ಪಾಕಿಸ್ತಾನ ಮತ್ತು ಪಿಒಕೆಯಲ್ಲಿ ಆಪರೇಷನ್ ಸಿಂಧೂರ್

News Desk

ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಭಾರತೀಯ ಸೇನೆ ಪಾಕಿಸ್ತಾನ ಮತ್ತು ಪಿಒಕೆಯಲ್ಲಿ ವಾಯುದಾಳಿ ನಡೆಸಿ
9 ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸುವ ಮೂಲಕ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರ ಪಡೆದಿದೆ.

ಭಾರತೀಯ ಮೂರು ಸೇನೆಗಳ ಜಂಟಿ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ್ ಎಂದು ಹೆಸರಿಸಲಾಗಿದೆ. ಪಾಕ್‌ ಗಡಿ ಪ್ರವೇಶಿಸದೆ, ಭಾರತೀಯ ಸೈನಿಕರು ಪಾಕಿಸ್ತಾನದೊಳಗೆ 100 ಕಿ.ಮೀ ದೂರದ ಬಹವಾಲ್ಪುರದಲ್ಲಿರುವ ಜೈಶ್-ಎ-ಮೊಹಮ್ಮದ್ ಪ್ರಧಾನ ಕಚೇರಿಯ ಮೇಲೆ ಬಾಂಬ್ ದಾಳಿ ಮಾಡಿ ನಾಶಪಡಿಸಿದೆ.

ಇದಲ್ಲದೆ, ಪಾಕಿಸ್ತಾನದಲ್ಲಿ ಒಟ್ಟು 4 ಮತ್ತು ಪಿಒಕೆಯಲ್ಲಿ 5 ಭಯೋತ್ಪಾದಕ ಅಡಗುತಾಣಗಳನ್ನು ಗುರಿಯಾಗಿಸಿ ಭಾರತ ದಾಳಿ ಮಾಡಿದೆ.

ಭಾರತೀಯ ವಾಯುಪಡೆಯ ಮಿರಾಜ್ –2000 ಮತ್ತು ಸುಖೋಯ್ –30 ಎಂಕೆಐ ನಂತಹ ಹೈಟೆಕ್‌ ಯುದ್ಧ ವಿಮಾನಗಳು ಬಹಾವಲ್ಪುರ್, ಕೋಟ್ಲಿ ಮತ್ತು ಮುಜಫರಾಬಾದ್‌ನಲ್ಲಿರುವ ಭಯೋತ್ಪಾದಕ ಅಡಗುತಾಣಗಳನ್ನು ಗುರಿಯಾಗಿಸಿ ದಾಳಿ ಮಾಡಿವೆ.

ಈ ಪ್ರದೇಶಗಳನ್ನು ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾದಂತಹ ಭಯೋತ್ಪಾದಕ ಸಂಘಟನೆಗಳ ಭದ್ರಕೋಟೆ ಎಂದು ಬಹಳ ಹಿಂದಿನಿಂದಲೂ ಪರಿಗಣಿಸಲಾಗಿತ್ತು. ಇದಲ್ಲದೆ, ಸ್ಕಾಲ್ಪ್ ಕ್ರೂಸ್ ಕ್ಷಿಪಣಿಗಳು ಮತ್ತು ಹ್ಯಾಮರ್ ಕ್ಷಿಪಣಿಗಳನ್ನು ಹೊಂದಿರುವ ಭಾರತೀಯ ವಾಯುಪಡೆಯ (ಐಎಎಫ್) ರಫೇಲ್ ಯುದ್ಧ ವಿಮಾನಗಳು ಸಹ ಈ ಕಾರ್ಯಾಚರಣೆಯಲ್ಲಿ ತಮ್ಮ ಶೌರ್ಯ ಪ್ರದರ್ಶಿಸಿವೆ. ರಫೇಲ್‌ನಲ್ಲಿ ಅಳವಡಿಸಲಾದ ಎರಡು ಶಕ್ತಿಶಾಲಿ ಆಯುಧಗಳಾಗಿದ್ದು, ಇವುಗಳ ಸಹಾಯದಿಂದ ಗುರಿಯ ಮೇಲೆ ನಿಖರವಾಗಿ ದಾಳಿ ಮಾಡಬಹುದು.

