ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ (ಕೆ.ಎಸ್.ಬಿಸಿ) ನಡೆದ ಚುನಾವಣೆಯಲ್ಲಿ ಹಿರಿಯ ವಕೀಲರಾದ ಶ್ರೀ ಎನ್. ಶಿವಕುಮಾರ್ ಅವರು ಭರ್ಜರಿ ಜಯಗಳಿಸುವ ಮೂಲಕ ಸತತ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ.
ಕಳೆದ ಮಾರ್ಚ್ 11, 2026 ರಂದು ರಾಜ್ಯ ವಕೀಲರ ಪರಿಷತ್ತಿಗೆ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಅತ್ಯಂತ ಪ್ರಭಾವಶಾಲಿ ಮತಗಳನ್ನು ಗಳಿಸುವ ಮೂಲಕ ಎನ್. ಶಿವಕುಮಾರ್ ಅವರು ಇಡೀ ರಾಜ್ಯದಲ್ಲೇ ದ್ವಿತೀಯ ಸ್ಥಾನವನ್ನು ಪಡೆದು ದಾಖಲೆಯ ಗೆಲುವು ಸಾಧಿಸಿದ್ದಾರೆ. ಇವರ ಈ ಐತಿಹಾಸಿಕ ಜಯಕ್ಕೆ ಚಿತ್ರದುರ್ಗ ಜಿಲ್ಲೆಯ ವಕೀಲರು ಮುಂಚೂಣಿಯಲ್ಲಿ ನಿಂತು ಅತಿ ಹೆಚ್ಚು ಮತಗಳನ್ನು ನೀಡುವ ಮೂಲಕ ಸಿಂಹಪಾಲು ಕೊಡುಗೆ ನೀಡಿದ್ದಾರೆ.
ಗೆಲುವಿಗೆ ಸಹಕಾರಿಯಾದ ಜನಪರ ಸೇವೆ:
ಹಿಂದಿನ ಅವಧಿಯಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಉಪಾಧ್ಯಕ್ಷರಾಗಿ ಯಶಸ್ವಿಯಾಗಿ ಸೇವೆ ಸಲ್ಲಿಸಿದ್ದ ಎನ್. ಶಿವಕುಮಾರ್ ಅವರು, ವಕೀಲರ ವಲಯದಲ್ಲಿ ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ. ವಿಶೇಷವಾಗಿ ಕೊರೊನಾ ಸಂಕಷ್ಟದ ಸಮಯದಲ್ಲಿ ಸಂಕಷ್ಟದಲ್ಲಿದ್ದ ಸಾವಿರಾರು ವಕೀಲ ಮಿತ್ರರಿಗೆ ಆರ್ಥಿಕ ಹಾಗೂ ಸಾಮಾಜಿಕವಾಗಿ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದರು.
ಜೊತೆಗೆ, ವಿವಿಧ ಕೆಲಸಗಳ ನಿಮಿತ್ತ ರಾಜ್ಯದ ಮೂಲೆ ಮೂಲೆಗಳಿಂದ ರಾಜಧಾನಿ ಬೆಂಗಳೂರಿಗೆ ಆಗಮಿಸುವ ವಕೀಲರಿಗೆ ಅಗತ್ಯ ಸೌಲಭ್ಯ ಹಾಗೂ ಸೌಕರ್ಯಗಳನ್ನು ಒದಗಿಸುವಲ್ಲಿ ಅವರು ನಿರಂತರವಾಗಿ ಶ್ರಮಿಸುತ್ತಾ ಬಂದಿದ್ದಾರೆ. ಅವರ ಈ ಸತ್ಕಾರ್ಯಗಳು ಮತ್ತು ವಕೀಲರ ಹಿತರಕ್ಷಣಾ ಹೋರಾಟವೇ ಇಂದು ಅವರನ್ನು ಎರಡನೇ ಬಾರಿಗೆ ಭರ್ಜರಿ ಬಹುಮತದೊಂದಿಗೆ ಪರಿಷತ್ತಿಗೆ ಆಯ್ಕೆಯಾಗುವಂತೆ ಮಾಡಿದೆ ಎಂದು ವಕೀಲರಾದ ಪ್ರತಾಪ್ ಜೋಗಿ ಎನ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎನ್. ಶಿವಕುಮಾರ್ ಅವರ ಈ ಗೆಲುವಿಗೆ ಚಿತ್ರದುರ್ಗ ಜಿಲ್ಲೆಯ ವಕೀಲರ ಸಮೂಹವು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದೆ.



