Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಾಯಕತ್ವ ಬದಲಾವಣೆ ಹಾಗೂ ಸಚಿವ ಸಂಪುಟ ಪುನಾರಚನೆ ಗೊಂದಲಕ್ಕೆ ವಾರದಲ್ಲಿ ತೆರೆ!

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ರಾಜಕೀಯದಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರ ಚರ್ಚೆಗೆ ಗ್ರಾಸವಾಗಿರುವ ನಾಯಕತ್ವ ಬದಲಾವಣೆ ಹಾಗೂ ಸಚಿವ ಸಂಪುಟ ಪುನಾರಚನೆ ಕುರಿತ ಗೊಂದಲಗಳಿಗೆ ಹೈಕಮಾಂಡ್ ಮೇ ಅಂತ್ಯದೊಳಗೆ ತೆರೆ ಎಳೆಯುವುದು ಬಹುತೇಕ ನಿಶ್ಚಿತವಾಗಿದೆ. ಈ ಅನಿಶ್ಚಿತತೆಯನ್ನು ಇನ್ನು ಮುಂದೆ ಎಳೆದಾಡಲು ಸಾಧ್ಯವಿಲ್ಲ ಎಂಬ ಹಂತಕ್ಕೆ ಬಂದಿರುವ ಕಾಂಗ್ರೆಸ್ ಕೇಂದ್ರ ನಾಯಕತ್ವ, ಮೇ ಕೊನೆಯ ವಾರದೊಳಗೆ ಅಂತಿಮ ತೀರ್ಮಾನ ಪ್ರಕಟಿಸಲಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.

ಪಕ್ಷದ ಮೂಲಗಳ ಪ್ರಕಾರ, ಮುಂಬರುವ ಮೂರ್ನಾಲ್ಕು ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ದೆಹಲಿಗೆ ಬರಲು ಹೈಕಮಾಂಡ್ ಬುಲಾವ್ ನೀಡುವ ಸಾಧ್ಯತೆಯಿದೆ.

ಮೇ ಅಂತ್ಯದೊಳಗೆ ಹೈಕಮಾಂಡ್ ಪರಿಹಾರ:
ಸುದ್ದಿಗಾರರೊಂದಿಗೆ ಮಾತನಾಡಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ, ಹೈಕಮಾಂಡ್ ಶೀಘ್ರದಲ್ಲೇ ದೊಡ್ಡ ನಿರ್ಧಾರ ಕೈಗೊಳ್ಳುವ ಮುನ್ಸೂಚನೆ ನೀಡಿದರು. "ಈ ತಿಂಗಳ ಅಂತ್ಯದೊಳಗೆ (ಮೇ ಅಂತ್ಯ) ಹೈಕಮಾಂಡ್ ಎಲ್ಲದಕ್ಕೂ ಒಂದು ಸೂಕ್ತ ಪರಿಹಾರ ಕಂಡುಕೊಳ್ಳಲಿದೆ. ಏನಾಗಬೇಕೋ ಅದು ಆಗೇ ಆಗುತ್ತದೆ" ಎಂದು ಮಾರ್ಮಿಕವಾಗಿ ಉತ್ತರಿಸಿದರು.

ಜಾತಿ ಸಮೀಕರಣ ಮತ್ತು ನಾಯಕತ್ವದ ಲೆಕ್ಕಾಚಾರ:
ಹಿಂದುಳಿದ ವರ್ಗದ ಕಾರ್ಡ್: ಈಗಾಗಲೇ ತೆಲಂಗಾಣ, ಹಿಮಾಚಲ ಪ್ರದೇಶ ಹಾಗೂ ಕೇರಳ ರಾಜ್ಯಗಳಲ್ಲಿ ಮೇಲ್ವರ್ಗದ ನಾಯಕರೇ ಮುಖ್ಯಮಂತ್ರಿಗಳಾಗಿದ್ದಾರೆ. ಇಂತಹ ಸಂದರ್ಭದಲ್ಲಿ ದಕ್ಷಿಣ ಭಾರತದ ಪ್ರಮುಖ ಹಿಂದುಳಿದ ವರ್ಗದ ಹಿರಿಯ ನಾಯಕರಾಗಿರುವ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ, ಕರ್ನಾಟಕದಲ್ಲಿ ಪಕ್ಷದ ರಾಜಕೀಯ ಭವಿಷ್ಯವನ್ನು ಹೈಕಮಾಂಡ್ ಅಪಾಯಕ್ಕೆ ಸಿಲುಕಿಸುವುದಿಲ್ಲ ಎಂಬುದು ಸಿಎಂ ಬೆಂಬಲಿಗರ ಬಲವಾದ ವಾದವಾಗಿದೆ.

