ಚಂದ್ರವಳ್ಳಿ ನ್ಯೂಸ್, ಹಿರಿಯೂರು:
"ಐ ಲವ್ ಯು ಅಪ್ಪ... ನೀನು ಬರೀ ಪಕ್ಷ ಅದು ಇದು ಅಂತ ಓಡಾಡ್ತಿಯಾ ಏನಪ್ಪಾ..." ಎಂದು ತಂದೆಯನ್ನೇ ಮುದ್ದಾಗಿ ಪ್ರಶ್ನಿಸಿ, ರಾತ್ರಿ ಪ್ರೀತಿಯಿಂದ ಅಪ್ಪಿ ಮಲಗಿದ್ದ ನಾಲ್ಕು ವರ್ಷದ ಕಂದ ಇನ್ನು ಜಗತ್ತನ್ನೇ ಬಿಟ್ಟು ಹೋಗಿದ್ದಾನೆ. ಹಿರಿಯೂರು ಬಿಜೆಪಿ ಮಂಡಲ ಅಧ್ಯಕ್ಷ ಕೆ. ಅಭಿನಂದನ್ ಅವರ ಸುಪುತ್ರ ವೈಷ್ಣವ್ (4) ಅಕಸ್ಮಾತ್ ಆಗಿ ಸುಸ್ತಾಗಿ ಕೊನೆಯುಸಿರೆಳೆದ ದುರ್ದೈವಿ ಬಾಲಕ.
ಚಿಕ್ಕ ವಯಸ್ಸಿನಲ್ಲೇ ಎಲ್ಲರ ಕಣ್ಮಣಿಯಾಗಿದ್ದ ಮಗುವಿನ ಹಠಾತ್ ಅಗಲಿಕೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ತಾಲೂಕೇ ಕಣ್ಣೀರಲ್ಲಿ ಮುಳುಗಿದೆ. ಬಾಲಕನ ಅಂತ್ಯಕ್ರಿಯೆಯನ್ನು ಬುಧವಾರ ತೋಟದ ಜಮೀನಿನಲ್ಲಿ ನೆರವೇರಿಸಲಾಯಿತು.
ಕೊನೆಯ ಕ್ಷಣದ ಆ ಮಾತುಗಳು ಕಣ್ಣಾಲಿಗಳನ್ನು ಒದ್ದೆಯಾಗಿಸುತ್ತವೆ:
ಮಂಗಳವಾರ ತಡರಾತ್ರಿ ತಂದೆ ಅಭಿನಂದನ್ ಜೊತೆ ವೈಷ್ಣವ್ ತುಂಬಾ ಮುದ್ದಾಗಿ ಮಾತನಾಡಿದ್ದನು. "ಅಪ್ಪ ನೀನು ಬರೀ ಪಕ್ಷದ ಕೆಲಸ ಅಂತ ಹೊರಗಡೆನೇ ಇರ್ತೀಯಾ" ಎಂದು ಮುನಿಸಿಕೊಂಡಿದ್ದ ಬಾಲಕ, ನಂತರ ಪ್ರೀತಿಯಿಂದ "ಐ ಲವ್ ಯು ಅಪ್ಪ" ಎಂದು ಹೇಳಿ ಮಲಗಿದ್ದನು.
ಸ್ವಲ್ಪ ಸಮಯದ ನಂತರ, "ಅಪ್ಪ ತಂಗಿ ಅಳ್ತಾ ಇದ್ದಾಳೆ ನೋಡು" ಎಂದು ಹೇಳಿ ಮತ್ತೆ ಕಣ್ಣು ಮುಚ್ಚಿದ್ದನು. ಆ ಬಳಿಕ ಎದ್ದು ನೀರು ಕೇಳಿ, ಬಾಟಲಿಯಿಂದ ನೀರು ಕುಡಿದು ಮಲಗಿದ ಕೇವಲ ಎರಡೇ ಮೂರು ನಿಮಿಷಗಳಲ್ಲಿ ಬಾಲಕನ ದೇಹದಲ್ಲಿ ಯಾವುದೇ ಚಲನೆ ಇರಲಿಲ್ಲ. ತಕ್ಷಣ ಗಮನಿಸಿದಾಗ ಮಗ ಮಾತು ನಿಲ್ಲಿಸಿ, ಶಾಶ್ವತ ನಿದ್ರೆಗೆ ಜಾರಿರುವುದು ಬೆಳಕಿಗೆ ಬಂದಿದೆ.
ವೈಷ್ಣವ್ ಕೇವಲ ನಾಲ್ಕು ವರ್ಷದವನಾಗಿದ್ದರೂ ಅತ್ಯಂತ ಚುರುಕಾಗಿದ್ದನು. ಮನೆಗೆ ಯಾರೇ ಹಿರಿಯರು ಬಂದರೂ ಓಡಿಹೋಗಿ ನಮಸ್ಕಾರ ಮಾಡಿ ಪ್ರೀತಿ ಗಳಿಸುತ್ತಿದ್ದನು. ತಂದೆ ಮತ್ತು ಮಗನ ನಡುವಿನ ಬಾಂಧವ್ಯ ಅಪಾರವಾಗಿತ್ತು. ಮಗುವಿನ ಪ್ರತಿಯೊಂದು ಚುಟುಕು ಮಾತುಗಳು, ಆಟಪಾಠಗಳನ್ನು ನೆನೆದು ಪೋಷಕರು ಹಾಗೂ ನೆರೆಹೊರೆಯವರು ಕಣ್ಣೀರು ಹಾಕುತ್ತಿದ್ದಾರೆ.
ಗಣ್ಯರ ಸಾಂತ್ವನ:
ಕಂದನನ್ನು ಕಳೆದುಕೊಂಡು ಕಣ್ಣೀರಿನ ಕಡಲಲ್ಲಿ ಮುಳುಗಿರುವ ಅಭಿನಂದನ್ ಅವರ ಕುಟುಂಬಕ್ಕೆ ಮಾಜಿ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್, ಎಂ. ರವೀಂದ್ರಪ್ಪ, ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಜಯಣ್ಣ, ಎನ್.ಆರ್. ಲಕ್ಷ್ಮೀಕಾಂತ್, ರಾಜಣ್ಣ, ಸಿದ್ದಾರ್ಥ್ ತಿಪ್ಪಾರೆಡ್ಡಿ ಸೇರಿದಂತೆ ಸಾವಿರಾರು ಸಾರ್ವಜನಿಕರು ಹಾಗೂ ಪಕ್ಷದ ಕಾರ್ಯಕರ್ತರು ಭೇಟಿ ನೀಡಿ ಸಾಂತ್ವನ ಹೇಳಿದರು.
ಯಾವ ತಂದೆ-ತಾಯಿಗೂ ಬಾರದ ಇಂತಹ ಕರುಳು ಸೀಳುವ ನೋವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಆ ಕುಟುಂಬಕ್ಕೆ ನೀಡಲಿ.



