ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬಯಲೊಲುಮೆಯ ಅಕ್ಷರ ಶಕ್ತಿ ನೀ
ಬರೆದವೆಂತಹ ಸಾಲುಗಳು ನಿನ್ನವು
ಚಂದವಳ್ಳಿಯ ತೋಟದ ಕಂಪು
ಚಂದನದ ಗೊಂಬೆ ನವಿರಾದ ಇಂಪು...
ದಾಖಲಿಸಿದೆ ಅಮರರು ಕನ್ನಡ ವೀರರು
ಹೋಯ್ಸಳರು,ನೃಪತುಂಗರು
ಹಂಸಗೀತೆಯೂ ಅರಳಿತಲ್ಲವೇ
ನಡೆದಾಡಿದ ಕೋಟೆ ಬುರುಜು ಬತೇರಿ
ನಿನ್ನೊಳು ನಿತ್ಯದ ಸಂವಾದಗಳು
ರಾಮ ಸೀತೆಯರ ನಲ್ಮೆಯ ಕುಡಿ ನೀ...
ಬರೆದು ಬದುಕಿದ ಬರಹಗಾರನೇ
ಮಧ್ಯದ ಅಮಲು ಘಾಟು ಘಮಲಲಿ
ಸಾಲು ಕಥೆಗಳು ಬೆನ್ನತ್ತಿ ಬರೆಸಿದವು
ಅದೆಷ್ಟೆಷ್ಟೋ ಚಿತ್ರಗಳೂ ಆದವಲ್ಲಾ
ನಾಗರಹಾವು ನಾಡಿನ ಆಚೀಚೆ
ಅದ್ಧೂರಿ ಮೆರವಣಿಗೆಯೇ
ದುರ್ಗಕ್ಕೂ ನಿನಗೂ ಅದಾವ ನಂಟು...
ಸಾಹಿತ್ಯ ಸಾಲು ಸಾಲು ಪುಟಗಳಲಿ
ಇತಿಹಾಸವ ಶೃಂಗರಿಸಿದೆ
ನಿನಗೆ ಅದೆಷ್ಟು ಗೊತ್ತಿತ್ತು
ನಾಯಕ ಅರಸರ ಗತ್ತು ಗಮ್ಮತ್ತು
ಕಾದಂಬರಿಗಳಲಿ ಹೊಸಹಗಲು ಸೃಷ್ಟಿಸಿದೆ..
ಕಟ್ಟಿದೆ ಕಸ್ತೂರಿಕಂಕಣ ವ
ರಾಜ್ಯದಾಹವ ಬರೆದೆ
ಕಂಬನಿ ಕುಯಿಲು ಮುಡಿಗೇರಿತು
ರಕ್ತ ರಾತ್ರಿಯ ಹರಿಸಿದೆ ...
ಕೊನೆಗೂ ತಳುಕಿನ ಕಳಸವಿಟ್ಟು
ವಿಜಯೋತ್ಸವ ಆಚರಿಸಿಬಿಟ್ಟೆಯಲ್ಲ
ದುರ್ಗಾಸ್ತಮಾನ ರಚಿಸಿದೆ
ದುರ್ಗವೇ ನಲಿದು ನಮಿಸಿತ್ತು
ಕನ್ನಡ ನೆಲವೆಲ್ಲಾ ಸಂಬ್ರಮಿಸಿತ್ತು
ಸಂತಸದಿ ಅಕ್ಷರ ವರಪುತ್ರನ ತಬ್ಬಿತು...
ನೀ ಹೋದೆ ಎಲ್ಲಿ ಬರಹ ದೊರೆಯೇ
ಬಾರದೂರಿಗೆ ಹೊರಟು
ಬರವಣಿಗೆ ನಿಲ್ಲಿಸಿದೆಯಾ
ಬೆಂಕಿಯ ಬಲೆಯಲಿ ನಲುಗಿದೆಯಾ
ಮಸಣದ ಹೂವಾಗಿ
ಅಧ್ಯಾಯ ಮುಗಿಸಿದೆಯಾ
ನಾಡು ಇರುವರೆಗೂ ನುಡಿಗಳು ಜೀವಂತ...
ಕನ್ನಡ ಸಾರಸ್ವತ ಲೋಕದಲಿ
ನೀ ಒಬ್ಬ ಅಮರ ಧೀಮಂತ
ಕವಿತೆ-ಕುಮಾರ್ ಬಡಪ್ಪ


