ಚಂದ್ರವಳ್ಳಿ ನ್ಯೂಸ್, ಮೈಸೂರು:
ಸರ್ಕಾರದ ಸುತ್ತೋಲೆ ಹಾಗೂ ಇಲಾಖೆಯ ಸ್ಪಷ್ಟ ನಿರ್ದೇಶನಗಳನ್ನು ಗಾಳಿಗೆ ತೂರಿ, ಕೋರ್ಟ್ ಡಿಕ್ರಿಯ ಹೆಸರಿನಲ್ಲಿ ಅಕ್ರಮವಾಗಿ 24 ನಿವೇಶನಗಳನ್ನು ನೋಂದಣಿ ಮಾಡಿದ ಆರೋಪದ ಮೇಲೆ ಮೈಸೂರು ಪಶ್ಚಿಮ ಉಪ ನೋಂದಣಿ ಕಚೇರಿಯ ಸಬ್ ರಿಜಿಸ್ಟರ್ ಎನ್. ಶ್ರೀಕಾಂತ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ನೋಂದಣಿ ಮಹಾ ಪರಿವೀಕ್ಷಕರು ಮತ್ತು ಶಿಸ್ತು ಪ್ರಾಧಿಕಾರ ಈ ಆದೇಶ ಹೊರಡಿಸಿದ್ದು, ಶ್ರೀಕಾಂತ್ ವಿರುದ್ಧ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಲಾಗಿದೆ.
ಪ್ರಕರಣದ ಹಿನ್ನೆಲೆ ಏನು?
ಕಳೆದ ಡಿಸೆಂಬರ್ನಲ್ಲಿ ಮೈಸೂರು ತಾಲೂಕಿನ ಕೇರ್ಗಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ತಮಗೆ ಸೇರಿದ 24 ನಿವೇಶನಗಳನ್ನು ಅಕ್ರಮವಾಗಿ ಬೇರೆಯವರ ಹೆಸರಿಗೆ ನೋಂದಣಿ ಮಾಡಲಾಗುತ್ತಿದೆ ಎಂದು ಮಾಜಿ ಎಂಎಲ್ ಸಿ ಸಿದ್ಧರಾಜು ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಅಧಿಕಾರಿಗಳು ಮತ್ತು ಸಿಬ್ಬಂದಿ ಶಾಮೀಲಾಗಿ ದಾಖಲೆಗಳನ್ನು ತಿದ್ದುಪಡಿ ಮಾಡಿದ್ದಾರೆ ಎಂದು ಅವರು ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಲ್ಲದೆ, ಸರ್ಕಾರದ ಮಟ್ಟದಲ್ಲೂ ಹೋರಾಟ ನಡೆಸಿದ್ದರು.
ತನಿಖೆಯಲ್ಲಿ ಬಯಲಾದ ಅಕ್ರಮದ ಹಾದಿ:
ಜಿಲ್ಲಾ ನೋಂದಣಾಧಿಕಾರಿಗಳು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಸಬ್ ರಿಜಿಸ್ಟರ್ ಶ್ರೀಕಾಂತ್ ಅವರು ಅನುಸರಿಸಿದ ಅಕ್ರಮ ಮಾರ್ಗಗಳು ಪತ್ತೆಯಾಗಿವೆ.
ಸಬ್ ಆರ್ಟಿಕಲ್ ದುರ್ಬಳಕೆ: ದಾಖಲೆಗಳನ್ನು ಅಪ್ಲೋಡ್ ಮಾಡುವಾಗ 'ಆರ್ಟಿಕಲ್ ಸೇಲ್' ಎಂದು ನಮೂದಿಸಿ, ಸಬ್ ಆರ್ಟಿಕಲ್ನಲ್ಲಿ 'ಸಿವಿಲ್ ನ್ಯಾಯಾಲಯದ ತೀರ್ಪು ಅಥವಾ ಅಂತಿಮ ಆದೇಶ' ಎಂದು ಆಯ್ಕೆ ಮಾಡಿಕೊಳ್ಳಲಾಗಿತ್ತು.
ಇ-ಸ್ವತ್ತು ಕಡೆಗಣನೆ: ನಿಯಮದಂತೆ ಇ-ಸ್ವತ್ತು ತಂತ್ರಾಂಶದ ಮೂಲಕ ಮಾಹಿತಿ ಪಡೆಯಬೇಕಿದ್ದರೂ, ಅದನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ.
ಸಾಕ್ಷ್ಯ ನಾಶದ ಭೀತಿ: ಶ್ರೀಕಾಂತ್ ಅವರು ಅದೇ ಕಚೇರಿಯಲ್ಲಿ ಮುಂದುವರಿದರೆ ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಸಾಧ್ಯತೆ ಇರುವುದರಿಂದ, ಅವರ ಲೀನ್ ಅನ್ನು ಕೇಂದ್ರ ಕಚೇರಿಗೆ ವರ್ಗಾಯಿಸಲಾಗಿದೆ.
ಕಠಿಣ ಷರತ್ತುಗಳು:
ಅಮಾನತಿನ ಅವಧಿಯಲ್ಲಿ ಶ್ರೀಕಾಂತ್ ಅವರು ಪ್ರಾಧಿಕಾರದ ಪೂರ್ವಾನುಮತಿ ಪಡೆಯದೆ ಕೇಂದ್ರ ಸ್ಥಾನವನ್ನು ಬಿಟ್ಟು ತೆರಳುವಂತಿಲ್ಲ ಎಂದು ಆದೇಶದಲ್ಲಿ ಸೂಚಿಸಲಾಗಿದೆ. ಪ್ರಭಾವಿ ರಾಜಕಾರಣಿಯೊಬ್ಬರ ನಿವೇಶನಗಳನ್ನೇ ಗುರಿಯಾಗಿಸಿಕೊಂಡು ನಡೆದ ಈ ಅಕ್ರಮ ನೋಂದಣಿ ದಂಧೆ ಈಗ ಮೈಸೂರು ಕಂದಾಯ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ.


