ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ತೀವ್ರ ಕುತೂಹಲ ಕೆರಳಿಸಿದ್ದ ಜಿಲ್ಲಾ ಗೊಲ್ಲರ ಸಂಘದ ಚುನಾವಣೆಯಲ್ಲಿ ‘ಮೀಸೆ ಸಿ.ಮಹಲಿಂಗಪ್ಪ’ ಅವರ ನೇತೃತ್ವದ ತಂಡವು ಅಭೂತಪೂರ್ವ ಯಶಸ್ಸು ಸಾಧಿಸುವ ಮೂಲಕ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ಎದುರಾಳಿ ತಂಡವನ್ನು ಮುನ್ನೆಲೆಗೆ ತಂದು ತೆರೆಮರೆಯಿಂದ ರಾಜಕೀಯ ದಾಳ ಉರುಳಿಸುತ್ತಿದ್ದ ಪ್ರಭಾವಿ ನಾಯಕರಿಗೆ ತೀವ್ರ ಮುಖಭಂಗವಾದಂತಾಗಿದೆ.
ಸಂಘದ ಅಸ್ತಿತ್ವ ಮತ್ತು ಸಮಾಜದ ಮುಖಂಡತ್ವಕ್ಕಾಗಿ ನಡೆದ ಈ ಪ್ರತಿಷ್ಠೆಯ ಕಣದಲ್ಲಿ ಮತದಾರರು ಮೀಸೆ ಮಹಾಲಿಂಗಪ್ಪ ಹಾಗೂ ಅವರ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಸ್ಪಷ್ಟ ಜನಾದೇಶ ನೀಡಿದ್ದಾರೆ. ಆರಂಭದಿಂದಲೂ ಹಠಾಹಠಿಗೆ ಸಾಕ್ಷಿಯಾಗಿದ್ದ ಚುನಾವಣಾ ಕಣದಲ್ಲಿ ಅಂತಿಮವಾಗಿ ಮಹಾಲಿಂಗಪ್ಪ ಬಣವು ಸ್ಪಷ್ಟ ಬಹುಮತದೊಂದಿಗೆ ಬೀಗಿದೆ.
ತೆರೆಮರೆಯ ನಾಯಕರಿಗೆ ಶಾಕ್!:
ಈ ಬಾರಿಯ ಚುನಾವಣೆ ಕೇವಲ ಸಂಘದ ಆಡಳಿತ ಹಿಡಿಯುವುದಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಎದುರಾಳಿ ತಂಡದ ಬೆನ್ನಿಗೆ ನಿಂತು, ಜಿದ್ದಾಜಿದ್ದಿನ ವಾತಾವರಣ ಸೃಷ್ಟಿಸಿದ್ದ ಜಿಲ್ಲೆಯ ಕೆಲ ಪ್ರಮುಖ ನಾಯಕರಿಗೆ ಈ ಫಲಿತಾಂಶ ಭಾರೀ ಆಘಾತ ನೀಡಿದೆ. ಸಮಾಜದ ಆಂತರಿಕ ಚುನಾವಣೆಯಲ್ಲಿ ರಾಜಕೀಯ ಪ್ರಭಾವ ಬೀರಲು ಯತ್ನಿಸಿದ ನಾಯಕರ ತಂತ್ರಗಾರಿಕೆಯನ್ನು ಮತದಾರರು ಸಂಪೂರ್ಣವಾಗಿ ಧೂಳೀಪಟ ಮಾಡಿದ್ದಾರೆ.
ವಿಜಯೋತ್ಸವದ ಸಂಭ್ರಮ:
ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಮೀಸೆ ಮಹಲಿಂಗಪ್ಪ ಅವರ ಅಭಿಮಾನಿಗಳು ಹಾಗೂ ಗೊಲ್ಲರ ಸಂಘದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಮಹಾಲಿಂಗಪ್ಪ ಅವರ ಜನಪರ ನಿಲುವು ಹಾಗೂ ಸಮಾಜದ ಮೇಲಿನ ಹಿಡಿತಕ್ಕೆ ಈ ಗೆಲುವು ಮತ್ತೊಮ್ಮೆ ಸಾಕ್ಷಿಯಾಗಿದೆ ಎಂದು ಬೆಂಬಲಿಗರು ಹರ್ಷ ವ್ಯಕ್ತಪಡಿಸಿದ್ದಾರೆ.
"ಇದು ಸಮಾಜದ ಒಗ್ಗಟ್ಟಿಗೆ ಸಿಕ್ಕ ಜಯ. ಯಾವುದೇ ರಾಜಕೀಯ ಪ್ರಭಾವಗಳಿಗೆ ಒಳಗಾಗದೆ, ಸಂಘದ ಅಭಿವೃದ್ಧಿ ಮತ್ತು ಸಮಾಜದ ಕಲ್ಯಾಣವನ್ನು ಬಯಸಿ ಮತದಾರರು ನಮ್ಮ ಕೈ ಹಿಡಿದಿದ್ದಾರೆ. ನಂಬಿಕೆ ಇಟ್ಟು ಗೆಲ್ಲಿಸಿದ ಎಲ್ಲರಿಗೂ ಧನ್ಯವಾದಗಳು."
