ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜಾತಿ ಗಣತಿ ವೇಳೆ ಕರ್ತವ್ಯ ಲೋಪ ಎಸಗಿರುವ ಅರೋಪ ಬೆಂಗಳೂರಿನಲ್ಲಿ ಕೇಳಿ ಬಂದಿದ್ದು 13 ಮಂದಿ ಗಣತಿ ಮೇಲ್ವಿಚಾರಕರಿಗೆ ಪಾಲಿಕೆಯ ಜಂಟಿ ಆಯುಕ್ತರು ನೋಟಿಸ್ ಜಾರಿ ಮಾಡಿದ್ದಾರೆ.
ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಗಣತಿ ಕಾರ್ಯದ ವೇಳೆ ಲೋಪಗಳಾಗಿವೆ ಎಂದು ಆರೋಪಿಸಲಾಗಿದೆ. ನೋಟಿಸ್ನಲ್ಲಿ, ಮೇಲ್ವಿಚಾರಕರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿಲ್ಲ, ತಮ್ಮ ಕಿರಿಯ ಸಿಬ್ಬಂದಿಗೆ ಸರಿಯಾದ ಮಾರ್ಗದರ್ಶನ ನೀಡಿಲ್ಲ ಮತ್ತು ಅವರಿಗೆ ಅಗತ್ಯ ವಿವರಗಳನ್ನು ಒದಗಿಸಿಲ್ಲ ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
ಕೆಲವು ಮೇಲ್ವಿಚಾರಕರು ಐದಕ್ಕಿಂತ ಕಡಿಮೆ ಮನೆಗಳ ಗಣತಿ ಮಾಡಿದ್ದಾರೆಂದು ದೂರಲಾಗಿದೆ. ಇವರ ಕಾರ್ಯ ವೈಖರಿಯಿಂದಾಗಿ ಗಣತಿ ಪ್ರಗತಿಗೆ ಅಡ್ಡಿಯಾಗಿದ್ದು, ಸರ್ಕಾರದ ಆದೇಶಗಳನ್ನು ಧಿಕ್ಕರಿಸಿದಂತಾಗಿದೆ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ. ಇದು ಕರ್ತವ್ಯ ಲೋಪ ಎಂದು ಪರಿಗಣಿಸಲಾಗಿದ್ದು, ಸಂಬಂಧಪಟ್ಟವರು ತಮ್ಮಿಂದಾದ ತಪ್ಪಿಗೆ ವಿವರಣೆ ನೀಡುವಂತೆ ಸೂಚಿಸಲಾಗಿದೆ.

