ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜಧಾನಿಯಲ್ಲಿ ಕೇವಲ ಒಂದು ಗಂಟೆ ಸುರಿದ ಭಾರಿ ಮಳೆಗೆ ರಸ್ತೆಗಳು ನದಿಗಳಂತಾಗಿ ಸಾರ್ವಜನಿಕರ ಜೀವನ ಅಸ್ತವ್ಯಸ್ತಗೊಂಡ ಬೆನ್ನಲ್ಲೇ, ಜೆಡಿಎಸ್ ಪಕ್ಷವು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದೆ. ನಗರದ ಮೂಲಸೌಕರ್ಯ ನಿರ್ವಹಣೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಜೆಡಿಎಸ್ ನೇರ ಆರೋಪ ಮಾಡಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸರಣಿ ಟೀಕೆ ಮಾಡಿರುವ ಜೆಡಿಎಸ್, ಬಿಬಿಎಂಪಿ ಹಾಗೂ ಸರ್ಕಾರದ ಆಡಳಿತ ವೈಖರಿಯನ್ನು ತರಾಟೆಗೆ ತೆಗೆದುಕೊಂಡಿದೆ.
ರಸ್ತೆಗಳು ನದಿಗಳು, ಜನರಿಗೆ ನರಕದರ್ಶನ!
"ಬೆಂಗಳೂರಿನಲ್ಲಿ ಕೇವಲ ಒಂದು ಗಂಟೆ ಸುರಿದ ಮಳೆಗೆ ರಸ್ತೆಗಳು ನದಿಗಳಂತಾಗಿ ಮಾರ್ಪಟ್ಟಿವೆ. ಇದೇನಾ ನೀವು ದಿನರಾತ್ರಿ ಜಪಿಸುವ 'ಬ್ರ್ಯಾಂಡ್ ಬೆಂಗಳೂರು' ಡೀಕೆ ಶಿವಕುಮಾರ್ ಅವರೇ?" ಎಂದು ಜೆಡಿಎಸ್ ನೇರವಾಗಿ ಪ್ರಶ್ನಿಸಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ನೀರು ನಿಂತು ಸಾರ್ವಜನಿಕರು ಮತ್ತು ವಾಹನ ಸವಾರರು ಎದುರಿಸುತ್ತಿರುವ ತೊಂದರೆಗಳನ್ನು ಉಲ್ಲೇಖಿಸಿ, "ನಿಮ್ಮ ಸಿಎಂ ಕನಸಿನ ಜಪದ ಮಧ್ಯೆ ಬೆಂಗಳೂರಿನ ಜನತೆಗೆ ಮಾತ್ರ ದಿನನಿತ್ಯ ನರಕದರ್ಶನವಾಗುತ್ತಿದೆ" ಎಂದು ಲೇವಡಿ ಮಾಡಿದೆ.
'ಗುಂಡಿಗಳ ಪಿತಾಮಹ'
ಖಾರವಾಗಿ ಟೀಕಿಸಿರುವ ಜೆಡಿಎಸ್, "ನಿಮ್ಮನ್ನು ಗ್ರೇಟರ್ ಬೆಂಗಳೂರಿನ ಪಿತಾಮಹ ಎನ್ನುವುದಕ್ಕಿಂತ 'ಗುಂಡಿಗಳ ಪಿತಾಮಹ' ಎನ್ನುವುದೇ ಹೆಚ್ಚು ಸೂಕ್ತ" ಎಂದು ಡಿ.ಕೆ. ಶಿವಕುಮಾರ್ ಅವರಿಗೆ ಹೊಸ ನಾಮಕರಣ ಮಾಡಿದೆ. ನಗರದ ರಸ್ತೆಗಳ ದುಃಸ್ಥಿತಿ ಮತ್ತು ಗುಂಡಿಗಳನ್ನು ಮುಚ್ಚದ ಬಿಬಿಎಂಪಿಯ ಬೇಜವಾಬ್ದಾರಿತನಕ್ಕೆ ಸಚಿವರೇ ನೇರ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಮೂರು ವರ್ಷಗಳಲ್ಲಿ ಕನಿಷ್ಠ ನಿರ್ವಹಣೆಯೂ ಇಲ್ಲ:
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳಾಗುತ್ತಾ ಬಂದರೂ ನಗರದ ಕನಿಷ್ಠ ಮೂಲಸೌಕರ್ಯಗಳ ನಿರ್ವಹಣೆಯನ್ನೂ ಮಾಡಲು ಸಾಧ್ಯವಾಗಿಲ್ಲ. ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಡಿ.ಕೆ. ಶಿವಕುಮಾರ್ ಅವರು ಮತ್ತು ಒಟ್ಟಾರೆ ಕಾಂಗ್ರೆಸ್ ಸರ್ಕಾರ ನಗರದ ಅಭಿವೃದ್ಧಿಯಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಜೆಡಿಎಸ್ ಆರೋಪಿಸಿದೆ.
ಮಳೆಗಾಲದ ಮುನ್ನವೇ ಕೈಗೊಳ್ಳಬೇಕಾಗಿದ್ದ ರಾಜಕಾಲುವೆ ಹೂಳೆತ್ತುವ ಕಾಮಗಾರಿ ಹಾಗೂ ರಸ್ತೆ ದುರಸ್ತಿ ಕಾರ್ಯಗಳು ಕಾಗದಕ್ಕಷ್ಟೇ ಸೀಮಿತವಾಗಿದ್ದರಿಂದ ಇಂದು ಸಿಲಿಕಾನ್ ಸಿಟಿ ಜನತೆ ಮಳೆಗೆ ಕಣ್ಣೀರು ಹಾಕುವಂತಾಗಿದೆ ಎಂದು ಜೆಡಿಎಸ್ ಪ್ರಕಟಣೆಯಲ್ಲಿ ತಿಳಿಸಿದೆ.