 ವಾಯುಪಡೆಯು ಕಾರ್ಯಾಚರಣೆಯನ್ನು ಕೈಗೊಳ್ಳಲು HAROP ಡ್ರೋನ್‌ಗಳಂತಹ ಸ್ಟ್ಯಾಂಡ್-ಆಫ್ ಶಸ್ತ್ರಾಸ್ತ್ರಗಳನ್ನು ಬಳಸಿದೆ. ಸ್ಕಾಲ್ಪ್ ಕ್ರೂಸ್ ಕ್ಷಿಪಣಿಯ ಜೊತೆಗೆ, ಗುರಿಯನ್ನು ತಲುಪಲು ರಫೇಲ್ ಸ್ಪೈಸ್ 2000 ಕ್ಷಿಪಣಿಯನ್ನು ಸಹ ಬಳಸಿದೆ.

ಶಸ್ತ್ರಾಸ್ತ್ರಗಳ ಜೊತೆಗೆ ಭಾರತೀಯ ಸೇನೆಯು ಡ್ರೋನ್‌ಗಳು ಮತ್ತು ಯುಸಿಎವಿಗಳ ಮೂಲಕವೂ ಕಾರ್ಯಾಚರಣೆ ನಡೆಸಿತು. ಈ ದಾಳಿಯಲ್ಲಿ ಭಾರತೀಯ ನೌಕಾಪಡೆಯೂ ಭಾಗಿಯಾಗಿದ್ದು, ಕಡಲ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿತು.

ಭಾರತವು ತನ್ನ ವಾಯುಪ್ರದೇಶದೊಳಗಿನಿಂದ ಕ್ರೂಸ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಬಳಸಿಕೊಂಡು ಪಿಒಕೆ ಮತ್ತು ಪಾಕಿಸ್ತಾನದಲ್ಲಿರುವ ಈ ಭಯೋತ್ಪಾದಕ ಅಡಗುತಾಣಗಳನ್ನು ಗುರಿಯಾಗಿಸಿಕೊಂಡಿದೆ. ಇದಕ್ಕಾಗಿ, ರಫೇಲ್ ಜೊತೆಗೆ, 400-600 ಕಿ.ಮೀ ವ್ಯಾಪ್ತಿಯನ್ನು ಹೊಂದಿರುವ ಬ್ರಹ್ಮೋಸ್ ಸೂಪರ್‌ ಸಾನಿಕ್ ಕ್ಷಿಪಣಿಯಿಂದಲೂ ದಾಳಿ ನಡೆಸಲಾಗಿದೆ. ಇದು ಬಹವಾಲ್ಪುರ್ ಮತ್ತು ಮುಜಫರಾಬಾದ್‌ನಲ್ಲಿರುವ ಜೈಶ್‌ನ ಕಮಾಂಡ್ ಕೇಂದ್ರಗಳು ಮತ್ತು ಶಸ್ತ್ರಾಸ್ತ್ರ ಡಿಪೋಗಳನ್ನು ನಾಶಪಡಿಸಿದೆ. 20 ರಿಂದ 70 ಕಿ.ಮೀ ವ್ಯಾಪ್ತಿಯ ಹ್ಯಾಮರ್ ಗಾಳಿಯಿಂದ ಮೇಲ್ಮೈಗೆ ಚಿಮ್ಮುವ ಕ್ಷಿಪಣಿಯನ್ನು ಪಿಒಕೆಯಲ್ಲಿ ಭಯೋತ್ಪಾದಕ ಅಡಗುತಾಣಗಳನ್ನು ನಾಶಮಾಡಲು ಬಳಸಲಾಗಿದೆ ಎನ್ನಲಾಗಿದೆ.

