ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಗುಡೆಕೋಟೆ ಹೆಣ್ಣು, ದುರ್ಗದ ಮದ್ದಹನುಮಪ್ಪನ ಸತಿಯಾಗಿ ನಾಡ ರಕ್ಷಣೆಯಲ್ಲಿ ಸ್ತ್ರೀ ಕುಲಕ್ಕೆ ಮಾದರಿಯಾದ ಒನಕೆ ಓಬವ್ವ ತ್ಯಾಗ-ಬಲಿದಾನದ ಮೂಲಕ ದುರ್ಗವಲ್ಲದೇ ಈ ರಾಜ್ಯಕ್ಕೆ ಆದರ್ಶ ಸ್ತ್ರೀ ಯಾಗಿದ್ದಾಳೆಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಹೇಳಿದರು.
ಚಿತ್ರದುರ್ಗದ ಕೋಟೆ ನಾಡು ಬುದ್ಧ ವಿಹಾರದಲ್ಲಿ ಭಾನುವಾರ ನಡೆದ ವೀರ ವನಿತೆ ಓಬವ್ವ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಚಿತ್ರದುರ್ಗದಲ್ಲಿ ಒಭವ್ವ ಜಯಂತಿ ಮಹಿಳೆಯರ ಶೌರ್ಯ, ಸಾಹಸದ ಉತ್ಸವವಾಗಿ ಪ್ರತಿವರ್ಷ ಎಲ್ಲಾ ಜಾತಿ, ಮತ, ಪಂಥ, ಧರ್ಮದ ಮಹಿಳೆಯರು ಪಾಲ್ಗೊಂಡು ಆಚರಿಸುವಂತಾಗಬೇಕು. ಅಸಮಾನತೆ ಸಾರುವ ಶ್ರೇಣಿಕೃತ ಸಮಾಜವನ್ನು ಗಟ್ಟಿಗೊಳಿಸಲು ಹತ್ತಾರು ಧಾರ್ಮಿಕ ಸಂಸ್ಥೆಗಳು ಕ್ರಿಯಾಶೀಲವಾಗಿರುವ ಈ ಹೊತ್ತಲ್ಲಿ ಸಾಮಾಜಿಕ ಸಾಮರಸ್ಯ ಬೆಸೆಯುವ ಐಕಾನ್ ಆಗಿ ವೀರ ವನಿತೆ ಓಬವ್ವನ ತ್ಯಾಗ ಹೊರಹೊಮ್ಮಬೇಕಾದ ಅನಿವಾರ್ಯತೆ ಇದೆ ಎಂದರು.
ಯುದ್ಧ ನೈಪುಣ್ಯತೆ ಇಲ್ಲದ, ಶೋಷಿತ ಸಮಾಜದ ಹೆಣ್ಣೊಬ್ಬಳು ಸರ್ವ ಜನರು ವಾಸವಿದ್ದ ನಮ್ಮ ಮದಕರಿ ನಾಯಕರ ಕೋಟೆಯನ್ನು ರಕ್ಷಿಸಲು ತನ್ನನ್ನೇ ಅರ್ಪಿಸಿ ಕೊಂಡ ವೀರಗಾಥೆಯು ಪ್ರತಿ ಮನೆಯ ಪ್ರತಿ ಮನಸ್ಸುಗಳ ಮಾತಾಗಬೇಕಿದೆ.
ನಾಡ ರಕ್ಷಣೆಗಾಗಿ ನಿಸ್ವಾರ್ಥದಿಂದ ಅಮರಳಾದ ಓಬವ್ವ ತ್ಯಾಗವನ್ನು ಜನಪರ ಹೋರಾಟಗಾರರು, ಬುದ್ಧ, ಬಸವ, ಅಂಬೇಡ್ಕರ್ ಅನುಯಾಯಿಗಳು ಸಾಮಾಜಿಕ ಸಾಮರಸ್ಯ ಗಟ್ಟಿಗೊಳಿಸಲು ದುರ್ಗದ ಮನೆ ಮನೆಯ ಉತ್ಸವದಂತೆ ಒಬವ್ವಳ ಜಯಂತಿ ಆಚರಿಸುವಂತಾಗಲು ಮುಂದಾಗಬೇಕಿದೆ.
ಮನುಷ್ಯರನ್ನು ಪ್ರೀತಿಸದ ಧರ್ಮದ ರಕ್ಷಣೆಗಾಗಾಗಿ ಪ್ರಾಣಾರ್ಪಣೆ ಮಾಡಿಕೊಳ್ಳು ವುದಕ್ಕಿಂತ ಸರ್ವ ಜನರ ಹಿತರಕ್ಷಣೆಗಾಗಿ ಪ್ರಾಣ ನೀಡುವುದು ಅತ್ಯಂತ ಗೌರವ ಮತ್ತು ಸಾರ್ಥಕ ವಾದದ್ದೆಂದು ಸಾರಿ ಹೇಳುವಲ್ಲಿ ಓಬವ್ವಳ ತ್ಯಾಗವನ್ನು ಅಮರಗೊಳಿಸಬೇಕೆಂದರು.
ಈ ಸಂದರ್ಭದಲ್ಲಿ ಬಿಎಸ್ಐ ಜಿಲ್ಲಾ ಕಾರ್ಯದರ್ಶಿ ನನಿವಾಳ ರವಿಕುಮಾರ್, ಬೆಸ್ಕಾಂ ತಿಪ್ಪೇಸ್ವಾಮಿ, ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಅವಿನಾಶ್, ಉಪನ್ಯಾಸಕ ಈ. ನಾಗೇಂದ್ರಪ್ಪ, ಉಪನ್ಯಾಸಕ ಇಂದೂದರ್ ಗೌತಮ್, ಶಿಕ್ಷಕ ರಾಮಶೇಖರ್, ಬಿಎಸ್ಐ ಜಿಲ್ಲಾ ಕಾರ್ಯದರ್ಶಿ ಶಕುಂತಲಾ, ಜಿ.ಶಾಂತಮ್ಮ, ಉಷಾ, ಮಾನಸ, ಬನ್ನಿ ಕೋಡ್ ರಮೇಶ್, ಸಚಿನ್ ಗೌತಮ್, ತಿಪ್ಪಮ್ಮ, ಶಾಂತಮ್ಮ ಉಪಸ್ಥಿತರಿದ್ದರು.