ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ವೇದಗಳನ್ನು ನಾಲ್ಕು ಭಾಗಗಳಾಗಿ ವ್ಯವಸ್ಥಿತವಾಗಿ ವಿಂಗಡಿಸಿದ ಮಹರ್ಷಿ ವೇದವ್ಯಾಸರು ಭಾರತೀಯ ಸನಾತನ ಧರ್ಮವನ್ನು ಪ್ರಸಾರ ಮಾಡಿ ಸಂರಕ್ಷಿಸಿದ ಮಹಾನ್ ಸಂತ ಮಹಾತ್ಮರು ಎಂದು ಚಳ್ಳಕೆರೆಯ ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥೆ ಎಚ್. ಲಕ್ಷ್ಮೀದೇವಮ್ಮ ತಿಳಿಸಿದರು.
ನಗರದ ತ್ಯಾಗರಾಜನಗರದ ಸದ್ಭಕ್ತರಾದ ತಿಪ್ಪಮ್ಮ ಉಮಾಶಂಕರ್ ಅವರ ಸೂಜಿ ಮಲ್ಲೇಶ್ವರ ನಿವಾಸದಲ್ಲಿ "ಗುರು ಪೂರ್ಣಿಮೆ"ಯ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು "ಗುರು ಪೂರ್ಣಿಮೆ"ಯ ವಿಶೇಷತೆಗಳ ಬಗ್ಗೆ ಉಪನ್ಯಾಸ ನೀಡಿದರು.
ಆಷಾಡ ಪೂರ್ಣಿಮೆಯನ್ನು ವ್ಯಾಸ ಪೂರ್ಣಿಮೆಯಾಗಿ ಆಚರಿಸಲಾಗುತ್ತದೆ. ವ್ಯಾಸರು ಪರಾಶರ ಮುನಿ ಮತ್ತು ಸತ್ಯವತಿಯರ ಮಗನಾಗಿ ಜನಿಸುತ್ತಾರೆ. ಭಗವಾನ್ ವ್ಯಾಸರ ಮಗ ಶುಕ ಮಹಾಮುನಿ. ಜಗತ್ತಿನ ಸಮಸ್ತ ಜ್ಞಾನವು ವ್ಯಾಸರಿಂದ ಸೃಷ್ಟಿಯಾಗಿದೆ. ಹದಿನೆಂಟು ಪುರಾಣಗಳನ್ನು, ಒಂದು ಲಕ್ಷ ಶ್ಲೋಕಗಳನ್ನು ಒಳಗೊಂಡ ಮಹಾಭಾರತವನ್ನು ಬರೆದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ಮಹರ್ಷಿ ವೇದವ್ಯಾಸರ ಮಹಿಮೆಯನ್ನು ವರ್ಣಿಸಿದರು.
ಗುರುಪೂರ್ಣಿಮೆಯ ಪ್ರಯುಕ್ತ ಸತ್ಸಂಗ ಕೇಂದ್ರದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ಗೀತಾ ನಾಗರಾಜ್, ಗೀತಾ ಪ್ರಕಾಶ್, ತಿಪ್ಪಮ್ಮ, ಮೋಹಿನಿ, ಪ್ರಮೀಳಾ ಜಗದೀಶ್, ಯಶೋಧಾ ದೇವರಾಜ್, ಗೀತಾ ಸುಂದರೇಶ್ ಅವರಿಂದ ವಿಶೇಷ ಭಜನೆ ನಡೆದರೆ ಯತೀಶ್ ಎಂ ಸಿದ್ದಾಪುರ ಅವರಿಂದ "ಶ್ರೀಶಾರದಾದೇವಿ ಜೀವನಗಂಗಾ" ಗ್ರಂಥ ಪಾರಾಯಣ, ಆರತಿ, ಪ್ರಸಾದ ವಿನಿಯೋಗ ನಡೆಯಿತು.
ವಿಶೇಷ ಸತ್ಸಂಗದಲ್ಲಿ ಸುಧಾಮಣಿ, ಪುಷ್ಪಲತಾ ವಿಜಯ್, ಜಯಮ್ಮ, ವಿಜಯಲಕ್ಷ್ಮೀ, ಪ್ರೇಮಾ, ಸುವರ್ಣ ನಾಗರಾಜ್, ಸರಸ್ವತಿ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.



