LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಜಿಲ್ಲಾಸ್ಪತ್ರೆಯಲ್ಲಿ ಭೀಕರ ಸಿಲಿಂಡರ್ ಸ್ಫೋಟ: ಕೋಟ್ಯಂತರ ಮೌಲ್ಯದ ಸಲಕರಣೆ ಭಸ್ಮ, ಕೂದಲೆಳೆ ಅಂತರದಲ್ಲಿ ತಪ್ಪಿದ ಪ್ರಾಣಾಪಾಯ!

Advertisement
Advertisement

ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಇಲ್ಲಿನ ಪ್ರತಿಷ್ಠಿತ ಚಿಗಟೇರಿ ಜಿಲ್ಲಾಸ್ಪತ್ರೆಯ ಆಪರೇಷನ್ ಥಿಯೇಟರ್ ನಲ್ಲಿ ಇಂದು ಬೆಳಗ್ಗೆ ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡು ಭೀಕರ ಅಗ್ನಿ ಅವಘಡ ಸಂಭವಿಸಿದೆ. ಏಕಾಏಕಿ ಸಂಭವಿಸಿದ ಈ ಸ್ಫೋಟದಿಂದಾಗಿ ಆಪರೇಷನ್ ಥಿಯೇಟರ್‌ನಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಅತ್ಯಾಧುನಿಕ ವೈದ್ಯಕೀಯ ಸಲಕರಣೆಗಳು ಸುಟ್ಟು ಕರಕಲಾಗಿವೆ. ಅದೃಷ್ಟವಶಾತ್
, ಯಾವುದೇ ರೋಗಿ ಸ್ಥಳದಲ್ಲಿ ಇಲ್ಲದ ಕಾರಣ ಭಾರಿ ಪ್ರಾಣಹಾನಿಯೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.

ಘಟನೆ ನಡೆದಿದ್ದು ಹೇಗೆ?
ಇಎನ್‌ಟಿ (ಕಿವಿ
, ಮೂಗು, ಗಂಟಲು) ಆಪರೇಷನ್ ವಿಭಾಗದಲ್ಲಿ ಇಂದು ಬೆಳಗ್ಗೆ ೯ ಗಂಟೆಗೆ ಶಸ್ತ್ರಚಿಕಿತ್ಸೆಗಳು ನಿಗದಿಯಾಗಿದ್ದವು. ಇದಕ್ಕಾಗಿ ಬೆಳಗ್ಗೆ ೮:೩೦ರ ಸುಮಾರಿಗೆ ಆಸ್ಪತ್ರೆಯ ಸಿಬ್ಬಂದಿ ಮತ್ತು ವೈದ್ಯರು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ೮:೪೫ರ ವೇಳೆಗೆ ಅರಿವಳಿಕೆ ತಜ್ಞೆ ಡಾ. ಶಿಲ್ಪಾಶ್ರೀ ಅವರು ಯಂತ್ರೋಪಕರಣಗಳನ್ನು ಪರಿಶೀಲಿಸುತ್ತಿದ್ದಾಗ, ವರ್ಕ್ ಸ್ಟೇಷನ್‌ನಲ್ಲಿ ಸಣ್ಣ ಕಿಡಿ (ಸ್ಪಾರ್ಕ್) ಕಾಣಿಸಿಕೊಂಡಿದೆ. ತಕ್ಷಣವೇ ಅಲ್ಲಿದ್ದ ಸಿಬ್ಬಂದಿ ಮುನ್ನೆಚ್ಚರಿಕೆಯಿಂದ ಹೊರಗೆ ಓಡಿ ಬಂದಿದ್ದಾರೆ. ಅವರು ಹೊರಬಂದ ಕೆಲವೇ ನಿಮಿಷಗಳಲ್ಲಿ ಒಟ್ಟೊಟ್ಟಿಗೆ ಎರಡು ಆಕ್ಸಿಜನ್ ಸಿಲಿಂಡರ್‌ಗಳು ಭೀಕರವಾಗಿ ಸ್ಫೋಟಗೊಂಡಿವೆ.

