ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಬಿಡದಿ ಟೌನ್ಶಿಪ್ ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನಡುವಿನ ರಾಜಕೀಯ ಜಟಾಪಟಿ ಮತ್ತಷ್ಟು ತೀವ್ರಗೊಂಡಿದೆ. "ನಾನು ಮುಖ್ಯಮಂತ್ರಿಯಾಗಿದ್ದಾಗ ಐದು ಟೌನ್ಶಿಪ್ ಮಾಡಲು ನಿರ್ಧರಿಸಿದ್ದು ನಿಜ, ಇದನ್ನು ನೂರಾರು ಬಾರಿ ಹೇಳಿದ್ದೇನೆ. ಆದರೆ, ನಿಮ್ಮ ರೀತಿ ರೈತರಿಗೆ ನೋವು ಕೊಟ್ಟು, ಬಲವಂತವಾಗಿ ಒಕ್ಕಲೆಬ್ಬಿಸುವ ಕೆಲಸವನ್ನು ನಾನು ಎಂದಿಗೂ ಮಾಡಲಿಲ್ಲ" ಎಂದು ಎಚ್.ಡಿ. ಕುಮಾರಸ್ವಾಮಿ ನೇರವಾಗಿ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿ ವಾಗ್ದಾಳಿ ನಡೆಸಿದ ಬೆನ್ನಲ್ಲೇ, ದೆಹಲಿಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.
'ಅವಶ್ಯಕತೆ ಇಲ್ಲದಿದ್ದರೆ ಕೈ ಹಾಕಿದ್ದು ಯಾಕೆ?':
"ಬಿಡದಿ ಯೋಜನೆಯ ಪಿತಾಮಹ ನಾನಲ್ಲ, ಇದು ನನ್ನ ಕನಸಿನ ಯೋಜನೆಯೂ ಅಲ್ಲ, ಇದರ ಅವಶ್ಯಕತೆಯೇ ಇಲ್ಲ" ಎಂಬ ಮುಖ್ಯಮಂತ್ರಿಗಳ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, "ಯೋಜನೆಯ ಅವಶ್ಯಕತೆಯೇ ಇಲ್ಲ ಎಂದಾದರೆ ಇದಕ್ಕೆ ಕೈ ಹಾಕಿದ್ದು ಯಾಕೆ? ಯಾರು ಇವರಿಗೆ ಇದನ್ನು ಮಾಡಲು ಹೇಳಿದ್ದು?" ಎಂದು ಪ್ರಶ್ನಿಸಿದರು. ಜೊತೆಗೆ, "ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾದ ದಿನದಿಂದ ಸ್ವಂತಿಕೆ ಎನ್ನುವುದೇ ಇಲ್ಲ. ವಿಧಾನಸೌಧದ ಮೆಟ್ಟಿಲಿಗೆ ಗೌರವ ಸಲ್ಲಿಸುವುದರಿಂದ ಹಿಡಿದು ಎಲ್ಲವನ್ನೂ ಪ್ರಧಾನಿ ನರೇಂದ್ರ ಮೋದಿ ಅವರಿಂದ ಕಾಪಿ ಮಾಡಿದ್ದಾರೆ" ಎಂದು ಲೇವಡಿ ಮಾಡಿದರು.
