ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
"ರಾಜ್ಯದ ಮುಖ್ಯಮಂತ್ರಿಯಾಗಿ ನಂದೇ ನಡೆಯಬೇಕು ಎನ್ನುವ ಹಠ ಸರಿಯಲ್ಲ. ಬದಲಾಗಿ ಜನರ, ರೈತರ ಕಷ್ಟಗಳನ್ನು ಅರ್ಥ ಮಾಡಿಕೊಂಡು ಕೆಲಸ ಮಾಡಿ," ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಅವರು ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ನೇರ ಕಿವಿಮಾತು ಹೇಳಿದ್ದಾರೆ.
ಇದೇ ವೇಳೆ, ಮಾಜಿ ಸಚಿವ ಮುರುಗೇಶ್ ನಿರಾಣಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರಿಗೆ ಹಿರಿಯರ ಮಾರ್ಗದರ್ಶನ ಪಡೆಯುವಂತೆ ಸಲಹೆ ನೀಡಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಇಬ್ಬರೂ ನಾಯಕರು ಪ್ರಮುಖ ರಾಜಕೀಯ ವಿದ್ಯಮಾನಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.
ಬಿಡದಿ ಟೌನ್ ಶಿಪ್ ವಿವಾದ: "ಹಠ ಬಿಟ್ಟು ರೈತರ ಮನವಿಗೆ ಸ್ಪಂದಿಸಿ"
ಬಿಡದಿ ಟೌನ್ ಶಿಪ್ ಯೋಜನೆಗೆ ಸಂಬಂಧಿಸಿದಂತೆ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಕೆಸರೆರಚಾಟದ ಬಗ್ಗೆ ಕೇಂದ್ರ ಸಚಿವ ವಿ. ಸೋಮಣ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ರೈತರ ವಿರೋಧವಿದ್ದರೆ ಯೋಜನೆ ಬೇಡ: "ನಾವು ಈ ಹಿಂದೆ ಸೂರ್ಯನಗರದ ಮೂರು ಫೇಸ್ಗಳನ್ನು ಮಾಡಿದ್ದೇವೆ. ಅಲ್ಲಿ ಒಬ್ಬನೇ ಒಬ್ಬ ರೈತ ಬೀದಿಗೆ ಬಾರದ ಹಾಗೆ ಕೆಲಸ ಮಾಡಿದ್ದೇವೆ. ರೈತರು ಬೇಡ ಎಂದಾಗ ಯೋಜನೆಯನ್ನು ಇನ್ನು 10 ಕಿಲೋಮೀಟರ್ ಮುಂದೆ ತೆಗೆದುಕೊಂಡು ಹೋಗಬಹುದು. ಯಾವುದೋ ಒಂದಕ್ಕೆ ಜೋತು ಬಿದ್ದು ಹಠ ಮಾಡುವುದು ಸರಿಯಲ್ಲ" ಎಂದರು.
ಕುಮಾರಸ್ವಾಮಿ ಹೇಳುವುದು ಸರಿ ಇದೆ: "ಮೊದಲು ಕುಮಾರಸ್ವಾಮಿ ಅವರು ಟೌನ್ ಶಿಪ್ ಮಾಡಬೇಕು ಎಂದಿದ್ದು ನಿಜ, ಆಮೇಲೆ ಬೇಡವೆಂದು ಕ್ಯಾನ್ಸಲ್ ಮಾಡಿದ್ದೂ ನಿಜ. ನಿಮ್ಮಿಬ್ಬರ ರಾಜಕೀಯ ಜಗಳದಲ್ಲಿ ಜನರ ನೆಮ್ಮದಿ ಕೆಡಿಸಬೇಡಿ. ಕುಮಾರಸ್ವಾಮಿ ಅವರ ಮನವಿಗೆ ಸ್ಪಂದಿಸಿ ಈ ಯೋಜನೆ ಕೈಬಿಟ್ಟರೆ ಎಲ್ಲರಿಗೂ ಕ್ಷೇಮ," ಎಂದು ಸೋಮಣ್ಣ ಸಲಹೆ ನೀಡಿದರು.
