ಮಕ್ಕಳು ಅತ್ಯಂತ ಸಡಗರದಿಂದ ಬೀಜದ ಉಂಡೆಗಳನ್ನು ಹರಡಿದರು.
ಬೀಜದ ಉಂಡೆ ಬಿತ್ತುವ ಕಾರ್ಯಕ್ರಮದ ಯಶಸ್ವಿ ಮುಕ್ತಾಯದ ನಂತರ, ಶಾಸಕರು ತಮ್ಮ ಮಿತ್ರರೊಂದಿಗೆ ಆಡು ಮಲ್ಲೇಶ್ವರದ ದಟ್ಟ ಅರಣ್ಯದಲ್ಲಿ ಕೆಲಕಾಲ ಚಾರಣ ನಡೆಸಿದರು. ಈ ಸಂದರ್ಭದಲ್ಲಿ ಪ್ರಕೃತಿಯ ಸೊಬಗನ್ನು ಆಸ್ವಾದಿಸಿದ ಅವರು, ಅರಣ್ಯ ಸಂಪತ್ತಿನ ರಕ್ಷಣೆಯ ಅಗತ್ಯತೆಯನ್ನು ವಿಧಾನ ಪರಿಷತ್ ಶಾಸಕರಾದ ಕೆ.ಎಸ್. ನವೀನ್ ಒತ್ತಿ ಹೇಳಿದರು.
"ಪ್ರಕೃತಿಯನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯ. ಇಂದು ನಾವು ಮಾಡುವ ಇಂತಹ ಸಣ್ಣ ಸಣ್ಣ ಪ್ರಯತ್ನಗಳು ಮತ್ತು ಪರಿಸರ ಕಾಳಜಿಗಳು, ಭವಿಷ್ಯದ ಪೀಳಿಗೆಗೆ ಹಸಿರು ಹಾಗೂ ಸುಂದರ ಪರಿಸರವನ್ನು ನಿರ್ಮಿಸಲು ದಾರಿದೀಪವಾಗಲಿವೆ."
ಕೆ.ಎಸ್. ನವೀನ್, ವಿಧಾನ ಪರಿಷತ್ ಶಾಸಕರು.
ಕಾರ್ಯಕ್ರಮದಲ್ಲಿ ಶಿಕ್ಷಕ ಮುರುಗೇಶ್, ವೆಂಕಟೇಶ್ ಯಾದವ್, ಬಿಜೆಪಿ ಮುಖಂಡರು ಸೇರಿದಂತೆ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪರಿಸರ ಪ್ರೇಮಿಗಳು ಪ್ರಕೃತಿ ಸಂರಕ್ಷಣೆಯ ಸಂಕಲ್ಪದೊಂದಿಗೆ ಪಾಲ್ಗೊಂಡಿದ್ದರು.



