ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶತಮಾನ ಪೂರೈಸಿರುವ ಲಕ್ಷಾಂತರ ಸ್ವಯಂಸೇವಕರನ್ನು ಹೊಂದಿರುವ ರಾಷ್ಟ್ರದ ಹಾಗೂ ವಿಶ್ವದ ಏಕೈಕ ಮಹಾನ್ ದೇಶಭಕ್ತರ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂಬ ಪ್ರಖರ ಸತ್ಯವನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಹತಾಶೆಯ ಮನಸ್ಸಿನ ಬಾಗಿಲ ಕಿಂಡಿಯಿಂದ ಇಣುಕಿ ನೋಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಗ್ರಹ ಮಾಡಿದ್ದಾರೆ.
ಆರ್ ಎಸ್ಎಸ್ ಸಂಘಟನೆ ಮಹಾನ್ ವೃಕ್ಷ, ಈ ವೃಕ್ಷವನ್ನು ಬೇರು ಸಮೇತ ಕಿತ್ತೊಗೆಯುತ್ತೇವೆಂದು ಶತಮಾನಗಳಿಂದಲೂ ವಿಕೃತ ಮನಸ್ಸಿನ ರಾಜಕೀಯ ಶಕ್ತಿಗಳು ವ್ಯರ್ಥ ಪ್ರಲಾಪ ಮಾಡುತ್ತಲೇ ಇವೆ,
RSSನ ರಂಬೆ-ಕೊಂಬೆಗಳನ್ನೂ ಕೊಂಕಿಸಲಾಗದವರ ಸೊಲ್ಲಡಗಿ ದಿಕ್ಕು ಕಾಣದಂತೆ ಧೂಳಿಪಟವಾಗಿವೆ. ಈ ಸಾಲಿಗೆ ಕಾಂಗ್ರೆಸ್ ಸೇರ್ಪಡೆಯಾಗಿರುವುದರಿಂದಲೇ ರಾಷ್ಟ್ರದ ರಾಜಕೀಯ ಭೂಪಟದಲ್ಲಿ ದುರ್ಬೀನು ಹಾಕಿ ಹುಡುಕುವ ದಯನೀಯ ಪರಿಸ್ಥಿತಿಯಲ್ಲಿ ಅಸ್ತಿತ್ವಕ್ಕಾಗಿ ತಿಣುಕಾಡುತ್ತಿದೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಮಾತಿರಲಿ, ಭವಿಷ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವ ಉಳಿಯುತ್ತದೆಯೇ ಎಂಬ ಬಗ್ಗೆ ಪ್ರಿಯಾಂಕ್ ಖರ್ಗೆ ತಲೆಕೆಡಿಸಿಕೊಳ್ಳಲಿ ಎಂದು ವಿಜಯೇಂದ್ರ ಸಲಹೆ ನೀಡಿದ್ದಾರೆ.
“ದಂಡಿಗೆದರಲಿಲ್ಲ ದಾಳಿಗೆದರಲಿಲ್ಲ ಖಾಲಿ ಡಬ್ಬದ ಸದ್ದಿಗೆ ಹೆದರಲಾದೀತೇ?” ಎಂಬ ಮಾತನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ನೆನಪಿಸಬಯಸುವೆ.