ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಕಟ್ಟಡ ನಿರ್ಮಾಣ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಳ್ಳಲು ಮುಂದಾಗಿದೆ.
ಪ್ರಸ್ತುತ ಇರುವ ಕಟ್ಟಡ ಉಲ್ಲಂಘನೆ ವಿನಾಯಿತಿ ಮಿತಿಯನ್ನು ಶೇಕಡಾ 5 ರಿಂದ ಶೇಕಡಾ 15 ಕ್ಕೆ ಹೆಚ್ಚಿಸಲು ಸರ್ಕಾರ ಒಪ್ಪಿಗೆ ನೀಡಿದೆ.
ವಿನಾಯಿತಿ ಮಿತಿ ಹೆಚ್ಚಳ: ಕಟ್ಟಡದ ಎತ್ತರ, ಎಫ್.ಎಲ್.ಆರ್ (FAR), ಮತ್ತು ಸೆಟ್ ಬ್ಯಾಕ್ ನಿಯಮಗಳ ಉಲ್ಲಂಘನೆಯ ವಿನಾಯಿತಿ ಮಿತಿಯನ್ನು ಈಗಿರುವ ಶೇ. 5 ರ ಬದಲಾಗಿ ಶೇ. 15 ಕ್ಕೆ ಹೆಚ್ಚಿಸಲಾಗಿದೆ.
ಸ್ವಾಧೀನಾನ್ಭವ ಪ್ರಮಾಣ ಪತ್ರ (OC):
ಶೇ. 15 ರಷ್ಟು ಪ್ರಮಾಣದ ನಿಯಮ ಉಲ್ಲಂಘನೆಗಳಿರುವ ಕಟ್ಟಡಗಳಿಗೆ ನಿಗದಿತ ದಂಡವನ್ನು ಪಾವತಿಸಿಕೊಂಡು, 'ಸ್ವಾಧೀನಾನ್ಭವ ಪ್ರಮಾಣ ಪತ್ರ' (Occupancy Certificate) ನೀಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ.
ಸುಪ್ರೀಂ ಕೋರ್ಟ್ ಆದೇಶ: ಸ್ವಾಧೀನಾನ್ಭವ ಪ್ರಮಾಣ ಪತ್ರ ಪಡೆಯದ ಕಟ್ಟಡಗಳಿಗೆ ವಿದ್ಯುತ್ ಹಾಗೂ ನೀರು ಸರಬರಾಜು ಸೌಕರ್ಯವನ್ನು ಒದಗಿಸಬಾರದು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಸಚಿವ ಸಂಪುಟದಲ್ಲಿ ತೀರ್ಮಾನ: ಈ ಆದೇಶದಿಂದ ಸಾರ್ವಜನಿಕರಿಗೆ ಎದುರಾಗಿರುವ ಸಮಸ್ಯೆಯನ್ನು ನಿವಾರಿಸುವ ಉದ್ದೇಶದಿಂದ, ಮುಂದಿನ ಸಚಿವ ಸಂಪುಟ (Cabinet) ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಇತರೆ ಸಚಿವರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಪ್ರಮುಖ ನಿರ್ಧಾರದ ಕುರಿತು ಮಾಹಿತಿ ಹಂಚಿಕೊಳ್ಳಲಾಗಿದೆ. ಇದರಿಂದಾಗಿ ನಿಯಮಾವಳಿಗಳ ಸಣ್ಣಪುಟ್ಟ ಉಲ್ಲಂಘನೆಗಳಿಂದಾಗಿ ಒಸಿ (OC) ಸಿಗದೆ, ವಿದ್ಯುತ್ ಹಾಗೂ ನೀರಿನ ಸಂಪರ್ಕ ವಂಚಿತರಾಗಿದ್ದ ಸಾವಿರಾರು ಕಟ್ಟಡ ಮಾಲೀಕರಿಗೆ ದೊಡ್ಡ ರಿಲೀಫ್ ಸಿಗುವ ಸಾಧ್ಯತೆಯಿದೆ.