"ಮರುಜೀವ ಪಡೆದು ಬಂದಂತಾಗಿದೆ": ಆತಂಕ ಹಂಚಿಕೊಂಡ ವೈದ್ಯರು-ಸಿಬ್ಬಂದಿ
ಘಟನೆ ಸಂಭವಿಸಿದಾಗ ಆಪರೇಷನ್ ಥಿಯೇಟರ್ ಒಳಗೆ ಕೇವಲ ೭ ರಿಂದ ೮ ಜನ ಸಿಬ್ಬಂದಿ ಮಾತ್ರ ಇದ್ದರು.

ಅರಿವಳಿಕೆ ತಜ್ಞೆ ಡಾ. ಶಿಲ್ಪಾಶ್ರೀ ಅವರ ಹಂಚಿಕೊಂಡ ಮಾಹಿತಿ: "ರೋಗಿಗಳನ್ನು ಒಳಗೆ ಕರೆತರಲು ಸಿದ್ಧತೆ ಮಾಡಿಕೊಳ್ಳುವ ಕೋಣೆಯಲ್ಲಿ ಇರಿಸಲಾಗಿತ್ತು, ಅವರು ಇನ್ನೂ ಆಪರೇಷನ್ ಟೇಬಲ್‌ಗೆ ಬಂದಿರಲಿಲ್ಲ. ರೋಗಿಗಳಿಗೆ ಅರಿವಳಿಕೆ (ಅನಸ್ತೇಷಿಯಾ) ಮದ್ದು ನೀಡಿದ ನಂತರ ಈ ಘಟನೆ ಸಂಭವಿಸುತ್ತಿದ್ದರೆ ಭಾರಿ ಅನಾಹುತವಾಗುತ್ತಿತ್ತು. ನಮ್ಮ ಸಿಬ್ಬಂದಿ ಸಮಯಪ್ರಜ್ಞೆಯಿಂದ ತಕ್ಷಣ ಹೊರ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ."

ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ನಾಗೇಂದ್ರಪ್ಪ ಮಾತನಾಡಿ, "ಆಕ್ಸಿಜನ್ ಹಾಗೂ ನೈಟ್ರೋಜನ್ ಗ್ಯಾಸ್ ಇದ್ದ ಕಾರಣ ಬೆಂಕಿ ತೀವ್ರವಾಗಿ ಹೊತ್ತಿಕೊಂಡಿದೆ. ಇಎನ್‌ಟಿ ಶಸ್ತ್ರಚಿಕಿತ್ಸಾ ಘಟಕ ಸಂಪೂರ್ಣ ಹಾಳಾಗಿದ್ದು, ಇಂಜಿನಿಯರ್‌ಗಳು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ" ಎಂದು ತಿಳಿಸಿದ್ದಾರೆ.

ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ:
ಅವಘಡದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಫೋಟದ ತೀವ್ರತೆಗೆ ಆಪರೇಷನ್ ಥಿಯೇಟರ್ ಸುತ್ತಮುತ್ತಲಿನ ಇತರೆ ಕೊಠಡಿಗಳೂ ಕೂಡ ಜಖಂಗೊಂಡಿವೆ.

ಉನ್ನತ ಮಟ್ಟದ ತನಿಖೆಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಆದೇಶ:
ಈ ಭೀಕರ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವುದಾಗಿ ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ಘಟನೆಗೆ ನಿಖರ ಕಾರಣ ಪತ್ತೆಹಚ್ಚಲು ಅವರು ಎರಡು ಹಂತದ ತನಿಖೆಗೆ ಆದೇಶಿಸಿದ್ದಾರೆ.

ರಾಜ್ಯಮಟ್ಟದ ತನಿಖೆ: ರಾಜ್ಯಮಟ್ಟದ ಉನ್ನತ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ, ಕೂಲಂಕುಶವಾಗಿ ತನಿಖೆ ನಡೆಸಲು ಆದೇಶಿಸಲಾಗಿದೆ.

