ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತಂತ್ರಜ್ಞಾನದ ಅಳವಡಿಕೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಈಗ ವಿದ್ಯುತ್ ಪ್ರಸರಣ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿ ಸೃಷ್ಟಿಸಿದೆ.
ರಾಜ್ಯಾದ್ಯಂತ ಹೈ-ವೋಲ್ಟೇಜ್ ಹಾಗೂ ಎಕ್ಸ್ಟ್ರೀಮ್ ಹೈ-ವೋಲ್ಟೇಜ್ ವಿದ್ಯುತ್ ಪ್ರಸರಣ ಮಾರ್ಗಗಳ ತಪಾಸಣೆಗಾಗಿ ಅತ್ಯಾಧುನಿಕ ಡ್ರೋನ್ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ನಿಗಮವು, ಬರೋಬ್ಬರಿ 11 ಸಾವಿರಕ್ಕೂ ಹೆಚ್ಚು ವಿದ್ಯುತ್ ಟವರ್ಗಳ ಡಿಜಿಟಲ್ ತಪಾಸಣೆ ನಡೆಸಿ ಯಶಸ್ವಿಯಾಗಿದೆ.
ಈ ಹೈಟೆಕ್ ಕಾರ್ಯಾಚರಣೆಯ ಮೂಲಕ ಭವಿಷ್ಯದಲ್ಲಿ ಉಂಟಾಗಬಹುದಾಗಿದ್ದ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು (1.5 ಲಕ್ಷ) ತಾಂತ್ರಿಕ ದೋಷಗಳನ್ನು ಮುಂಚಿತವಾಗಿಯೇ ಪತ್ತೆಹಚ್ಚಿ ಸರಿಪಡಿಸಲಾಗಿದ್ದು, ರಾಜ್ಯದಲ್ಲಿ ವಿದ್ಯುತ್ ವ್ಯತ್ಯಯದ ಪ್ರಮಾಣವನ್ನು ಶೇಕಡಾ 85 ರಷ್ಟು ಕಡಿತಗೊಳಿಸಲಾಗಿದೆ.
ದಟ್ಟ ಅರಣ್ಯ, ಗುಡ್ಡಗಾಡುಗಳಲ್ಲೂ 'ಡ್ರೋನ್' ನಿಗಾ:
ಕೆಪಿಟಿಸಿಎಲ್ ಬಳಸಿರುವ ಈ ವಿಶೇಷ ಡ್ರೋನ್ಗಳು ಕೇವಲ ಸಾಧಾರಣ ಕ್ಯಾಮೆರಾಗಳನ್ನಷ್ಟೇ ಹೊಂದಿಲ್ಲ. ಇವುಗಳಲ್ಲಿ ಹೈ-ರೆಸಲ್ಯೂಷನ್ ಕ್ಯಾಮೆರಾಗಳು, ಥರ್ಮಲ್ ಇಮೇಜಿಂಗ್ (ಉಷ್ಣತೆ ಅಳೆಯುವ ತಂತ್ರಜ್ಞಾನ) ಮತ್ತು ಲಿಡಾರ್ ಸೆನ್ಸಾರ್ಗಳನ್ನು ಅಳವಡಿಸಲಾಗಿದೆ.
ಮನುಷ್ಯರು ಸುಲಭವಾಗಿ ತಲುಪಲು ಸಾಧ್ಯವಿಲ್ಲದ ದಟ್ಟವಾದ ಅರಣ್ಯಗಳು, ಕಡಿದಾದ ಗುಡ್ಡಗಾಡು ಪ್ರದೇಶಗಳು ಹಾಗೂ ಜನನಿಬಿಡ ನಗರ ಪ್ರದೇಶಗಳಲ್ಲಿ ಹಾದು ಹೋಗಿರುವ ಬೃಹತ್ ವಿದ್ಯುತ್ ಟವರ್ಗಳು, ಇನ್ಸುಲೇಟರ್ಗಳು ಮತ್ತು ವಿದ್ಯುತ್ ವಾಹಕ ತಂತಿಗಳನ್ನು ಇವು ಅತಿ ಸಮೀಪದಿಂದ ಅತ್ಯಂತ ನಿಖರವಾಗಿ ತಪಾಸಣೆ ನಡೆಸಿವೆ.
ವಿದ್ಯುತ್ ತಂತಿಗಳಲ್ಲಿ ಸಡಿಲವಾದ ಸಂಪರ್ಕದಿಂದಾಗಿ ಉಂಟಾಗುವ ವಿಪರೀತ ಶಾಖ ಅಥವಾ 'ಹಾಟ್ಸ್ಪಾಟ್'ಗಳನ್ನು ಈ ಥರ್ಮಲ್ ಕ್ಯಾಮೆರಾಗಳು ಕ್ಷಣಾರ್ಧದಲ್ಲಿ ಗುರುತಿಸುತ್ತವೆ.
