ಚಂದ್ರವಳ್ಳಿ ನ್ಯೂಸ್, ಮೊಳಕಾಲ್ಮೂರು:
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಉಪನ್ಯಾಸಕರ ಮತ್ತು ಪ್ರಾಚಾರ್ಯರ ಮಹತ್ವದ ಸಭೆಯಲ್ಲಿ, ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಎಸ್.ಪಿ.ಎಸ್.ಆರ್. ಪಿಯು ಕಾಲೇಜಿನ ಹಿರಿಯ ಉಪನ್ಯಾಸಕರಾದ ಕೆ. ಬೋರಯ್ಯ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳ ವಿವರ:
ಅಧ್ಯಕ್ಷ: ಕೆ. ಬೋರಯ್ಯ (ಎಸ್.ಪಿ.ಎಸ್.ಆರ್. ಪಿಯು ಕಾಲೇಜು), ಪ್ರಧಾನ ಕಾರ್ಯದರ್ಶಿ: ರವಿ (ಸರ್ಕಾರಿ ಪಿಯು ಕಾಲೇಜು, ಮೊಳಕಾಲ್ಮೂರು), ಕಾರ್ಯದರ್ಶಿ: ಎಸ್.ಟಿ. ನಟರಾಜ್ (ಸರ್ಕಾರಿ ಪಿಯು ಕಾಲೇಜು, ಕೊಂಡ್ಲಹಳ್ಳಿ), ಖಜಂಚಿ: ಮಂಜುನಾಥ್ ರೆಡ್ಡಿ (ಸರ್ಕಾರಿ ಪಿಯು ಕಾಲೇಜು, ಕೊಂಡ್ಲಹಳ್ಳಿ), ಉಪಾಧ್ಯಕ್ಷರು: ಎಸ್. ಕೆ. ವೀಣಾ.
ಗಣ್ಯರಿಂದ ಅಭಿನಂದನೆ:
ಉಪನ್ಯಾಸಕರ ಸಂಘದ ತಾಲೂಕು ಘಟಕಕ್ಕೆ ಅವಿರೋಧವಾಗಿ ಆಯ್ಕೆಯಾಗಿರುವ ನೂತನ ಪದಾಧಿಕಾರಿಗಳ ತಂಡಕ್ಕೆ ಪ್ರಾಚಾರ್ಯರಾದ ಗೋವಿಂದಪ್ಪ, ಡಾ. ತಿಮ್ಮಣ್ಣ, ಮಂಜುನಾಥ್ ರೆಡ್ಡಿ, ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷರಾದ ಎಸ್. ಲಕ್ಷ್ಮಣ ಹಾಗೂ ಹಿರಿಯ ಉಪನ್ಯಾಸಕರಾದ ಬಿ. ಎಂ. ತಿಪ್ಪೇಸ್ವಾಮಿ ಅವರು ಹೂಗುಚ್ಛ ನೀಡಿ ಹಾರ್ದಿಕವಾಗಿ ಅಭಿನಂದಿಸಿದ್ದಾರೆ.
ನೂತನ ಪದಾಧಿಕಾರಿಗಳ ನೇತೃತ್ವದಲ್ಲಿ ತಾಲೂಕಿನ ಉಪನ್ಯಾಸಕರ ಶೈಕ್ಷಣಿಕ ಹಾಗೂ ವೃತ್ತಿಪರ ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ ಸಿಗುವಂತಾಗಲಿ ಮತ್ತು ಸಂಘಟನೆಯು ಮತ್ತಷ್ಟು ಬಲಿಷ್ಠವಾಗಿ ಬೆಳೆಯಲಿ ಎಂದು ಗಣ್ಯರು ಈ ಸಂದರ್ಭದಲ್ಲಿ ಆಶಿಸಿದರು.