ದಲಿತ ಸಿಎಂ ಬೇಡಿಕೆ: ಒಂದು ವೇಳೆ ನಾಯಕತ್ವ ಬದಲಾವಣೆ ಅನಿವಾರ್ಯವಾದರೆ ಈ ಬಾರಿ ದಲಿತ ನಾಯಕನಿಗೆ ಸಿಎಂ ಪಟ್ಟ ಸಿಗಬೇಕು ಎಂಬ ನಿರೀಕ್ಷೆಯೂ ಇದೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಬೆಂಬಲಿಗರು ಈ ನಿಟ್ಟಿನಲ್ಲಿ ಆಶಾವಾದ ಹೊಂದಿದ್ದು, ಹೈಕಮಾಂಡ್ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಅಥವಾ ಸಿಎಂ ಬದಲಾವಣೆಗೆ ಮುಂದಾದರೆ ಪರಮೇಶ್ವರ್ ಅವರಿಗೆ ಸಿಎಂ ಅಥವಾ ಡಿಸಿಎಂ ಹುದ್ದೆ ಸಿಗುವುದು ಖಚಿತ ಎಂಬ ವಿಶ್ವಾಸದಲ್ಲಿದ್ದಾರೆ.

ಮೇ 28 ಅಥವಾ 29 ರಂದು ದೆಹಲಿ ಭೇಟಿ?:
"
ರಾಹುಲ್ ಗಾಂಧಿ ಅವರು ನನ್ನನ್ನು ದೆಹಲಿಗೆ ಬರುವಂತೆ ತಿಳಿಸಿದ್ದಾರೆ. ಅವರು ಅಧಿಕೃತವಾಗಿ ಕರೆದ ತಕ್ಷಣ ನಾನು ದೆಹಲಿಗೆ ಹೊರಡಲಿದ್ದೇನೆ."
ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇ 28 ಅಥವಾ 29 ರಂದು ದೆಹಲಿಗೆ ತೆರಳಿ ರಾಹುಲ್ ಗಾಂಧಿ ಅವರನ್ನು ಭೇಟಿಯಾಗುವ ಸಾಧ್ಯತೆಯಿದ್ದು, ಅದೇ ದಿನ ರಾಜ್ಯ ರಾಜಕೀಯದ ಗೊಂದಲಗಳಿಗೆ ಪೂರ್ಣವಿರಾಮ ಬೀಳುವ ನಿರೀಕ್ಷೆಯಿದೆ.

"ನಾನು ಯಾರ ಬಳಿಯೂ ಕೂಲಿ ಕೇಳಿಲ್ಲ" ಡಿ.ಕೆ. ಶಿವಕುಮಾರ್ ಖಡಕ್ ಮಾತು:
ಸಚಿವ ಕೆ.ಎನ್. ರಾಜಣ್ಣ ಅವರು 'ಪರಮೇಶ್ವರ್ ಸಿಎಂ ಆಗಬೇಕು' ಎಂದು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, "ರಾಜಣ್ಣ ಅವರೇನಾದರೂ ಸಿಎಂ ಬದಲಾವಣೆ ಮಾಡಲಿದ್ದಾರೆಯೇ? ಪರಮೇಶ್ವರ್ ಅವರನ್ನು ಸಿಎಂ ಮಾಡಿ ಎಂದರೆ ಈಗಿನ ಸಿಎಂ ರಾಜೀನಾಮೆ ಕೊಡಬೇಕು ಎಂದರ್ಥವೇ? ನಾನಂತೂ ಎಲ್ಲೂ ಸಿಎಂ ಬದಲಾವಣೆ ಆಗಬೇಕು ಎಂದು ಹೇಳಿಲ್ಲ" ಎಂದರು.

ಅಲ್ಲದೆ, 2023ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ತಾವು ಪಟ್ಟ ಶ್ರಮಕ್ಕೆ ಈಗ ಪ್ರತಿಫಲ (ಸಿಎಂ ಸ್ಥಾನ) ನಿರೀಕ್ಷಿಸುತ್ತಿದ್ದೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ತೀಕ್ಷ್ಣವಾಗಿ ಉತ್ತರಿಸಿದ ಡಿಸಿಎಂ, "ಇದೆಲ್ಲಾ ಮಾಧ್ಯಮಗಳು ಸೃಷ್ಟಿಸುತ್ತಿರುವ ಕಥೆಗಳು. ನಾನು ಹೈಕಮಾಂಡ್ ಬಳಿ ಹೋಗಿ ಯಾವುದೇ ಕೂಲಿ ಕೇಳಿಲ್ಲ" ಎಂದು ಸ್ಪಷ್ಟಪಡಿಸಿದರು.

ಇಂಧನ ಸಚಿವರ ನಿವಾಸದಲ್ಲಿ ಮಹತ್ವದ ಸಭೆ:
ಕಳೆದ ಸೋಮವಾರ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ನಿವಾಸದಲ್ಲಿ ಆಯೋಜಿಸಲಾಗಿದ್ದ ಮಧ್ಯಾಹ್ನದ ಊಟದ ಕೂಟದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದರು. ಈ ಸಭೆಯಲ್ಲಿ ರಾಜ್ಯದ ಪ್ರಸ್ತುತ ರಾಜಕೀಯ ವಿದ್ಯಮಾನಗಳು ಹಾಗೂ ಮುಂಬರುವ ದಿನಗಳಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸುದೀರ್ಘ ಚರ್ಚೆ ನಡೆದಿದೆ ಎಂದು ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದ್ದಾರೆ.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST