ಪುಲ್ವಾಮಾ ದಾಳಿಯಲ್ಲೂ ತನ್ನ ಕೈವಾಡವಿತ್ತು ಎಂದು ಪಾಕಿಸ್ತಾನ

News Desk

ಚಂದ್ರವಳ್ಳಿ ನ್ಯೂಸ್, ಇಸ್ಲಾಮಾಬಾದ್:
2019ರಲ್ಲಿ ನಡೆದ ಪುಲ್ವಾಮಾ ಭಯೋತ್ಪಾದಕ ದಾಳಿ ಕುರಿತು 6 ವರ್ಷಗಳ ಬಳಿಕ ಪಾಕಿಸ್ತಾನ ಸೇನೆ ಸತ್ಯಾಂಶ ಒಪ್ಪಿಕೊಂಡಿದೆ. ಪುಲ್ವಾಮಾ ದಾಳಿಯಲ್ಲಿ ತನ್ನ ಕೈವಾಡವಿತ್ತು ಎಂದು ಹಿರಂಗವಾಗಿಯೇ ಒಪ್ಪಿಕೊಂಡಿದೆ. ಪುಲ್ವಾಮಾ ದಾಳಿಯಲ್ಲಿ ಒಟ್ಟು 40 ಸಿಆರ್‌ಪಿಎಫ್ ಯೋಧರ ಸಾವಿಗೆ ಸಂಭವಿಸಿತ್ತು. ಪಹಲ್ಗಾಮ್ ಉಗ್ರದಾಳಿ ಬಳಿಕ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಭುಗಿಲೆದ್ದಿದ್ದ ಸೇನಾ ಸಂಘರ್ಷ ಕದನ ವಿರಾಮ ಘೋಷಣೆಯೊಂದಿಗೆ ಮೆತ್ತಗಾಗಿದೆ. ಪಾಕಿಸ್ತಾನ ಸೇನೆ ಹಾಲಿ ಸಂಘರ್ಷದಲ್ಲಿ ತಾನು ಮಾಡಿದ ಸುಳ್ಳು ಸಾಧನೆಗಳ ಕುರಿತು ಬೆನ್ನು ತಟ್ಟಿಕೊಳ್ಳುವ ಭರದಲ್ಲಿ ಪುಲ್ವಾಮಾ ಉಗ್ರ ದಾಳಿ ಬಗ್ಗೆ ಪಾಕಿಸ್ತಾನ ಸತ್ಯಾಂಶ ಹೊರ ಬಿದ್ದಿದೆ.

2019ರ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ 40 ಸಿಆರ್‌ಪಿಎಫ್ ಯೋಧರ ಸಾವಿಗೆ ಕಾರಣವಾದ ಕುರಿತು ಭಾರತ ಎಷ್ಟೇ ಆರೋಪ ಮಾಡಿದರೂ ತನ್ನದೇನೂ ಪಾತ್ರವಿಲ್ಲ ಎಂದು ಹೇಳಿಕೊಂಡು ಬರುತ್ತಿದ್ದ ಪಾಕಿಸ್ತಾನ ಇದೀಗ ಸುದ್ದಿಗೋಷ್ಛಿಯಲ್ಲಿ ಬಹಿರಂಗವಾಗಿಯೇ ಉಗ್ರ ದಾಳಿಯಲ್ಲಿ ತನ್ನ ಕೈವಾಡದ ಕುರಿತು ಮಾತನಾಡಿದೆ. ಪಾಕಿಸ್ತಾನದ ಸೇನಾಧಿಕಾರಿಯೊಬ್ಬರು ನೀಡಿದ ಹೇಳಿಕೆ ಇದಕ್ಕೆ ಪುಷ್ಠಿ ನೀಡಿದ್ದು, ಅದು ನಮ್ಮ ಯುದ್ಧತಂತ್ರದ ಪ್ರತಿಭೆಯಾಗಿತ್ತು ಎಂದು ಹೇಳಿಕೊಂಡಿದ್ದಾರೆ.
ಪಾಕಿಸ್ತಾನದ ಮಿಲಿಟರಿ ಅಧಿಕಾರಿಗಳು ನಡೆಸಿದ ಸುದ್ದಿಗೋಷ್ಠಿಯಲ್ಲಿ ಏರ್‌ಮಾರ್ಷಲ್ ಔರಂಗಜೇಬ್ ಅಹ್ಮದ್ ಮಾತನಾಡಿ
, ಪುಲ್ವಾಮಾ ಭಯೋತ್ಪಾದಕ ದಾಳಿಯು ಪಾಕಿಸ್ತಾನಿ ಮಿಲಿಟರಿಯ ಯುದ್ಧತಂತ್ರದ ಭಾಗವಾಗಿತ್ತು ಎಂದು ಹೇಳಿದ್ದಾರೆ.

ಅವರು ಡೈರೆಕ್ಟರ್ ಜನರಲ್ ಐಎಸ್‌ಪಿಆರ್ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಮತ್ತು ನೌಕಾಪಡೆಯ ವಕ್ತಾರರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಪುಲ್ವಾಮಾ ದಾಳಿಯಲ್ಲಿ ತನ್ನ ಪಾತ್ರವನ್ನು ಬಹಿರಂಗವಾಗಿ ಪಾಕ್‌ಒಪ್ಪಿಕೊಂಡಿದ್ದಾರೆ. ಪಾಕಿಸ್ತಾನ ನಡೆಸಿದ ಸುದ್ದಿಗೋಷ್ಟಿಯ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದ್ದು ಈ ವಿಡಿಯೋ ಆಧಾರವಾಗಿಟ್ಟುಕೊಂಡು ಪಾಕ್ ಸೇನೆ ವಿರುದ್ಧ ವ್ಯಾಪಕ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ.

ಪಾಕಿಸ್ತಾನದ ವಾಯುಪ್ರದೇಶ, ಭೂಮಿ, ಜಲಪ್ರದೇಶಗಳು ಅಥವಾ ಇಲ್ಲಿನ ಜನರಿಗೆ ಬೆದರಿಕೆಯೊಡ್ಡಿದರೆ, ಯಾವುದೇ ರಾಜಿ ಸಾಧ್ಯವಿಲ್ಲ. ಅದನ್ನು ಗಮನಿಸದೆ ಬಿಡಲೂ ಸಾಧ್ಯವಿಲ್ಲ. ನಾವು ನಮ್ಮ ರಾಷ್ಟ್ರಕ್ಕೆ ಋಣಿಯಾಗಿದ್ದೇವೆ. ಪಾಕಿಸ್ತಾನಿ ಜನರು ತಮ್ಮ ಸಶಸ್ತ್ರ ಪಡೆಗಳ ಬಗ್ಗೆ ಹೊಂದಿರುವ ಹೆಮ್ಮೆ ಮತ್ತು ನಂಬಿಕೆಯನ್ನ ನಾವು ಯಾವಾಗಲೂ ಎತ್ತಿಹಿಡಿಯುತ್ತೇವೆ. ಪುಲ್ವಾಮಾದಲ್ಲಿ ನಮ್ಮ ಯುದ್ಧ ತಂತ್ರದ ಪ್ರತಿಭೆಯ ಮೂಲಕ ನಾವು ಅದನ್ನು ತಿಳಿಸಲು ಪ್ರಯತ್ನಿಸಿದ್ದೇವೆ. ಈಗಲೂ ನಮ್ಮ ಕಾರ್ಯಾಚರಣೆ ಮತ್ತು ಕಾರ್ಯತಂತ್ರವನ್ನು ಪ್ರದರ್ಶಿಸಿದ್ದೇವೆ. ಇದನ್ನ ಅವರು ಕೂಡ ಗಮನಿಸಿರುತ್ತಾರೆ ಅಂತ ಭಾವಿಸುತ್ತೇನೆ ಎಂದು ಪಾಕಿಸ್ತಾನ ಏರ್‌ಮಾರ್ಷಲ್ ಔರಂಗಜೇಬ್ ಅಹ್ಮದ್ ಹೇಳಿದ್ದಾರೆ.
ಸೈನಿಕರ ಮೇಲಿನ ಹೀನ ದಾಳಿ

ಪುಲ್ವಾಮಾದಲ್ಲಿ 2019ರ ಫೆ. 14 ರಂದು ಸಿಆರ್‌ಪಿಎಫ್ ಯೋಧರಿದ್ದ ಬಸ್ಸಿಗೆ ಜೈಷ್ ಉಗ್ರ ಅದಿಲ್ ಅಹ್ಮದ್ ದಾರ್ ಸ್ಫೋಟಕ ತುಂಬಿದ್ದ ಕಾರನ್ನು ಗುದ್ದಿಸಿದ್ದ. ಈ ವೇಳೆ ಭಾರಿ ಸ್ಫೋಟ ಸಂಭವಿಸಿತ್ತು. ಪರಿಣಾಮ 40 ಮಂದಿ ಸೈನಿಕರು ಹುತಾತ್ಮರಾಗಿದ್ದರು. ಸ್ಫೋಟದ ತೀವ್ರತೆಗೆ ಯೋಧರ ದೇಹದ ಭಾಗಗಳು ಛಿದ್ರ ಛಿದ್ರವಾಗಿ ದೂರದವರೆಗೆ ಚಿಮ್ಮಿತ್ತು.

ಈ ದಾಳಿಗೆ ಪ್ರತೀಕಾರವಾಗಿ ಭಾರತದ ವಾಯುಸೇನೆ ಮೊದಲ ಬಾರಿಗೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರ ಶಿಬಿರಗಳ ಮೇಲೆ ಬಾಂಬ್ ದಾಳಿ ನಡೆಸಿತ್ತು. ಇದೇ ವಾಯು ದಾಳಿಯಲ್ಲಿ ಭಾರತದ ಪರ ದಾಳಿಗೆ ಇಳಿದಿದ್ದ ವಾಯುಸೇನೆ ಪೈಲಟ್ ಅಭಿನಂದನ್ ವರ್ಧಮಾನ್ ರ ವಿಮಾನವನ್ನು ಪಾಕ್ ಸೇನೆ ಹೊಡೆದುರುಳಿಸಿತ್ತು. ಬಳಿಕ ಅಭಿನಂದನ್ ರನ್ನು ಬಂಧಿಸಿತ್ತು. ಬಳಿಕ ಭಾರತ ರಾಜತಾಂತ್ರಿಕತೆಯ ಮೂಲಕ ಅಭಿನಂದನ್ ರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆಸಿಕೊಂಡಿತ್ತು ಎನ್ನುವುದನ್ನು ತಿಳಿಯಬಹುದಾಗಿದೆ.

ಕಳೆದ ರಾತ್ರಿ ಕಾಶ್ಮೀರ ಕಣಿವೆ ಸಾಮಾನ್ಯ ಸ್ಥಿತಿಗೆ ಮರಳಿದೆ. ಆರು ದಿನಗಳಲ್ಲಿ ವಿಮಾನಗಳು, ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಶಬ್ದ, ಸಪ್ಪಳ ಕೇಳಿಸಿದ್ದ ಕಣಿವೆ ರಾಜ್ಯದ ನಿವಾಸಿಗಳು ಮೊದಲ ರಾತ್ರಿಯನ್ನು ಶಾಂತವಾಗಿ ಕಳೆದರು.
ನಿನ್ನೆ ರಾತ್ರಿ
11 ಗಂಟೆ ನಂತರ ಕಾಶ್ಮೀರದ ನಿಯಂತ್ರಣ ರೇಖೆಯ (LoC) ಯಾವುದೇ ವಲಯದಿಂದ ಕದನ ವಿರಾಮ ಉಲ್ಲಂಘನೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದರು. ಜಮ್ಮು ಪ್ರದೇಶದಾದ್ಯಂತ ರಾತ್ರಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಇದರಲ್ಲಿ ಪೂಂಚ್ ಮತ್ತು ರಾಜೌರಿ ಸೇರಿದಂತೆ ಹೆಚ್ಚು ಹಾನಿಗೊಳಗಾದ ಗಡಿ ಜಿಲ್ಲೆಗಳು ಸೇರಿವೆ, ಇಂದು ಬೆಳಗ್ಗೆ ಜನರು ತಮ್ಮ ಎಂದಿನ ಚಟುವಟಿಕೆ ಪುನರಾರಂಭಿಸಿದರು.

ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ ಕದನ ವಿರಾಮವನ್ನು ಆಚರಿಸಲು ಭಾರತ ಮತ್ತು ಪಾಕಿಸ್ತಾನದ ನಡುವಿನ ಒಪ್ಪಂದದ ನಂತರ ಶಾಂತ ಸ್ಥಿತಿ ನಿರ್ಮಾಣವಾಯಿತು. ನಿನ್ನೆ ಸಂಜೆ 5 ಗಂಟೆಯಿಂದ ಜಾರಿಗೆ ಬರುವಂತೆ ಭೂಮಿ, ವಾಯು ಮತ್ತು ಸಮುದ್ರದಲ್ಲಿ ಎಲ್ಲಾ ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸಲು ಎರಡೂ ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒಗಳು) ಒಪ್ಪಿಕೊಂಡಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಘೋಷಿಸಿದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಸ್ಥಿಕೆಯ ಮಾತುಕತೆಗಳ ನಂತರ ಭಾರತ ಮತ್ತು ಪಾಕಿಸ್ತಾನ ಪೂರ್ಣ ಮತ್ತು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಹೇಳಿಕೆ ನೀಡಿದ ಸ್ವಲ್ಪ ಸಮಯದ ನಂತರ ಈ ಘೋಷಣೆ ಹೊರಬಿದ್ದಿದೆ.

ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತೀಯ ಸಶಸ್ತ್ರ ಪಡೆಗಳು ಕಳೆದ ವಾರ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿದ ನಂತರ ಎರಡೂ ದೇಶಗಳ ನಡುವಿನ ಉದ್ವಿಗ್ನತೆ ತೀವ್ರವಾಗಿ ಹೆಚ್ಚಿತ್ತು. ದಾಳಿಯಲ್ಲಿ 26 ಜನರು ಮೃತ- ಮೇ 7 ರಂದು ಪ್ರಾರಂಭವಾದ ಪ್ರತೀಕಾರ ಮತ್ತು ಗಡಿಯಾಚೆಗಿನ ಘರ್ಷಣೆಯಲ್ಲಿ, ಪಾಕಿಸ್ತಾನದ ಕಡೆಯಿಂದ ತೀವ್ರವಾದ ಶೆಲ್ ದಾಳಿ ಮತ್ತು ಡ್ರೋನ್ ದಾಳಿಯಲ್ಲಿ ಐವರು ಭದ್ರತಾ ಸಿಬ್ಬಂದಿ ಸೇರಿದಂತೆ ಕನಿಷ್ಠ 27 ಜನರು ಮೃತಪಟ್ಟು ಅನೇಕರು ಗಾಯಗೊಂಡಿದ್ದಾರೆ.

ಕದನ ವಿರಾಮ ಒಪ್ಪಂದದ ಹೊರತಾಗಿಯೂ, ಶನಿವಾರ ಸಂಜೆ ಕಾಶ್ಮೀರ ಕಣಿವೆಯ ಮೇಲೆ ಒಪ್ಪಂದ ಉಲ್ಲಂಘಿಸಿ ಡಜನ್ಗಟ್ಟಲೆ ಡ್ರೋನ್‌ಗಳು ಹಾರುತ್ತಿರುವುದು ಕಂಡುಬಂದಿದೆ ಎಂದು ವರದಿಯಾಗಿದೆ. ಆದಾಗ್ಯೂ, ರಾತ್ರಿಯಿಡೀ ಯಾವುದೇ ಡ್ರೋನ್ ಚಟುವಟಿಕೆ ವರದಿಯಾಗಿಲ್ಲ. ಭಾನುವಾರ ಪಂಜಾಬ್‌ನಾದ್ಯಂತ, ವಿಶೇಷವಾಗಿ ಕದನ ವಿರಾಮ ಘೋಷಣೆಯ ನಂತರ ಗಡಿ ಪ್ರದೇಶಗಳಲ್ಲಿ ಶಾಂತತೆ ನೆಲೆಸಿತ್ತು. ಪಾಕಿಸ್ತಾನದೊಂದಿಗೆ 553 ಕಿಮೀ ಗಡಿಯನ್ನು ಹಂಚಿಕೊಳ್ಳುವ ಪಂಜಾಬ್, ಅಮೃತಸರ, ಪಠಾಣ್‌ಕೋಟ್ ಮತ್ತು ಫಿರೋಜ್‌ ಪುರದಂತಹ ಗಡಿ ಜಿಲ್ಲೆಗಳಲ್ಲಿ ಜನರು ತಮ್ಮ ದೈನಂದಿನ ಚಟುವಟಿಕೆಗಳಿಗೆ ಮರಳಿರುವ ಕುರಿತು ವರದಿಯಾಗುತ್ತಿವೆ.

Share This Article
error: Content is protected !!
";