ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪರಿಶಿಷ್ಟ ಜಾತಿ ಸಮೀಕ್ಷೆ ಸರ್ವೇ ಕಾರ್ಯ ನಡೆಯುತ್ತಿರುವ ಆನ್ಲೈನ್ ತಂತ್ರಾಂಶವು ಸುಧಾರಿತ ಹಾಗೂ ಆಧುನೀಕ ತಂತ್ರಜ್ಞಾನವುಳ್ಳ ತಂತ್ರಾಂಶವಲ್ಲದ ಕಾರಣ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಗಣತಿ ಕಾರ್ಯ ವಿಳಂಬವಾಗುತ್ತಿದೆ. ಸಂಬಂಧ ಪಟ್ಟವರು ಈ ಸಮಸ್ಯೆಯ ಗಂಭೀರತೆ ಪರಿಗಣಿಸಿ ತುರ್ತಾಗಿ ಸಮೀಕ್ಷೆ ಕಾರ್ಯ ನಡೆಯುವಂತೆ ಕ್ರಮ ಕೈಗೊಳ್ಳಬೇಕೆಂದು ಡಾ.ಬಿ.ಆರ್ ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.
ಜಾತಿ ಜನಸಂಖ್ಯೆಗನುಗುಣವಾಗಿ ಒಳಮೀಸಲಾತಿ ಹಂಚಿಕೆಯಾಗುತ್ತಿದೆಯೆAದು ಗಣತಿ ಆರಂಭಕ್ಕೂ ಮುನ್ನ ಪರಿಶಿಷ್ಠ ಜಾತಿಗಳ ನಂಬಿಕೆಯಾಗಿತ್ತು. ಗಣತಿ ಆರಂಭಿಸುವ ದಿನ ಸುಮಾರು ೪೬ಮಾನದಂಡಗಳು ಅವಶ್ಯಕ ಎಂದು ಆಯೋಗ ಪ್ರಕಟಿಸಿತು. ಆದರೆ ಈ ಮಾನದಂಡಗಳೇ ಪರಿಶಿಷ್ಠ ಜಾತಿಯಲ್ಲಿ ಅತಿ ಹಿಂದುಳಿದಿರುವಿಕೆಯನ್ನು ಗುರುತಿಸಲು ಅವಶ್ಯಕವಾದ ಪ್ಯಾರಾಮೀಟರ್ಗಳೆಂದು ಆಯೋಗದ ಅಧ್ಯಕ್ಷ ನ್ಯಾ.ನಾಗ ಮೋಹನ್ ದಾಸ್ ಘೋಷಿಸಿದರು.
ಇದರಿಂದ ಎಚ್ಚೆತ್ತ ಪರಿಶಿಷ್ಠ ಜಾತಿಗಳ ಮಠಾಧೀಶರು, ರಾಜಕಾರಣಿಗಳು, ಸಂಘಸಂಸ್ಥೆಗಳ ಮುಖಂಡರು ತಮ್ಮ ಜಾತಿಗಳಿಗೆ ಆಸ್ತಿ, ಜಮೀನು, ಕಾರು, ಬೈಕ್ ಮುಂತಾದ ಯಾವುದು ಇಲ್ಲ. ಹಾಗೂ ನಿರುದ್ಯೋಗ ತುಂಬಿದೆ ಎಂದು ಗಣತಿಯಲ್ಲಿ ದಾಖಲಿಸುವಂತೆ ಪತ್ರಿಕಾ ಹೇಳಿಕೆ, ಕರಪತ್ರ ಮುಂತಾದ ಸಾಮಾಜಿಕ ಮಾಧ್ಯಮಗಳ ಮೂಲಕ ತಪ್ಪು ಮಾಹಿತಿ ನೀಡುವಂತೆ ಜಾಗೃತಿಗೊಳಿಸಿದ್ದಾರೆ. ಅದೇ ರೀತಿ ಗಣತಿದಾರರಿಗೆ ಆಯಾ ಸಮುದಾಯದ ಬಹುತೇಕರು ನಮ್ಮಲ್ಲಿ ಯಾವುದೇ ಆಸ್ತಿ, ಜಮೀನು, ಉದ್ಯೋಗ ಇಲ್ಲವೆಂದು ಹೇಳುವುದರಿಂದ ನಿಖರವಾದ ಪ್ಯಾರಾಮೀಟರ್ ಆಯೋಗಕ್ಕೆ ಸಿಗಲು ಸಾಧ್ಯವಿಲ್ಲ. ವಿದ್ಯೆ, ಆಸ್ತಿ, ಉದ್ಯೋಗ, ಸಾಮಾಜಿಕ ತಾರತಾಮ್ಯ ಬಗ್ಗೆ ಖಚಿತ ಮಾಹಿತಿ ಪಡೆಯಲು ಆಯೋಗ ಬೇರೆ ರೀತಿಯ ಮಾನದಂಡ ಬಳಸಬೇಕಿತ್ತು.