ರಫೇಲ್ ಜೆಟ್‌ಗಳ ಭಾಗಿಯಾಗಿದೆ ಎಂದು ಪಾಕಿಸ್ತಾನಿ ಮಾಧ್ಯಮಗಳು ಸಹ ಹೇಳಿಕೊಂಡಿವೆ. ಭಾರತೀಯ ವಾಯುಪಡೆಯ ನಾಲ್ಕು ರಫೇಲ್ ಯುದ್ಧ ವಿಮಾನಗಳು ರಾತ್ರಿಯಿಡೀ ಕಾಶ್ಮೀರ ಪ್ರದೇಶದಲ್ಲಿ ನಿಯಂತ್ರಣ ರೇಖೆಯಲ್ಲಿ ಗಸ್ತು ತಿರುಗುತ್ತಿರುವುದು ಕಂಡು ಬಂದಿದೆ ಎಂದು ನೆರೆಯ ದೇಶ ಹೇಳಿಕೊಂಡಿದೆ.

ಬಹಾವಲ್ಪುರದಲ್ಲಿರುವ ಜೈಶ್ ಪ್ರಧಾನ ಕಚೇರಿಯನ್ನು ಸ್ಫೋಟಿಸಲು ಬಂಕರ್ ಬಸ್ಟರ್ ಬಾಂಬ್‌ಗಳನ್ನು ಬಳಸಲಾಗಿದೆ ಎಂಬ ಮಾಹಿತಿಯೂ ಮೂಲಗಳಿಗೆ ಬಂದಿದೆ. ಆದರೆ, ರಕ್ಷಣಾ ಸಚಿವಾಲಯ ಇದನ್ನು ಅಧಿಕೃತವಾಗಿ ದೃಢಪಡಿಸಿಲ್ಲ. ಬಂಕರ್ ಬಸ್ಟರ್ ಬಾಂಬ್‌ಗಳು ಆಳವಾದ ಬಂಕರ್‌ಗಳು ಮತ್ತು ಭೂಗತ ಸೌಲಭ್ಯಗಳನ್ನು ನಾಶಮಾಡಲು ವಿನ್ಯಾಸಗೊಳಿಸಲಾದ ಆಯುಧಗಳಾಗಿವೆ. ಈ ಬಾಂಬ್ 30-60 ಅಡಿ ಆಳದವರೆಗೆ ನೆಲವನ್ನು ಭೇದಿಸಿ ಸ್ಫೋಟಗೊಳ್ಳುತ್ತದೆ. ಅವುಗಳ ತೂಕ 900 ಕೆಜಿಯಿಂದ 13,600 ಕೆಜಿ ವರೆಗೆ ಇರಬಹುದು. ಜೈಶ್ ಪ್ರಧಾನ ಕಚೇರಿಯ ಚಿತ್ರಗಳಲ್ಲಿ, ಮೇಲಿನಿಂದ ಬಿದ್ದ ಬಾಂಬ್‌ಗಳಿಂದ ಇಡೀ ಕಟ್ಟಡವು ನಾಶವಾಗಿರುವುದನ್ನು ಸ್ಪಷ್ಟವಾಗಿ ಕಾಣಬಹುದು.

ಭಾರತವು ಸವಾಯಿ ನಾಲಾ ಕ್ಯಾಂಪ್, ಬಿಲಾಲ್ ಕ್ಯಾಂಪ್, ಕೋಟ್ಲಿ ಗುಲ್ಪುರ್, ಕೋಟ್ಲಿ ಅಬ್ಬಾಸ್ ಕ್ಯಾಂಪ್, ಪಿಒಕೆಯ ಭಿಂಬರ್ ಬರ್ನಾಲಾ ಕ್ಯಾಂಪ್ ಮತ್ತು ಪಾಕಿಸ್ತಾನದ ಬಹವಾಲ್‌ಪುರ್, ಹಾಗೆಯೇ ಸರ್ಜಾಲ್ ಕ್ಯಾಂಪ್, ಮಹ್ಮುನಾ ಜೋಯಾ ಕ್ಯಾಂಪ್, ಮುರಿಡ್ಕೆಯನ್ನು ವೈಮಾನಿಕ ದಾಳಿಯ ಮೂಲಕ ಗುರಿಪಡಿಸಿದೆ. ಈ ದಾಳಿಯಲ್ಲಿ ಜೈಶ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಅವರ 14 ಕುಟುಂಬ ಸದಸ್ಯರು ಸಾವನ್ನಪ್ಪಿದ್ದಾರೆ ಎಂಬ ವರದಿಗಳೂ ಇವೆ.

 

 

Share This Article
error: Content is protected !!
";