ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಎದುರಾಗಿರುವ ವಿದ್ಯುತ್ ಸಬ್ಸ್ಟೇಷನ್ಗಳ ವಿಳಂಬ, ಮಳೆ ಅಭಾವದಿಂದ ರೈತರಿಗಾಗಿರುವ ತೊಂದರೆ ಹಾಗೂ ವಲಸೆ ತಡೆಯುವ ಕುರಿತು ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಗಮನ ಸೆಳೆದರು.
ಚಿತ್ರದುರ್ಗ ನಗರದ ಮರುಘಾಮಠದ ಅನುಭವ ಮಂಟಪದಲ್ಲಿ ಶನಿವಾರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಬೆಂಗಳೂರು ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಕಳೆದ ಮಾರ್ಚ್ ತಿಂಗಳಲ್ಲಿ ಅಂದಿನ ಇಂಧನ ಸಚಿವರಾದ ಕೆ.ಜೆ. ಜಾರ್ಜ್ ಅವರು ಸಭೆ ನಡೆಸಿ, ಶೇ.90 ರಷ್ಟು ಕಾಮಗಾರಿ ಪೂರ್ಣಗೊಂಡಿರುವ ಸಬ್ಸ್ಟೇಷನ್ಗಳನ್ನು 10 ದಿನಗಳಲ್ಲಿ ಚಾರ್ಜ್ ಮಾಡುವುದಾಗಿ ತಿಳಿಸಿದ್ದರು. ಆದರೆ 14 ತಿಂಗಳು ಕಳೆದರೂ, ಶೇ.95 ಕಾಮಗಾರಿ ಮುಗಿದಿದ್ದರೂ ಸಬ್ಸ್ಟೇಷನ್ಗಳನ್ನು ಚಾರ್ಜ್ ಮಾಡಿಲ್ಲ. ಇದರಿಂದ ವೋಲ್ಟೇಜ್ ಸಮಸ್ಯೆ ಹಾಗೂ ಟ್ರಾನ್ಸ್ಫಾರ್ಮರ್ಗಳ ಕೊರತೆಯಿಂದಾಗಿ ಬೋರ್ವೆಲ್ಗಳಿಗೆ ಸರಿಯಾಗಿ ವಿದ್ಯುತ್ ನೀಡಲು ಸಾಧ್ಯವಾಗುತ್ತಿಲ್ಲ ಎಂದರು.
ಮಳೆ ಅಭಾವದಿಂದ ಈ ಭಾಗದಲ್ಲಿ ಶೇ. 37 ರಷ್ಟು ಮಾತ್ರ ಬಿತ್ತನೆಯಾಗಿದೆ. ಇನ್ನು ಮುಂದೆ ಮಳೆ ಬಂದರೂ ರೈತರು ಬೆಳೆ ಬೆಳೆಯಲು ಸಾಧ್ಯವಿಲ್ಲ. ಹೀಗಾಗಿ ಸರ್ಕಾರ ತಕ್ಷಣ 'ರ್ಯಾಷನಲೈಜೇಶನ್' (ವೈಜ್ಞಾನಿಕ ಪರಿಶೀಲನೆ) ಮಾಡಿ ಅತಿ ಸಣ್ಣ ಹಾಗೂ ಸಣ್ಣ ರೈತರಿಗೆ, ಬೆಳೆ ನಷ್ಟ ಅನುಭವಿಸಿದವರಿಗೆ ವಿಶೇಷ ಪರಿಹಾರ ಅಥವಾ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ವಿನಂತಿಸಿದರು.
ಕೃಷಿ ಚಟುವಟಿಕೆಗಳು ಇಲ್ಲದಿರುವುದರಿಂದ ಜನರು ಬೆಂಗಳೂರು, ಹೈದರಾಬಾದ್ನಂತಹ ಮಹಾನಗರಗಳಿಗೆ ಉದ್ಯೋಗ ಅರಸಿ ವಲಸೆ ಹೋಗುತ್ತಿದ್ದಾರೆ. ಹಳ್ಳಿಗಳಲ್ಲಿ ಮನೆಗಳು ಖಾಲಿಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಪಂಚಾಯತ್ ಸದಸ್ಯರು ಇಲ್ಲದಿರುವುದು ಸಮಸ್ಯೆಯನ್ನು ಮತ್ತಷ್ಟು ತೀವ್ರಗೊಳಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ಬಾರಿಯ ಬರಗಾಲದಲ್ಲಿ ಕೆರೆ-ಕಟ್ಟೆಗಳಲ್ಲಿ ಒಂದು ಹನಿ ನೀರೂ ಇಲ್ಲ. ಆದ್ದರಿಂದ ವಿಬಿ ಜಿ ರಾಮ್ ಜಿ ಯೋಜನೆ ಅಡಿಯಲ್ಲಿ ಕೆರೆ-ಕಟ್ಟೆಗಳನ್ನು ಅಭಿವೃದ್ಧಿಪಡಿಸುವ ಹಾಗೂ ಹೂಳೆತ್ತುವ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಇದರಿಂದ ಮುಂದಿನ ವರ್ಷ ಮಳೆ ಬಂದಾಗ ನೀರು ಸಂಗ್ರಹಿಸಲು ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.
ರೈತರಿಗೆ ತಕ್ಷಣವೇ ಬೆಳೆ ವಿಮೆ ಸಿಗುವಂತೆ ಕ್ರಮವಹಿಸಬೇಕು. ಜಿಪಂ ಸಿಇಒ ಹಾಗೂ ಜಿಲ್ಲಾಧಿಕಾರಿಗಳು ಈ ಪರಿಸ್ಥಿತಿಯ ಕುರಿತು ತಕ್ಷಣ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಬೇಕೆಂದು ಒತ್ತಾಯಿಸಿದರು.