ಕಡ್ಡಾಯ ಭೂಸ್ವಾಧೀನ ಮಾಡಬೇಡಿ: ಮುರುಗೇಶ್ ನಿರಾಣಿ
"ಯಾವುದೇ ಯೋಜನೆಗೆ ಶೇ. 80ರಷ್ಟು ರೈತರು ಒಪ್ಪಿಗೆ ಕೊಟ್ಟರೆ ಮಾತ್ರ ಭೂಮಿ ಪಡೆಯಲು ಕಾನೂನಿನಲ್ಲಿ ಅವಕಾಶ ಇದೆ. ಬಿಡದಿ ಸರ್ವೇ ಮಾಲೀಕರನ್ನು ಕರೆಸಿ ಒಪ್ಪಿಗೆ ಪಡೆದರೆ ತಪ್ಪಿಲ್ಲ. ಆದರೆ, ಸರ್ಕಾರ ಬಲವಂತದ ಅಥವಾ ಕಡ್ಡಾಯ ಭೂಸ್ವಾಧೀನಕ್ಕೆ ಮುಂದಾಗಬಾರದು."
ಕ್ರಾಸ್ ವೋಟಿಂಗ್: "ಹೈಕಮಾಂಡ್ ತೀವ್ರ ನಿಗಾ, ಕ್ರಮ ಫಿಕ್ಸ್"
ಬಿಜೆಪಿಯಲ್ಲಿ ನಡೆದಿದ್ದ ಅಡ್ಡ ಮತದಾನ ಕುರಿತು ಮಾತನಾಡಿದ ಸೋಮಣ್ಣ, "ಅಡ್ಡ ಮತದಾನ ನಡೆದಿರುವುದು ದೆಹಲಿ ವರಿಷ್ಠರ ಗಮನಕ್ಕೆ ಬಂದಿದೆ. ರಾಷ್ಟ್ರೀಯ ನಾಯಕರು ಇದರ ಸಾಧಕ-ಬಾಧಕಗಳನ್ನು ಗಮನಿಸಿದ್ದು, ಪ್ರಕರಣವನ್ನು ತೀಕ್ಷ್ಣವಾಗಿ ಪರಿಗಣಿಸಿದ್ದಾರೆ. ಸಿ.ಟಿ. ರವಿ ನೇತೃತ್ವದ ಸತ್ಯಶೋಧನಾ ಸಮಿತಿಯು ಮಧ್ಯಂತರ ವರದಿ ನೀಡಿದ್ದು, ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬುದನ್ನು ಪಕ್ಷ ಈಗಾಗಲೇ ತೀರ್ಮಾನಿಸಿದೆ," ಎಂದರು.
ಆಣೆ-ಪ್ರಮಾಣ ಮುಗಿದ ಅಧ್ಯಾಯ:
ಮಾಜಿ ಸಚಿವ ಮುರುಗೇಶ್ ನಿರಾಣಿ ಮಾತನಾಡಿ, "ಆಣೆ ಪ್ರಮಾಣ ಮಾಡುವ ಹಳೇ ವಿಚಾರವನ್ನು ಕೈಬಿಡಲು ವರಿಷ್ಠರು ಸೂಚನೆ ನೀಡಿದ್ದಾರೆ. ಮೂರು ಜನರ ಸಮಿತಿ ರಚಿಸಿ ದೆಹಲಿಗೆ ಕರೆಸಿ ವರದಿ ಪಡೆದಿದ್ದಾರೆ. ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಕೆಯಾಗಿದೆ," ಎಂದು ಸ್ಪಷ್ಟಪಡಿಸಿದರು.
ರಾಜ್ಯಾಧ್ಯಕ್ಷ ವಿಜಯೇಂದ್ರಗೆ ನಿರಾಣಿ ಸಲಹೆ:
"ನಾನು ಎಮೋಷನಲ್ ಆಗಿ ಮಾತನಾಡಿದ್ದೇನೆ ಎಂದು ವಿಜಯೇಂದ್ರ ಅವರೇ ಹೇಳಿದ್ದಾರೆ, ಹಾಗಾಗಿ ಅದು ಮುಗಿದ ಅಧ್ಯಾಯ. ವಿಜಯೇಂದ್ರ ಅವರು ಯುವಕರಾಗಿದ್ದಾರೆ, ಅವರು ಇನ್ನೂ ಹಿರಿಯರ ಮಾರ್ಗದರ್ಶನ ಪಡೆಯಬೇಕಿತ್ತು. ಮುಂದೆ ಎಲ್ಲವನ್ನೂ ಸರಿ ಮಾಡಿಕೊಳ್ಳುತ್ತಾರೆ ಎಂಬ ವಿಶ್ವಾಸ ನನಗಿದೆ."
