ಚಂದ್ರವಳ್ಳಿ ನ್ಯೂಸ್, ಮೈಸೂರು:
"ದೇಶದಲ್ಲಿ ಬಿಜೆಪಿ ಪಕ್ಷವು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದು, ಮುಂಬರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ತನಗೆ ವಿರೋಧವಾಗಿರುವ ಮತಗಳನ್ನು ಕೈಬಿಡುವ ಮೂಲಕ 'ಮತ ದ್ರೋಹ' ಮಾಡಲು ಸಂಚು ರೂಪಿಸಿದೆ," ಎಂದು ಮಾಜಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಆಯೋಜಿಸಲಾಗಿದ್ದ ಎಸ್ಐಆರ್ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಜೂನ್ 30 ರಿಂದ ಜುಲೈ 29 ರ ವರೆಗೆ ನಡೆಯಲಿರುವ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಅತ್ಯಂತ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಬಡವರು, ರೈತರು ಮತ್ತು ಅಲ್ಪಸಂಖ್ಯಾತರೇ ಬಿಜೆಪಿ ಟಾರ್ಗೆಟ್:
"ಇಡೀ ದೇಶದ 141 ಕೋಟಿ ಜನಸಂಖ್ಯೆಯಲ್ಲಿ 96 ಕೋಟಿ ಮತದಾರರಿದ್ದಾರೆ. ನಮ್ಮಲ್ಲಿ ಬಹಳಷ್ಟು ಜನ ಕೇವಲ 1,000 ದಿಂದ 5,000 ಮತಗಳ ಅಂತರದಿಂದ ಗೆದ್ದವರಿದ್ದಾರೆ. ಇಂತಹ ಕಡೆ ನಾಲ್ಕೈದು ಸಾವಿರ ಮತಗಳನ್ನು ಕಿತ್ತು ಹಾಕಿದರೆ ಗೆಲುವು ಕಷ್ಟಸಾಧ್ಯ. ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಬಡವರು, ರೈತರು, ಕಾರ್ಮಿಕರು ಹಾಗೂ ಅಲ್ಪಸಂಖ್ಯಾತರ ಮತಗಳನ್ನು ಡಿಲೀಟ್ ಮಾಡುವುದೇ ಬಿಜೆಪಿಯ ಮುಖ್ಯ ಟಾರ್ಗೆಟ್ ಆಗಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಸೀಟುಗಳು 303 ರಿಂದ 240ಕ್ಕೆ ಇಳಿದಿವೆ. ಬೆಲೆಯೇರಿಕೆ, ವಚನ ಭ್ರಷ್ಟತೆ ಮತ್ತು ನಿರುದ್ಯೋಗದಿಂದ ತತ್ತರಿಸಿರುವ ಜನ ಕೊಟ್ಟಿರುವ ಈ ಫಲಿತಾಂಶವನ್ನು ಬಿಜೆಪಿಯವರು ಮುಂದಿನ ದಿನಗಳಲ್ಲಿ ಎಸ್ಐಆರ್ ಮೂಲಕ ಬದಲಾಯಿಸಲು ಹೊರಟಿದ್ದಾರೆ," ಎಂದು ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.
