ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ವೈಜ್ಞಾನಿಕ ಆಧಾರವಿಲ್ಲದೆ ಪೋಸ್ಟ್ಗಳನ್ನು ಹಾಕಿ ಸಾರ್ವಜನಿಕರಲ್ಲಿ ಭೀತಿ ಸೃಷ್ಟಿಸುವುದರ ವಿರುದ್ಧ ಕರ್ನಾಟಕ ಹೈಕೋರ್ಟ್ತೀವ್ರ ಕಳವಳ ವ್ಯಕ್ತಪಡಿಸಿದೆ. ಪ್ರಸಿದ್ಧ 'ನಂದಿನಿ' ಡೈರಿ ಉತ್ಪನ್ನಗಳ ಬಗ್ಗೆ ಇನ್ಸ್ಟಾಗ್ರಾಂ ರೀಲ್ಸ್ ಮೂಲಕ ತಪ್ಪು ಮಾಹಿತಿ ಹರಡಿದ ಆರೋಪ ಎದುರಿಸುತ್ತಿರುವ ಬೆಂಗಳೂರಿನ ಚರ್ಮರೋಗ ತಜ್ಞೆ ಡಾ. ಶರಣ್ಯ ಪದ್ಮಾ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳಿಗೆ ತಡೆ ನೀಡಲು ನ್ಯಾಯಾಲಯ ಸೋಮವಾರ ನಿರಾಕರಿಸಿದೆ.
ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಡಾ. ಶರಣ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ವೈದ್ಯರ ಧೋರಣೆಯನ್ನು ತರಾಟೆಗೆ ತೆಗೆದುಕೊಂಡಿತು. ಅಲ್ಲದೆ, ಈ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ದೂರುದಾರ ಸಂಸ್ಥೆಯಾದ ಕರ್ನಾಟಕ ಹಾಲು ಒಕ್ಕೂಟಕ್ಕೆ (ಕೆಎಂಎಫ್) ನೋಟಿಸ್ ಜಾರಿ ಮಾಡಿ, ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.
ಪ್ರಕರಣದ ಹಿನ್ನೆಲೆ ಏನು?:
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಾ, ಕೋಲಾರದ ಮಾಲೂರಿನಲ್ಲಿ ಕ್ಲಿನಿಕ್ ಹೊಂದಿರುವ ಡಾ. ಶರಣ್ಯ ಪದ್ಮಾ ಅವರು ಇನ್ಸ್ಟಾಗ್ರಾಂ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ರೀಲ್ಸ್ಗಳನ್ನು ಅಪ್ಲೋಡ್ ಮಾಡಿದ್ದರು.
ನಂದಿನಿ ಸಂಸ್ಥೆಯ ಸ್ಟ್ರಾಬೆರಿ ಫ್ಲೇವರ್ ಹಾಲು ಮತ್ತು ಇತರ ಕೆಲವು ಪಾನೀಯಗಳು ವಿಷಕಾರಿ ರಾಸಾಯನಿಕಗಳನ್ನು ಒಳಗೊಂಡಿದ್ದು, ಆರೋಗ್ಯಕ್ಕೆ ಹಾನಿಕರ ಹಾಗೂ ಸೇವನೆಗೆ ಸುರಕ್ಷಿತವಲ್ಲ ಎಂದು ಅವರು ಹೇಳಿದ್ದರು.
ದೂರು: ಇದು ಕೆಎಂಎಫ್ಸಂಸ್ಥೆಯ ಘನತೆಗೆ ಧಕ್ಕೆ ತರುವ ಮತ್ತು ಸಾರ್ವಜನಿಕರನ್ನು ದಾರಿ ತಪ್ಪಿಸುವ ಉದ್ದೇಶಪೂರ್ವಕ ಕೃತ್ಯ ಎಂದು ಆರೋಪಿಸಿ ಕೆಎಂಎಫ್ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು. ಇದರ ಆಧಾರದ ಮೇಲೆ ಪೊಲೀಸರು ವೈದ್ಯರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.
ಕೋರ್ಟ್ನಲ್ಲಿ ನಡೆದ ವಾದ-ಪ್ರತಿವಾದ:
ವಿಚಾರಣೆ ವೇಳೆ ಡಾ. ಶರಣ್ಯ ಪರ ವಕೀಲರು ವಾದ ಮಂಡಿಸಿ, "ನನ್ನ ಕಕ್ಷಿದಾರರು ಕೇವಲ ಸ್ಟ್ರಾಬೆರಿ ಫ್ಲೇವರ್ ಹಾಲಿನ ಬಗ್ಗೆ ಮಾತ್ರ ವಿಶ್ಲೇಷಣೆ ಮಾಡಿದ್ದಾರೆಯೇ ಹೊರತು, ಒಟ್ಟಾರೆ ನಂದಿನಿ ಹಾಲಿನ ಬಗ್ಗೆ ಯಾವುದೇ ತಪ್ಪು ಹೇಳಿಕೆ ನೀಡಿಲ್ಲ" ಎಂದು ಸಮರ್ಥಿಸಿಕೊಳ್ಳಲು ಯತ್ನಿಸಿದರು.