ಪ್ರಿಯಾಂಕ್ ಖರ್ಗೆಗೆ ಆರ್ಎಸ್ಎಸ್ ಶಾಖೆಗೆ ಬರಲು ಆಹ್ವಾನ!:
ಸಚಿವ ಪ್ರಿಯಾಂಕ್ ಖರ್ಗೆ ಅವರ ಆರ್ಎಸ್ಎಸ್ ನೋಂದಣಿ ಹೇಳಿಕೆಗಳ ಕುರಿತು ಕೇಂದ್ರ ಸಚಿವ ವಿ. ಸೋಮಣ್ಣ ಲೇವಡಿ ಮಾಡಿದರು.
"ಇದು ಪ್ರಿಯಾಂಕ್ ಖರ್ಗೆ ಅವರ ಕೆಲಸ ಅಲ್ಲ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾಡಲು ಬಹಳಷ್ಟು ಕೆಲಸಗಳು ಬಾಕಿ ಇವೆ. ಆ ಭಾಗದ ಎಲ್ಲಾ ಕ್ಷೇತ್ರಗಳೂ ಹಿಂದುಳಿದಿದ್ದು, ಅದರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಿ. ಸಮಯ ಸಿಕ್ಕಾಗ ಖರ್ಗೆ ಅವರು ಒಮ್ಮೆ ಆರ್ಎಸ್ಎಸ್ ಶಾಖೆಗೆ ಬರಲಿ. ಸಂಘದ ಕಾರ್ಯಗಳ ಬಗ್ಗೆ ತಿಳಿದುಕೊಂಡರೆ, ಅವರು ಯಾವತ್ತೂ ಸಂಘದ ವಿರುದ್ಧ ಮಾತನಾಡಲ್ಲ."
ವಿ. ಸೋಮಣ್ಣ, ಕೇಂದ್ರ ಸಚಿವ.
ರಾಮ ಮಂದಿರ ಹಣದ ಅವ್ಯವಹಾರ ಆರೋಪ: "ರಾಮನ ಹೆಸರಿನಲ್ಲಿ ಯಾರೇ ಅನ್ಯಾಯ ಮಾಡಿದರೂ ಅವರಿಗೆ ಶಿಕ್ಷೆ ಖಂಡಿತ ಆಗುತ್ತದೆ. ಭಗವಂತನ ಹೆಸರಿನಲ್ಲಿ ಪಾಪ ಮಾಡುವವರಿಗಿಂತ ದೊಡ್ಡ ಪಾಪಿಗಳು ಯಾರೂ ಇಲ್ಲ," ಎಂದು ವಿ. ಸೋಮಣ್ಣ ಮಾರ್ಮಿಕವಾಗಿ ನುಡಿದರು.
ಪಂಚಮಸಾಲಿ ಪೀಠದ ಗೊಂದಲ: ಈ ಬಗ್ಗೆ ಪ್ರತಿಕ್ರಿಯಿಸಿದ ಮುರುಗೇಶ್ ನಿರಾಣಿ, "ನಮ್ಮ ಸಮುದಾಯದಲ್ಲಿ ಭಿನ್ನಾಭಿಪ್ರಾಯ ಬರುವುದು ಸಹಜ. ರಾಜ್ಯದಲ್ಲಿ 80 ಲಕ್ಷ ಜನಸಂಖ್ಯೆ ಇರುವ ದೊಡ್ಡ ಸಮುದಾಯ ನಮ್ಮದು. ಸದ್ಯಕ್ಕೆ ಇದು ಸರಿಪಡಿಸಲು ಸೂಕ್ತ ಸಮಯವಲ್ಲ, ಸ್ವಲ್ಪ ಕಾಲಾವಕಾಶ ಬೇಕು. ಮುಂದಿನ ದಿನಗಳಲ್ಲಿ ನಮ್ಮ ಸಮುದಾಯದ ಎಲ್ಲಾ ನಾಯಕರು ಸೇರಿ ಇದನ್ನು ಸರಿಪಡಿಸುತ್ತೇವೆ," ಎಂದರು.