ಸಂವಿಧಾನಬದ್ಧ ಚುನಾವಣಾ ಆಯೋಗ ಇಲ್ಲ!:
ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಂದರೆ 2014ರ ನಂತರ ಚುನಾವಣಾ ವ್ಯವಸ್ಥೆ ಹದಗೆಟ್ಟಿದೆ ಎಂದು ದೂರಿದ ಸಿದ್ದರಾಮಯ್ಯ, "ಈಗ ದೇಶದಲ್ಲಿ ಸಂವಿಧಾನಬದ್ಧವಾದ ಚುನಾವಣಾ ಆಯೋಗ ಇಲ್ಲ ಎನ್ನುವುದನ್ನು ಯಾರೂ ಮರೆಯಬೇಡಿ. ಅರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಅಧಿಕಾರ ಆಯೋಗಕ್ಕೆ ಇಲ್ಲದಿದ್ದರೂ, ಬಿಜೆಪಿ ಸರ್ಕಾರದ ಪ್ರಭಾವಕ್ಕೆ ಒಳಗಾಗಿ ಶೇ. 64 ರಷ್ಟು ಇರುವ ವಿಪಕ್ಷಗಳ ಮತಗಳ ಪೈಕಿ ಶೇ. 10 ರಷ್ಟು ಮತಗಳನ್ನು ಕೈಬಿಟ್ಟರೆ ಪ್ರಜಾಪ್ರಭುತ್ವಕ್ಕೆ ದೊಡ್ಡ ಧಕ್ಕೆಯಾಗಲಿದೆ. ಬಿಜೆಪಿಯವರಿಗೆ ಸರ್ವಾಧಿಕಾರದಲ್ಲಿ ಮಾತ್ರ ನಂಬಿಕೆಯಿದ್ದು, 'ಒನ್ ನೇಷನ್, ಒನ್ ಎಲೆಕ್ಷನ್' ನೀತಿಯನ್ನು ಹೇರಲು ಹೊರಟಿದ್ದಾರೆ," ಎಂದರು.
ಆರ್ಎಸ್ಎಸ್ ಸರ್ವಾಧಿಕಾರದ ಮೂಲ:
ಸಂಘ ಪರಿವಾರದ ಇತಿಹಾಸವನ್ನು ಕೆದಕಿದ ಮಾಜಿ ಸಿಎಂ, "ಆರ್ಎಸ್ಎಸ್ ಸಂಸ್ಥಾಪಕ ಹೆಡ್ಗೆವಾರ್ ಅವರು ತಮ್ಮ ಆಪ್ತರನ್ನು ಇಟಲಿ ಮತ್ತು ಜರ್ಮನಿಗೆ ಕಳುಹಿಸಿ ಅಲ್ಲಿನ ಸರ್ವಾಧಿಕಾರವನ್ನು ಅಧ್ಯಯನ ಮಾಡಲು ಬಿಟ್ಟಿದ್ದರು. ಅಲ್ಲಿಂದಲೇ ಇವರ ಸರ್ವಾಧಿಕಾರದ ವ್ಯಾಮೋಹ ಹುಟ್ಟಿದ್ದು. ಹಿಂದುತ್ವದ ಮಾತಾಡುವ ಇವರು ಜಾತಿ, ವರ್ಣಾಶ್ರಮದ ಹೆಸರಲ್ಲಿ ಜನರನ್ನು ಶೋಷಣೆ ಮಾಡಿದ್ದಾರೆ. ಸಾಮಾಜಿಕ ನ್ಯಾಯ ಬಂದರೆ ತಮಗೆ ಶೋಷಣೆಗೆ ಅವಕಾಶ ಇರುವುದಿಲ್ಲ ಎಂದು ಅವರಿಗೆ ಗೊತ್ತು. ಶೂದ್ರ ಸಮುದಾಯ ಎಂದಿಗೂ ಬಿಜೆಪಿ ಜೊತೆ ಹೋಗಬಾರದು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ, ಬ್ರಿಟಿಷರ ಕ್ಷಮೆ ಕೇಳಿ ಜೈಲಿಂದ ಹೊರಬಂದ ಸಾವರ್ಕರ್ ಅವರಂತಹವರನ್ನು ವೈಭವೀಕರಿಸುವವರಿಂದ ದೇಶ ರಕ್ಷಣೆ ಸಾಧ್ಯವಿಲ್ಲ," ಎಂದು ಆಕ್ರೋಶ ಹೊರಹಾಕಿದರು.
ಕಾರ್ಯಕರ್ತರಿಗೆ ಹಾಗೂ ನಾಯಕರಿಗೆ ಸಿದ್ದರಾಮಯ್ಯ ನೀಡಿದ ಮಹತ್ವದ ಕರೆ:ಒಂದು ತಿಂಗಳ ಕಾಲ ಕಠಿಣ ನಿಗಾ: ಜೂನ್ 30 ರಿಂದ ಜುಲೈ 29 ರ ವರೆಗೆ ಎಲ್ಲಾ ಹಾಲಿ, ಮಾಜಿ ಶಾಸಕರು, ಸಂಸದರು ಮತ್ತು ನಾಯಕರು ಎಲ್ಲ ಕೆಲಸಗಳನ್ನು ಬಿಟ್ಟು ಎಸ್ಐಆರ್ ಪ್ರಕ್ರಿಯೆಯ ಮೇಲೆ ನಿಗಾ ಇಡಬೇಕು.