ನಮ್ಮ ಆಡಳಿತದಲ್ಲಿ ಏಜೆಂಟರು ಇರಲಿಲ್ಲ:
ಈ ಹಿಂದೆ ಎಂ.ಬಿ ಪಾಟೀಲ್ ಅವರು ಕೈಗಾರಿಕೆ ಸಚಿವರಾಗಿದ್ದಾಗ ಭೂಮಿ ಹಂಚಿಕೆಗೆ ಯಾವ ಏಜೆಂಟ್ಗಳನ್ನು ಇಟ್ಟುಕೊಂಡಿದ್ದರು ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ತಾವೆಂದೂ ಆಡಳಿತದಲ್ಲಿ ಏಜೆಂಟರನ್ನು ಇಟ್ಟುಕೊಂಡಿರಲಿಲ್ಲ ಎಂದು ಸ್ಪಷ್ಟಪಡಿಸಿದರು. "ಅಂದು ಒಂದೂವರೆ ಲಕ್ಷ ರೂ. ಗೆ ಭೂಮಿ ಕೊಟ್ಟಿರಬಹುದು, ಅದಕ್ಕಿಂದು ಕೋಟ್ಯಾಂತರ ರೂಪಾಯಿ ಬೆಲೆ ಇರಬಹುದು. ಆದರೆ ಆವತ್ತು ರೈತರು ಭೂಮಿಗಾಗಿ ಹೋರಾಟ ಮಾಡಿರಲಿಲ್ಲ. ನಾನು ಆಕಸ್ಮಿಕವಾಗಿ ಸಿಎಂ ಆದರೂ ಬೆಂಗಳೂರಿನ ಅಭಿವೃದ್ಧಿಗೆ 2006 ರಲ್ಲೇ ಇನರ್ ರಿಂಗ್ ರೋಡ್, ರಾಜಾಕಾಲುವೆ ರಸ್ತೆ ಹಾಗೂ 5 ಟೌನ್ಶಿಪ್ಗಳನ್ನು ಮಾಡಲು ನಿರ್ಧರಿಸಿದ್ದೆ" ಎಂದರು.
ಯಾರ ನೇತೃತ್ವದಲ್ಲಿ ಸಮಿತಿ ರಚನೆ?:
ಭೂಮಿಯನ್ನು ಒತ್ತಾಯದಿಂದ ಪಡೆಯುವುದಿಲ್ಲ ಮತ್ತು ಈ ಬಗ್ಗೆ ಪರಿಶೀಲಿಸಲು ಸಮಿತಿ ರಚನೆ ಮಾಡುವುದಾಗಿ ಸಿಎಂ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಯಾರ ನೇತೃತ್ವದಲ್ಲಿ ಸಮಿತಿ ರಚನೆ ಮಾಡ್ತಾರೆ? ನನ್ನದೂ ಜಮೀನು ಕೇತಾಗನಹಳ್ಳಿಯಲ್ಲಿದೆ. ಅಸೂಯೆ ಪಡೋದು ನನ್ನ ಚಾಳಿ ಅಲ್ಲ. ನಾನು ಸಿನಿಮಾದಲ್ಲಿದ್ದಾಗಲೇ ಜಮೀನು ಖರೀದಿಸಿದ್ದೆ. ಈವರೆಗೂ ಅದು ಪೋಡಿಯೂ ಆಗಿಲ್ಲ, ನಾನು ಯಾರಿಗೂ ಬೆದರಿಸಿಯೂ ಇಲ್ಲ" ಎಂದು ಸ್ಪಷ್ಟನೆ ನೀಡಿದರು.
ಎಚ್ಡಿಕೆ ಗಂಭೀರ ಆರೋಪ:
"ನಾವು ಬಿಡದಿ ಯೋಜನೆ ಬಗ್ಗೆ ಯೋಚಿಸಿದಾಗ ಏಕಾಏಕಿ ರೈತರನ್ನು ಹೊರಹಾಕಲಿಲ್ಲ. ರೈತರು ಹಾಗೂ ಮುಖಂಡರ ಜೊತೆ ಮೂರು ಬಾರಿ ಸಭೆ ನಡೆಸಿ ಅಭಿಪ್ರಾಯ ಕೇಳಿದ್ದೆವು. ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರವು ನ್ಯಾಷನಲ್ ಪಬ್ಲಿಕ್ ಸ್ಕೂಲ್ ವಿಚಾರದಲ್ಲಿ ಮಾಡಿದಂತೆ, ಸರ್ಕಾರಿ ದಾಖಲೆಗಳನ್ನು ಕದ್ದು, ದಾಖಲೆಗಳು ಮಿಸ್ಸಿಂಗ್ ಎಂದು ಹೇಳಿ ಜನರನ್ನು ಬೀದಿಗೆ ತಂದು ನಿಲ್ಲಿಸುವ ಕೆಲಸ ಮಾಡುತ್ತಿದೆ" ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.