'ಇಂಧನ ಭವನ'ದಿಂದಲೇ ಸಂಪೂರ್ಣ ಜಾಲದ ಮೇಲ್ವಿಚಾರಣೆ:
ಡ್ರೋನ್ಗಳು ಸಂಗ್ರಹಿಸುವ ಪ್ರತಿಯೊಂದು ದತ್ತಾಂಶವೂ ನೇರವಾಗಿ ಕೆಪಿಟಿಸಿಎಲ್ ಎಂಜಿನಿಯರ್ಗಳಿಗೆ ಲಭ್ಯವಾಗುತ್ತಿದೆ. ಮುಂಬರುವ ದಿನಗಳಲ್ಲಿ ಈ ವ್ಯವಸ್ಥೆಯು 'ಡಿಜಿಟಲ್ ಟ್ವಿನ್ ಪ್ಲಾಟ್ಫಾರ್ಮ್'ನೊಂದಿಗೆ ಸಂಯೋಜನೆಗೊಳ್ಳಲಿದ್ದು, ಬೆಂಗಳೂರಿನ ನೂತನ 'ಇಂಧನ ಭವನ'ದ ಮುಖ್ಯ ನಿಯಂತ್ರಣ ಕೊಠಡಿಯಿಂದಲೇ ಇಡೀ ರಾಜ್ಯದ ವಿದ್ಯುತ್ ಜಾಲದ ಮೇಲ್ವಿಚಾರಣೆ ನಡೆಸಲು ಅನುವು ಮಾಡಿಕೊಡಲಾಗಿದೆ.
519 ರಿಂದ 73ಕ್ಕೆ ಇಳಿದ ವಿದ್ಯುತ್ ವ್ಯತ್ಯಯ ಪ್ರಕರಣಗಳು!:
ಈ ಅತ್ಯಾಧುನಿಕ ದತ್ತಾಂಶ ಆಧಾರಿತ ನಿರ್ಧಾರಗಳಿಂದಾಗಿ ರಾಜ್ಯದ ವಿದ್ಯುತ್ ಗ್ರಿಡ್ ವ್ಯವಸ್ಥೆ ಇನ್ನಷ್ಟು ಸದೃಢವಾಗಿದೆ. ಈ ಹಿಂದೆ ಇಂತಹ ಪ್ರಸರಣ ಮಾರ್ಗಗಳಲ್ಲಿ ವಾರ್ಷಿಕವಾಗಿ ಸರಾಸರಿ 519 ರಷ್ಟು ವಿದ್ಯುತ್ ವ್ಯತ್ಯಯ ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ ಡ್ರೋನ್ ತಪಾಸಣೆಯ ನಂತರ ಈ ಸಂಖ್ಯೆ ಕೇವಲ 73 ಕ್ಕೆ ಕುಸಿದಿದೆ.
ಲೈನ್ಮನ್ಗಳ ಸುರಕ್ಷತೆ ನಮಗೆ ಮುಖ್ಯ: ಎಂಡಿ
"ಸಮಸ್ಯೆ ಎದುರಾದಾಗ ದುರಸ್ತಿ ಮಾಡುವುದಕ್ಕಿಂತ, ತಾಂತ್ರಿಕ ಸಮಸ್ಯೆ ಬರುವ ಮುನ್ನವೇ ಎಚ್ಚೆತ್ತುಕೊಂಡು ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಈ ಹೊಸ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದರಿಂದ ರಾಜ್ಯದ ರೈತರು, ಕೈಗಾರಿಕೆಗಳು ಮತ್ತು ಸಾರ್ವಜನಿಕರಿಗೆ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆಯನ್ನು ಖಾತರಿಪಡಿಸಬಹುದಾಗಿದೆ. ಜೊತೆಗೆ, ಪ್ರಾಣದ ಹಂಗು ತೊರೆದು ಎತ್ತರದ ಟವರ್ಗಳನ್ನು ಏರುತ್ತಿದ್ದ ನಮ್ಮ ಲೈನ್ಮನ್ಗಳ ಸುರಕ್ಷತೆಗೂ ಇದು ಹೆಚ್ಚಿನ ಆದ್ಯತೆ ನೀಡುತ್ತದೆ".
ಡಾ. ವಿ. ರಾಮ್ ಪ್ರಸಾತ್ಮನೋಹರ್, ವ್ಯವಸ್ಥಾಪಕ ನಿರ್ದೇಶಕರು, ಕೆಪಿಟಿಸಿಎಲ್.