ಇಡೀ ರಾಜ್ಯದ ಪರಿಶಿಷ್ಟ ಜಾತಿ ಜನಾಂಗದವರು ಸಮೀಕ್ಷೆಗಾಗಿ ಕಾತುರದಿಂದ ಕಾಯುತ್ತಿದ್ದರು. ಇಂತಹ ಮಹಾತ್ವಕಾಂಕ್ಷೆ ಪರಿಶಿಷ್ಟ ಜಾತಿಗಣತಿ ಸಮೀಕ್ಷೆ ಕಾರ್ಯದ ತಂತ್ರಾಂಶ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡುವಲ್ಲಿ ಆಯೋಗ ವಿಫಲವಾಗಿದೆ. ದಿನಕ್ಕೆ ೨ ರಿಂದ ೫ ಕುಟುಂಬಗಳ ಗಣತಿ ಮಾತ್ರ ನಡೆಯುತ್ತಿದೆ. ಈ ಅಂಶಗಳು ಗಣತಿದಾರರಿಗೆ ಸಮೀಕ್ಷೆಯ ಪೂರ್ಣ ಮಾಹಿತಿ ಕೊರತೆಯೊಂದಿಗೆ ಸರ್ವರ್ ಸಮಸ್ಯೆಯಿಂದ ನಲುಗುತ್ತಿದ್ದಾರೆ. ಗಣತಿದಾರರ ಆಗಮನಕ್ಕಾಗಿ ಭಾರೀ ನೀರಿಕ್ಷೆಯಿಂದ ದಿನವು ಕಾದು ಕುಳಿತ ಜನರಿಗೆ ಸಮೀಕ್ಷೆ ಬಗ್ಗೆ ಉಂಟಾಗಿರುವ ಗೊಂದಲದಿಂದಾಗಿ ನಿರಾಸಕ್ತಿ ಮೂಡಿಸುತ್ತಿದೆ.
ಜಾತಿ ಸಮೀಕ್ಷೆ ಮಾಡಲು ಬರುವಂತ ಬಹುತೇಕ ಅಧಿಕಾರಿಗಳು ಮತ್ತು ಅವರ ಸಹಪಾಠಿಗಳು ದೇವಸ್ಥಾನ, ಯಾವುದಾದರೂ ಮರದ ಕೆಳಗಡೆ ಅಥವಾ ಶಾಲೆಯ ಮುಂಭಾಗದಲ್ಲಿ ಎಲ್ಲಾ ಜನರನ್ನು ಗುಂಪಾಗಿ ಕೂರಿಸಿಕೊಂಡು ಸರ್ವೇ ಮಾಡುತ್ತಿದ್ದಾರೆ. ಇದರಿಂದ ಪರಿಶಿಷ್ಟ ಜಾತಿಗಳ ಮನೆ-ಮನೆಯ ಸಮೀಕ್ಷೆಯೆಂಬ ಆಯೋಗದ ಆಶಯ ಆರಂಭದಲ್ಲಿಯೇ ವಿಫಲವಾದಂತಿದೆ. ಆದ್ದರಿಂದ ಗಣತಿದಾರರು ಮನೆ-ಮನೆಗೆ ತೆರಳಿ ಸಮೀಕ್ಷೆ ಮಾಡುವ ಮೂಲಕ ಪರಿಶಿಷ್ಟ ಜಾತಿಯ ಗಣತಿ ಕಾರ್ಯವನ್ನು ಯಶಸ್ವಿಗೊಳಿಸಬೇಕೆಂದು ಬಿಪಿ ತಿಪ್ಪೇಸ್ವಾಮಿ ಒತ್ತಾಯಿಸಿದ್ದಾರೆ.