ಚಂದ್ರವಳ್ಳಿ ನ್ಯೂಸ್, ಚಾಮರಾಜನಗರ :
ಮೈಸೂರು ಪ್ರಾಂತ್ಯ ಪರಿಪೂರ್ಣವಾಗಿ ಅಭಿವೃದ್ಧಿಪಡಿಸಿ, ವಿಶ್ವ ಪ್ರಸಿದ್ಧಗೊಳಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಸಂತನಂತೆ ರಾಜತ್ವ ನಿರ್ವಹಿಸಿದ ಅಪರೂಪದ ಪ್ರಜಾ ವಾತ್ಸಲ್ಯದ ಮಹಾರಾಜರು.
ಇವರ ಸೇವೆಯನ್ನು ಪ್ರತಿನಿತ್ಯ ಸ್ಮರಿಸಿ ಗೌರವ ಸಲ್ಲಿಸುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ಶ್ರೀಗಂಧ ಕನ್ನಡ ಯುವ ವೇದಿಕೆ ಹಾಗೂ ಗಡಿನಾಡ ಕನ್ನಡಿಗ ಹೋರಾಟ ವೇದಿಕೆ ಏರ್ಪಡಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆಗಳ ಕಾರ್ಯಕ್ರಮದಲ್ಲಿ ನಾಲ್ವಡಿ ಕುರಿತು ವಿಷಯ ಮಂಡನೆ ಮಾಡುವ ಮೂಲಕ ರಾಜಶ್ರೀ ಎಂದೇ ಬಿರುದಾಂಕಿತ ನಾಲ್ವಡಿ ಕೃಷ್ಣರಾಜ ಒಡೆಯರ್ ಇಡೀ ವಿಶ್ವವೇ ಬೆರಗಾಗುವಷ್ಟು ಕಾರ್ಯವನ್ನು ಸಾಧಿಸಿದ್ದಾರೆ.
ನೀರಾವರಿ, ವಿದ್ಯುತ್,ಶಿಕ್ಷಣ, ವೈದ್ಯಕೀಯ, ರೈಲ್ವೆ,ಮಹಿಳಾ ಉನ್ನತೀಕರಣ,ಕೈಗಾರಿಕೆ,ಸಣ್ಣ ಕೈಗಾರಿಕೆ, ಗುಡಿ ಕೈಗಾರಿಕೆ, ವಸತಿ ನಿಲಯಗಳ ಸ್ಥಾಪನೆ, ರಸ್ತೆ,ಕಾಲುವೆ, ಸೇತುವೆ ನಿರ್ಮಾಣ, ಪ್ರತಿಯೊಬ್ಬರಿಗೂ ಶಿಕ್ಷಣ, ವಿಶ್ವವಿದ್ಯಾಲಯ ಸ್ಥಾಪನೆ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ ಮಹಿಳಾ ಮತ್ತು ದಲಿತ ಕಲ್ಯಾಣ, ಮೀಸಲಾತಿ, ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಶಿಲ್ಪಕಲೆ, ದೇವಾಲಯಗಳ ನಿರ್ಮಾಣ, ಚಿತ್ರಕಲೆ, ಹತ್ತು ಹಲವು ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಕೊಡುಗೆ ನೀಡುವ ಮೂಲಕ ಶ್ರೇಷ್ಠ ಕಾರ್ಯವನ್ನು ಸಾಧಿಸಿ ಶತಮಾನಗಳಷ್ಟು ಅಭಿವೃದ್ಧಿಯನ್ನು ಸಾಧಿಸಿ ಜಗತ್ತೆ ಮೈಸೂರಿನ ಕಡೆಗೆ ನೋಡುವಂತೆ ಮಾಡಿದ ಹೆಮ್ಮೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಯೊಬ್ಬರಿಗೂ ಆದರ್ಶವಾಗಿದ್ದಾರೆ.
ಸಂತನಂತೆ ರಾಜತ್ವದ ಮೂಲಕ ಸಮಗ್ರ ಪರಿಪೂರ್ಣ ಆಡಳಿತವನ್ನು ನೀಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ದಿವಾನರಾಗಿ ಸೇವೆ ಸಲ್ಲಿಸಿದ ಸರ್ ಎಂ ವಿಶ್ವೇಶ್ವರಯ್ಯನವರು ಹಾಗೂ ಮಿರ್ಜಾ ಇಸ್ಮಾಯಿಲ್ ರವರ ಪೂರ್ಣ ಸೇವೆ ಹಾಗೂ ಅಭಿವೃದ್ಧಿ ಮೈಸೂರು ಪ್ರಾಂತ್ಯವನ್ನು ಮುನ್ನಡೆಸಲು ಸಾಧ್ಯವಾಯಿತು. ಮೈಸೂರು ಪ್ರಾಂತ್ಯದ ಭಾಗವಾಗಿದ್ದ ಚಾಮರಾಜನಗರ ಜನತೆ ಮೈಸೂರು ರಾಜಮನೆತನಕ್ಕೆ ಸದಾ ಋಣಿಯಾಗಿದ್ದಾರೆ. ಚಾಮರಾಜನಗರ ಮೈಸೂರು ಮಹಾರಾಜರ ಸವಿ ನೆನಪಿನಲ್ಲಿ ನಿರ್ಮಿಸಿದ ನಗರವಾಗಿದ್ದು ಇಂದು ಜಿಲ್ಲಾ ಕೇಂದ್ರವಾಗಿ ತನ್ನದೇ ಆದ ಛಾಪು ಮೂಡಿಸಲು ಕಾರಣವಾಗಿದೆ. ನಾಲ್ವಡಿ ಅವರನ್ನು ಸ್ಮರಿಸುವುದೇ ಪುಣ್ಯದ ಕೆಲಸವೆಂದು ತಿಳಿಸಿದರು.
