ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಭಾಷೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರಘುನಾಥಪುರ ಗ್ರಾಮದಲ್ಲಿ ಕುಡಿಯುವ ನೀರಿನ ತೀವ್ರ ಅಭಾವವಿರುವ ನಡುವೆಯೇ ಖಾಸಗಿ ಇನ್ಫಾ ಸಿಟಿ ಒನ್ ಲೇಔಟ್ಗೆ ಗ್ರಾಮದಿಂದ ನೀರು ಪೂರೈಸುತ್ತಿರುವುದನ್ನು ಖಂಡಿಸಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಮಾರು 200ಕ್ಕೂ ಹೆಚ್ಚು ಮನೆಗಳು ಹಾಗೂ 2,000ಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ರಘುನಾಥಪುರ ಗ್ರಾಮದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. ಗ್ರಾಮಸ್ಥರು ನಿತ್ಯ ಟ್ಯಾಂಕರ್ಗಳ ಮೂಲಕ ನೀರು ಖರೀದಿಸಿ ಜೀವನ ನಡೆಸುವಂತಾಗಿದ್ದು, ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದ್ದಾರೆ.
ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿಯೇ ಗ್ರಾಮಸ್ಥರ ಒಪ್ಪಿಗೆ ಪಡೆಯದೆ ಖಾಸಗಿ ಇನ್ಫಾ ಸಿಟಿ ಒನ್ ಲೇಔಟ್ಗೆ ಗ್ರಾಮದ ನೀರನ್ನು ಪೂರೈಸಲಾಗುತ್ತಿದೆ. ಸಾರ್ವಜನಿಕರ ಅಗತ್ಯಗಳಿಗೆ ಮೀಸಲಾದ ನೀರನ್ನು ಖಾಸಗಿ ಲೇಔಟ್ಗೆ ಬಳಸುತ್ತಿರುವುದು ಸಮಂಜಸವಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲೇಔಟ್ಗೆ ಅಗತ್ಯವಾದ ಅನುಮೋದನೆ, ಡಿಸಿ ಕನ್ವರ್ಷನ್ ಸೇರಿದಂತೆ ಎಲ್ಲ ಕಾನೂನುಬದ್ಧ ಅನುಮತಿಗಳು ಇದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬೇಕು. ಗ್ರಾಮದಲ್ಲೇ ಕುಡಿಯುವ ನೀರಿನ ಕೊರತೆ ಇರುವ ಸಂದರ್ಭದಲ್ಲಿ ಖಾಸಗಿ ಲೇಔಟ್ಗೆ ನೀರು ಪೂರೈಸುತ್ತಿರುವ ಕ್ರಮದ ಹಿಂದೆ ಯಾರ ಒತ್ತಡವಿದೆ ಎಂಬುದನ್ನೂ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಗ್ರಾಮದ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವುದರ ಜೊತೆಗೆ ಇನ್ಫಾ ಸಿಟಿ ಒನ್ ಲೇಔಟ್ಗೆ ನೀಡುತ್ತಿರುವ ನೀರು ಪೂರೈಕೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಭಾಷೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಸೇರಿದಂತೆ ಹೋರಾಟ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಆರ್ ಎನ್ ಶ್ರೀನಿವಾಸ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು, ಆರ್ ಎಂ ಮಹಾದೇವ್ ಕನ್ನಡಪರ ಹೋರಾಟಗಾರರು, ಆರ್ಎನ್ ಚಿನ್ನಪ್ಪ, ನರಸಿಂಹಮೂರ್ತಿ, ಓಬಳಪ್ಪ, ದಾಸೇಗೌಡ, ಆರ್ ಜಿ ರವಿಕುಮಾರ್, ನವೀನ್ ಪಾಟೇಲ್ ಮಾಜಿ ಗ್ರಾಮ್ ಪಂಚಾಯಿತಿ ಸದಸ್ಯರು, ಆರ್ಎನ್ ಬಾಲಪ್ಪ, ಮತ್ತಿತರರು ಗ್ರಾಮಸ್ಥರು ಭಾಗವಹಿಸಿದ್ದರು.



