ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ಮುಖ್ಯಮಂತ್ರಿ ಕುರ್ಚಿ ಈ ಡಿ.ಕೆ. ಶಿವಕುಮಾರನದ್ದಲ್ಲ, ಇದು ಜನರ ಕುರ್ಚಿ. ಜನರು ನೀಡಿರುವ ಈ ಅಧಿಕಾರವನ್ನು ನಾನು ಸಂಪೂರ್ಣವಾಗಿ ಅವರ ಸೇವೆಗೇ ಮುಡಿಪಾಗಿಡುತ್ತೇನೆ" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾವುಕರಾಗಿ ನುಡಿದಿದ್ದಾರೆ.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ವಿಧಾನಸೌಧದಲ್ಲಿ ತಮ್ಮ ಮೊದಲ ಸಚಿವ ಸಂಪುಟ ಸಭೆ ನಡೆಸಿ, ನಂತರ ಜಂಟಿ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಜನರ ಸೇವೆಗೆ ನನ್ನ 40 ವರ್ಷಗಳ ಅನುಭವ ಮುಡಿಪು:
ತಮ್ಮ ವೈಯಕ್ತಿಕ ವಿಚಾರ ಹಾಗೂ ಹಿತಾಸಕ್ತಿಗಳನ್ನು ಬದಿಗಿಟ್ಟು, ಕೇವಲ ರಾಜ್ಯದ ಜನರ ಸೇವೆ ಮಾಡುವ ದೃಢ ಸಂಕಲ್ಪದೊಂದಿಗೆ ತಾವು ಈ ಜವಾಬ್ದಾರಿಯನ್ನು ಸ್ವೀಕರಿಸಿದ್ದಾಗಿ ಸಿಎಂ ತಿಳಿಸಿದರು.
"ರಾಜ್ಯದ ಜನತೆಗೆ ನನ್ನ ಮೇಲೆ ಅಪಾರ ವಿಶ್ವಾಸವಿದೆ. ಹಿಂದೆ ನನ್ನ ವಿರುದ್ಧ ಅನೇಕ ಟೀಕೆಗಳು, ಪರವಾಗಿ ಹೊಗಳಿಕೆಗಳು ವ್ಯಕ್ತವಾಗಿರಬಹುದು. ಆದರೆ ಟೀಕೆಗಳು ಸಾಯುತ್ತವೆ, ನಾವು ಮಾಡುವ ಕೆಲಸಗಳು ಮಾತ್ರ ಶಾಶ್ವತವಾಗಿ ಉಳಿಯುತ್ತವೆ ಎಂಬುದು ನನ್ನ ನಂಬಿಕೆ. ರಾಜ್ಯದ ಆಡಳಿತದಲ್ಲಿ ಹೊಸ ಬೆಳಕು ಮೂಡಿಸಲು ನನ್ನ 40 ವರ್ಷಗಳ ಸುದೀರ್ಘ ರಾಜಕೀಯ ಅನುಭವವನ್ನು ಧಾರೆ ಎರೆಯಲಿದ್ದೇನೆ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬೇರುಗಳನ್ನು ಮರೆತರೆ ಫಲ ಸಿಗದು:
"ಹಿಂದಿನ ಹೆಜ್ಜೆಗಳನ್ನು ಮರೆತವನು ಮುಂದಿನ ಹೆಜ್ಜೆ ಇಡಲಾರ" ಎಂಬ ಜನಪ್ರಿಯ ಗಾದೆ ಮಾತನ್ನು ಉಲ್ಲೇಖಿಸಿದ ಮುಖ್ಯಮಂತ್ರಿಗಳು, "ನಾವು ನಮ್ಮ ಬೇರುಗಳನ್ನು ಮರೆತರೆ ಎಂದಿಗೂ ಯಶಸ್ಸಿನ ಫಲ ಸಿಗುವುದಿಲ್ಲ. ಇಂದು ಹೊಸ ದಿನ, ಹೊಸ ಕೆಲಸ. ಇಂತಹ ಸುವರ್ಣ ಅವಕಾಶವನ್ನು ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಜ್ಯದ ಜನತೆ ನನಗೆ ನೀಡಿದ್ದಾರೆ. ನಾನು ಸದಾ ಭರವಸೆಗಳ ಮೇಲೆಯೇ ಬದುಕಿದವನು. ಈಗ ಜನರ ಸೇವೆ ಮಾಡಿ, ಸಾಧನೆಯ ಸಾಕ್ಷಿಗುಡ್ಡೆ ಬಿಟ್ಟು ಹೋಗಲು ನನಗೆ ಉತ್ತಮ ಅವಕಾಶ ಸಿಕ್ಕಿದೆ" ಎಂದರು.
ವ್ಯಕ್ತಿಗತವಲ್ಲ, ಸಾಮೂಹಿಕ ನಾಯಕತ್ವ:
ಸರ್ಕಾರದ ಮುಂದಿನ ನಡೆ ಹಾಗೂ ನಿರ್ಧಾರಗಳ ಕುರಿತು ಮಾತನಾಡಿದ ಡಿ.ಕೆ. ಶಿವಕುಮಾರ್, ಈ ಸರ್ಕಾರದ ಪ್ರತಿಯೊಂದು ತೀರ್ಮಾನವೂ ಕೇವಲ ಶಿವಕುಮಾರ್ ಒಬ್ಬನ ವೈಯಕ್ತಿಕ ತೀರ್ಮಾನವಾಗಿರುವುದಿಲ್ಲ. ಬದಲಿಗೆ, ಇಡೀ ಸಚಿವ ಸಂಪುಟ ಹಾಗೂ ಸರ್ಕಾರದ 'ಸಾಮೂಹಿಕ ತೀರ್ಮಾನ' ಆಗಿರುತ್ತದೆ ಎಂದು ಸ್ಪಷ್ಟಪಡಿಸುವ ಮೂಲಕ ಒಗ್ಗಟ್ಟಿನ ಮಂತ್ರ ಜಪಿಸಿದರು.