ಉದ್ಯಮಿ ಶ್ರೀನಿಧಿ ಕುದರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮೈಸೂರು ಮಹಾರಾಜರ ಕೊಡುಗೆಗಳು ಅಪಾರವಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಮೀಸಲಾತಿಯನ್ನು ನೀಡುವ ಮೂಲಕ ಸರ್ವರ ಅಭಿವೃದ್ಧಿಗೆ, ಕಲ್ಯಾಣಕ್ಕೆ ಶ್ರಮಿಸಿದ ಮಹಾನ್ ವ್ಯಕ್ತಿತ್ವ.ಅವರ ಕುರಿತು ಕಾರ್ಯಕ್ರಮ ರೂಪಿಸಿರುವ ಸರ್ವರು ಅಭಿನಂದನೆಗೆ ಅರ್ಹರು ಎಂದು ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ಕನ್ನಡ ಸಂಘಟನೆಯ ಮುಖಂಡರಾದ ಶ್ರೀನಿವಾಸ್ ಗೌಡ ಮಾತನಾಡಿ ಅರಿ ಕೊಠಾರವಾಗಿದ್ದ ನಗರವನ್ನು ಚಾಮರಾಜನಗರ ವೆಂದು ಪುನರ್ ಪ್ರತಿಷ್ಠಾಪಿಸಿ ದೇವಾಲಯವನ್ನು ನಿರ್ಮಿಸಿ ಸಮಗ್ರ ಅಭಿವೃದ್ಧಿಗೆ ಕೊಡುಗೆಯಾಗಿ ನೀಡಿದ ಮಹಾರಾಜರನ್ನು ನಾವೆಲ್ಲರೂ ಗೌರವಿಸಬೇಕು. ಮೈಸೂರು ಸಂಸ್ಥಾನದ ಚಾಮರಾಜ ಒಡೆಯರ್ ಅವರ ಹೆಸರಿನಲ್ಲಿ ನಿರ್ಮಾಣವಾಗಿರುವ ಚಾಮರಾಜನಗರ ಇಂದು ಸಮಗ್ರ ಅಭಿವೃದ್ಧಿಯನ್ನು ಸಾಧಿಸುವ ದಿಕ್ಕಿನಲ್ಲಿ ಹೋಗುತ್ತಿದೆ ಎಂದು ತಿಳಿಸಿದರು.
ಶ್ರೀಗಂಧ ಕನ್ನಡ ಯುವ ವೇದಿಕೆಯ ಅಧ್ಯಕ್ಷರಾದ ರವಿಚಂದ್ರ ಪ್ರಸಾದ್ ಕಹಳೆರವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜೀವನ ಮತ್ತು ಸಾಧನೆಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ಚಾಮರಾಜನಗರ ಜನತೆ ಮೈಸೂರು ಸಂಸ್ಥಾನಕ್ಕೆ ಸದಾಕಾಲ ಸ್ಮರಿಸಿ ಕೊಳ್ಳುವ ಮೂಲಕ ಅವರಿಗೆ ಗೌರವ ಸಲ್ಲಿಸುತ್ತಿದ್ದೇವೆ ಎಂದರು.
ಸಭೆಯಲ್ಲಿ ಕನ್ನಡ ಚಳುವಳಿಯ ಹಿರಿಯ ಮುಖಂಡರಾದ ಶಾ ಮುರಳಿ , ಕೊಳ್ಳೇಗಾಲ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೊಂಗರಹಳ್ಳಿ ನಾಗರಾಜು ಕನ್ನಡ ಹೋರಾಟಗಾರ ಪಣ್ಯದಹುಂಡಿ ರಾಜು, ಗಡಿನಾಡ ಹೋರಾಟ ವೇದಿಕೆ ಜಿಲ್ಲಾಧ್ಯಕ್ಷ ರಾಜಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಶಿವಲಿಂಗ ಮೂರ್ತಿ, ಬಿಕೆ ಆರಾಧ್ಯ,ಸರಸ್ವತಿ,ಪದ್ಮಾಕ್ಷಿ, ಪದ್ಮ ಸಿದ್ದರಾಜು, ಲೋಕನಾಥ್, ಅಮಚವಾಡಿ ಮಹೇಂದ್ರ,ಗೋವಿಂದ, ಬದ್ರಿ ಮಹಮ್ಮದ್ ಗೌಸ್, ಯರಿಯೂರು ನಾಗರಾಜ್, ತಾಂಡವಮೂರ್ತಿ, ಪರಮೇಶ್ವರ್ ಯೋಗೇಶ್ ಇದ್ದರು.
ಅಪ್ಪು ಮೆಲೋಡಿಸ್ ಕಾಗಲ ವಾಡಿ ರಂಗಸ್ವಾಮಿ ರವರು ಮೈಸೂರು ಸಂಸ್ಥಾನದ ಒಡೆಯರ ಹಾಗೂ ಕನ್ನಡ ಗೀತೆಗಳ ಗಾಯನದ ಮೂಲಕ ರಸದೌತಣ ನೀಡಿದರು.