ಮನೆ ಮನೆಗೆ ಭೇಟಿ: ಬಿಎಲ್ಒ ಗಳ ಜೊತೆ ಸಮನ್ವಯ ಸಾಧಿಸಿ ಮನೆ ಮನೆಗೆ ತೆರಳಿ ಪರಿಶೀಲಿಸಬೇಕು.
ಸ್ಥಳೀಯ ಬೂತ್ ಸಮಿತಿ: ಪ್ರತಿ ಬೂತ್ಗೆ ಕನಿಷ್ಠ ಇಬ್ಬರು ಸ್ಥಳೀಯ ಮತದಾರರನ್ನು ಜವಾಬ್ದಾರರನ್ನಾಗಿ ಆಯ್ಕೆ ಮಾಡಬೇಕು.
ಫಾರ್ಮ್ ಭರ್ತಿ ಮತ್ತು ರಶೀದಿ: ಎನಮರೇಷನ್ ಫಾರ್ಮ್ಗಳನ್ನು ಸರಿಯಾಗಿ ಭರ್ತಿ ಮಾಡಿ, ಕಡ್ಡಾಯವಾಗಿ ಸ್ವೀಕೃತಿ ದೃಢೀಕರಣ ಪಡೆಯಬೇಕು.
"ನನ್ನ ರಾಜಕೀಯ ಮುಗಿಯುತ್ತಾ ಬಂದಿದೆ, ಆದರೆ ನೀವು ಇನ್ನೂ ರಾಜಕೀಯ ಮಾಡಬೇಕಾದವರು. ಈಗ ಎಚ್ಚರ ತಪ್ಪಿದರೆ ನಿಮ್ಮ ರಾಜಕೀಯ ಬದುಕಿನ ಮಾರಣಹೋಮ ನಿಶ್ಚಿತ. ದೇಶದಲ್ಲಿ ಒಮ್ಮೆ ಪ್ರಜಾಪ್ರಭುತ್ವ ಹೋದರೆ ಮತ್ತೆ ಗುಲಾಮಗಿರಿ ಬರುತ್ತದೆ ಎಚ್ಚರ! ಒಬ್ಬನೇ ಒಬ್ಬ ಅರ್ಹ ಮತದಾರ ಪಟ್ಟಿಯಿಂದ ಬಿಟ್ಟುಹೋಗದಂತೆ ಕೈಮುಗಿದು ಪ್ರಾರ್ಥಿಸುತ್ತೇನೆ."
ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ.
ಇದೇ ಸಂದರ್ಭದಲ್ಲಿ, ಮತದಾರರ ಜಾಗೃತಿಗಾಗಿ ಇಡೀ ರಾಜ್ಯ ಪ್ರವಾಸ ಮಾಡುತ್ತಿರುವ ಸುದರ್ಶನ್ ಅವರ ಕಾರ್ಯವನ್ನು ಸಿದ್ದರಾಮಯ್ಯ ಶ್ಲಾಘಿಸಿದರು. ಸಂವಿಧಾನ ಮತ್ತು ದೇಶವನ್ನು ಉಳಿಸುವ ಶಕ್ತಿ ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಇದೆ ಎಂದು ಅವರು ಸಮಾವೇಶದಲ್ಲಿ ಪುನರುಚ್ಚರಿಸಿದರು.
ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಚಿವ ಡಾ. ಎಚ್.ಸಿ.ಮಹದೇವಪ್ಪ, ವೆಂಕಟೇಶ್, ತನ್ವೀರ್ ಸೇಠ್ ಸೇರಿದಂತೆ ನಮ್ಮ ಪಕ್ಷದ ಹಾಲಿ, ಮಾಜಿಶಾಸಕರು, ಸಂಸದರು, ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.