ಮೀಸೆ ಸಿ.ಮಹಲಿಂಗಪ್ಪ, ನಾಯಕರು, ಗೊಲ್ಲರ ಸಂಘ.
ಈ ಭರ್ಜರಿ ಗೆಲುವಿನೊಂದಿಗೆ ಜಿಲ್ಲಾ ಗೊಲ್ಲರ ಸಂಘದಲ್ಲಿ ಮೀಸೆ ಮಹಾಲಿಂಗಪ್ಪ ಅವರ ಪಾರಮ್ಯ ಮುಂದುವರಿದಂತಾಗಿದ್ದು, ಮುಂಬರುವ ದಿನಗಳಲ್ಲಿ ಸಂಘದ ಬಲವರ್ಧನೆಗೆ ಈ ಫಲಿತಾಂಶ ಹೊಸ ದಿಕ್ಸೂಚಿಯಾಗಲಿದೆ.
ಮೀಸೆ ಸಿ.ಮಹಲಿಂಗಪ್ಪ ಅವರ ತಂಡವನ್ನು ರಾಜ್ಯ ಕಾಡುಗೊಲ್ಲರ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ ಪ್ರತಿನಿಧಿಸಿದರೆ, ಎದುರಾಳಿ ತಂಡದ ಮುಂಗಸವಳ್ಳಿ ಪ್ರಕಾಶ್ ಅವರ ಗುಂಪನ್ನು ಮಾಜಿ ಶಾಸಕರಾದ ಎ.ವಿ ಉಮಾಪತಿ, ಪೂರ್ಣಿಮಾ ಶ್ರೀನಿವಾಸ್ ಮತ್ತು ಡಿ.ಟಿ ಶ್ರೀನಿವಾಸ್ ಅವರು ಪ್ರತಿನಿಧಿಸಿದ್ದರು ಎನ್ನಲಾಗಿದೆ.
ಮೀಸೆ ಸಿ.ಮಹಲಿಂಗಪ್ಪ ಅವರು 1106 ಮತಗಳನ್ನು ಪಡೆಯುವ ಮೂಲಕ ಇಡೀ ತಂಡದಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗಿಂತ ಹೆಚ್ಚಿನ ಮತಗಳನ್ನು ಪಡೆದು ಪಾರಮ್ಯ ಮೆರೆದಿದ್ದಾರೆ.
ಮೀಸೆ ಮಹಲಿಂಗಪ್ಪ ಇವರ ತಂಡದ ಸದಸ್ಯರ ಆಯ್ಕೆ-
ಮೀಸೆ ಸಿ.ಮಹಲಿಂಗಪ್ಪ ವಿಕೆ ಗುಡ್ಡ ಸಮೀಪದ ಹೊಂಬಳದಟ್ಟಿ, ಈರಣ್ಣ ಈಶ್ವರಗೆರೆ, ಮಾಜಿ ಜಿಪಂ ಅಧ್ಯಕ್ಷೆ ಇಂದಿರಾ ಅವರ ಪತಿ ಕಿರಣ್ ಕುಮಾರ್, ಬೂದಿಹಳ್ಳಿ ರಾಜಣ್ಣ, ರಾಮಲಿಂಗ ಯಾದವ್, ಕೆ.ಆರ್.ಹಳ್ಳಿ ಕೆ.ರವಿ, ಆಲೂರು ಸಿ.ತಮ್ಮಣ್ಣ, ಕೆ.ಚಿಕ್ಕಣ್ಣ ಇವರು ಆಯ್ಕೆಯಾಗಿದ್ದಾರೆ.
ಮುಂಗಸವಳ್ಳಿ ಪ್ರಕಾಶ್(ವಕೀಲ) ಇವರ ಗುಂಪಿನಲ್ಲಿ ಆಯ್ಕೆಯಾದ ಸದಸ್ಯರು-
ತಂಡದ ನಾಯಕ ಮುಂಗಸವಳ್ಳಿ ಎಸ್. ಪ್ರಕಾಶ್(783), ಅಶೋಕ್ ಕುಮಾರ್, ಗೊಲ್ಲಹಳ್ಳಿ ಪರಮೇಶ್, ಬಿ.ಡಿ ಬಸವರಾಜ್, ಪಿ.ಆರ್.ವೀರೇಶ್, ದುಮ್ಮಿ ಚಿತ್ತಪ್ಪ, ಬಿ.ಈ ಆಕರ್ಶ್ ಯಾದವ್ ಇವರುಗಳು ಆಯ್ಕೆಯಾಗಿದ್ದಾರೆ.
ಹಿರಿಯೂರು ತಾಲೂಕಿನಿಂದಲೇ ಒಟ್ಟು 7 ಜನ ಸದಸ್ಯರು ಆಯ್ಕೆಯಾಗಿರುವುದು ವಿಶೇಷವಾಗಿದೆ.