ಜಿಲ್ಲಾ ಮಟ್ಟದ ತನಿಖೆ: ಸ್ಥಳೀಯ ಮಟ್ಟದಲ್ಲಿ ದಾವಣಗೆರೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪ್ರತ್ಯೇಕ ತನಿಖೆ ನಡೆಯಲಿದೆ.

"ಈ ಎರಡೂ ತನಿಖಾ ವರದಿಗಳು ಕೈ ಸೇರಿದ ನಂತರ ಇಲಾಖೆಯು ಪರಿಶೀಲನೆ ನಡೆಸಿ, ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳಲಿದೆ" ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಹಿರಿಯ ಸಿಬ್ಬಂದಿ ಸದ್ಯ ಆಸ್ಪತ್ರೆಗೆ ಭೇಟಿ ನೀಡಿ ನಷ್ಟದ ಅಂದಾಜು ಮಾಡುತ್ತಿದ್ದಾರೆ.

 

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಾಣಿ ವಿಲಾಸ ಸಾಗರ ಹಾಗೂ ಗಾಯತ್ರಿ ಜಲಾಶಯಗಳಿಗೆ ಪ್ರವಾಸಿಗರ ಪ್ರವೇಶ ತಾತ್ಕಾಲಿಕ ನಿರ್ಬಂಧಆಗಸ್ಟ್ 12ಕ್ಕೆ 'ಶತಮಾನದ ಖಗ್ರಾಸ ಸೂರ್ಯಗ್ರಹಣ': ಭಾರತದಲ್ಲಿ ಗೋಚರವಿಲ್ಲ, ಯಾವುದೇ ಆಚರಣೆ ಅಗತ್ಯವಿಲ್ಲರಾಣಿ ಎಲಿಜಬೆತ್ ಹೊಗಳಿದ್ದ ನಮ್ಮ ವಿಧಾನಸೌಧವೇ ನನಗೆ ಸ್ಫೂರ್ತಿ-ಟಿ.ಬಿ ಜಯಚಂದ್ರಕೆಪಿಸಿಸಿ ಅಧ್ಯಕ್ಷರ ಆಶೀರ್ವಾದ ಸಿಕ್ಕಿದೆ- ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸಣ್ಣಚಿತ್ತಯ್ಯ ಯುವ ಜನತೆಗೆ ಯೋಗ, ವ್ಯಾಯಾಮ ಅತ್ಯಂತ ಅವಶ್ಯ:ದಿವ್ಯ ಜ್ಞಾನಾನಂದ ಶ್ರೀಎಸ್. ನಾಗೇನಹಳ್ಳಿ ಎಂಪಿಸಿಎಸ್ ನೂತನ ಅಧ್ಯಕ್ಷರಾಗಿ ಮುನಿಕೃಷ್ಣಪ್ಪ ಆಯ್ಕೆಅಪಘಾತದಲ್ಲಿ ಮೃತಪಟ್ಟ ಕೋಳಿಗಳು 'ಜೀವಸಂಪತ್ತು': ವಿಮಾ ಪರಿಹಾರ ಎತ್ತಿಹಿಡಿದ ಹೈಕೋರ್ಟ್ಸವರ್ಣೀಯ ಮುಖಂಡರಿಂದ ದಲಿತ ಅಧಿಕಾರಿಗಳಿಗೆ ಕಿರುಕುಳ-ಮಾರಸಂದ್ರ ಮುನಿಯಪ್ಪಅಂಗನವಾಡಿ ಕೇಂದ್ರದ ಮಕ್ಕಳಿಗೆ ಸಮವಸ್ತ್ರ ವಿತರಣೆಮೈಸೂರಲ್ಲಿ  'ಜೋಡೆತ್ತು' ಚಿತ್ರದ ಅದ್ದೂರಿ ಕ್ಲೈಮ್ಯಾಕ್ಸ್