ಆದರೆ ಈ ವಾದವನ್ನು ಒಪ್ಪದ ನ್ಯಾಯಮೂರ್ತಿಗಳು ವೈದ್ಯರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸಾಲು ಸಾಲು ಪ್ರಶ್ನೆಗಳನ್ನು ಹಾಕಿದರು.
ನ್ಯಾಯಾಲಯದ ಪ್ರಮುಖ ಪ್ರಶ್ನೆಗಳು:
"ನಂದಿನಿ ಹಾಲು ಒಳ್ಳೆಯದಲ್ಲ ಎಂದು ಹೇಳಲು ನಿಮ್ಮ ಬಳಿ ಇರುವ ಆಧಾರವೇನು? ನೀವು ಅದನ್ನು ಯಾವುದಾದರೂ ಪ್ರಯೋಗಾಲಯದಲ್ಲಿ ಪರೀಕ್ಷಿಸಿದ್ದೀರಾ? ನಿಮ್ಮ ಬಳಿ ಪ್ರಮಾಣಪತ್ರವಿದೆಯೇ?".
"ಪರಿಶೀಲನೆ ನಡೆಸದೆ ಇಂತಹ ಗಂಭೀರ ವಿಷಯವನ್ನು ಮೊದಲು ಸರ್ಕಾರಕ್ಕೆ ತಿಳಿಸುವುದನ್ನು ಬಿಟ್ಟು ನೇರವಾಗಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ಏಕೆ? ಇನ್ಸ್ಟಾಗ್ರಾಂ ಇರುವುದು ಇಂತಹ ಕೆಲಸಗಳಿಗಾಗಿಯೇ?".
"'ನಕಲಿ ಹಾಲು' ಎಂದರೆ ನಿಮ್ಮ ಪ್ರಕಾರ ಅರ್ಥವೇನು? ನಿಮಗೆ ಆ ಉತ್ಪನ್ನ ಇಷ್ಟವಿಲ್ಲದಿದ್ದರೆ ಕುಡಿಯುವುದನ್ನು ಬಿಟ್ಟುಬಿಡಿ. ಆದರೆ ಈ ರೀತಿ ಸಾರ್ವಜನಿಕರಲ್ಲಿ ಅನಗತ್ಯ ಭೀತಿ ಹುಟ್ಟಿಸುವುದು ಸರಿಯಲ್ಲ."
'ಇನ್ಸ್ಟಾಗ್ರಾಂ ಇರುವುದು ಸಮಾಜದಲ್ಲಿ ಗೊಂದಲ ಸೃಷ್ಟಿಸುವುದಕ್ಕಲ್ಲ': ಸಾಮಾಜಿಕ ಮಾಧ್ಯಮಗಳ ದುರ್ಬಳಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ನ್ಯಾಯಾಧೀಶರು, "ಇತ್ತೀಚಿನ ದಿನಗಳಲ್ಲಿ ಯಾವುದೇ ಜವಾಬ್ದಾರಿ ಇಲ್ಲದೆ ತಕ್ಷಣವೇ ಇಂತಹ ಹೇಳಿಕೆಗಳನ್ನು ನೀಡಿ ಸಮಾಜದಲ್ಲಿ ಸಮಸ್ಯೆ ಹಾಗೂ ಗೊಂದಲ ಸೃಷ್ಟಿಸಲಾಗುತ್ತಿದೆ. ಇನ್ಸ್ಟಾಗ್ರಾಂ ಇರುವುದು ಅದಕ್ಕಾಗಿ ಅಲ್ಲ" ಎಂದು ಖಡಕ್ ಆಗಿ ನುಡಿದರು. ಸದ್ಯಕ್ಕೆ ವೈದ್ಯರ ಮೇಲಿನ ಕಾನೂನು ಪ್ರಕ್ರಿಯೆಗೆ ತಡೆ ನೀಡಲು ನಿರಾಕರಿಸಿರುವ ಕೋರ್ಟ್, ಮುಂದಿನ ವಿಚಾರಣೆಯನ್ನು ಮುಂದೂಡಿದೆ.



