ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಧೀರ ಹುತಾತ್ಮ, ದೇಶಭಕ್ತ ಭಗತ್ಸಿಂಗ್ರ ೧೧೯ ನೇ ಜನ್ಮದಿನಾಚರಣೆಯನ್ನು ಎಐಡಿಎಸ್ಓ. ಎಐಡಿವೈಓ. ಎಐಎಂಎಸ್ಎಸ್. ವತಿಯಿಂದ ರೋಟರಿ ಬಾಲಭವನದ ಮುಂಭಾಗದಲ್ಲಿರುವ ಉದ್ಯಾನವನದಲ್ಲಿ ಭಾನುವಾರ ಆಚರಿಸಲಾಯಿತು. ನೂರಾರು ಅಭಿಮಾನಿಗಳು ಪಾಲ್ಗೊಂಡಿದ್ದು, ಭಗತ್ಸಿಂಗ್ರವರ ಭಾವಚಿತ್ರಕ್ಕೆ ಪುರ್ಷ್ಪಾಚನೆ ಸಲ್ಲಿಸಿದರು.
ಎಐಯುಟಿಯುಸಿ ಜಿಲ್ಲಾ ಸಂಚಾಲಕ ರವಿಕುಮಾರ್ ಮಾತನಾಡಿ ಬ್ರಿಟೀಷರ ಎದೆಯಲ್ಲಿ ನಡುಕ ಹುಟ್ಟಿಸಿದ ಕೆಚ್ಚೆದೆಯ ವೀರ ಭಗತ್ಸಿಂಗ್ರವರ ಚಿಂತನೆಗಳನ್ನು ಇಂದಿನ ಯುವ ಪೀಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕೇವಲ ೨೩ ನೇ ವಯಸ್ಸಿಗೆ ನೇಣಿಗೆ ಕೊರಳೊಡ್ಡಿದ ಭಗತ್ಸಿಂಗ್ ವಿಚಾರ ಯಾರಿಗೂ ಬೇಕಾಗಿಲ್ಲ.
ಇಲ್ಲಿಯವರೆಗೂ ಆಳಿದ ಎಲ್ಲಾ ಸರ್ಕಾರಗಳು ನಿರ್ಲಕ್ಷಿಸುತ್ತಲೆ ಬರುತ್ತಿವೆ. ಜಲಿಯನ್ವಾಲಾಬಾಗ್ ಘಟನೆ ಅವರ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಿತು. ಬ್ರಿಟೀಷರ ಗುಲಾಮಗಿರಿ ವಿರುದ್ದ ಧ್ವನಿ ಎತ್ತಿ ದೇಶದ ಸ್ವಾತಂತ್ರ್ಯದ ಬಗೆಗಿನ ಪರಿಕಲ್ಪನೆ ಭಗತ್ಸಿಂಗ್ರಲ್ಲಿ ಪಕ್ವಗೊಂಡು ಇಂದಿಗೂ ಎಲ್ಲರೆದೆಯಲ್ಲಿ ಧೀರ ಹುತಾತ್ಮನಾಗಿ ಉಳಿದುಕೊಂಡಿದ್ದಾರೆಂದು ಸ್ಮರಿಸಿದರು.
ಎಐಎಂಎಸ್ಎಸ್ ಮಹಿಳಾ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಕುಮುದ, ಎಐಡಿಎಸ್ಓ. ಜಿಲ್ಲಾ ಸಂಚಾಲಕ ಮಹಂತೇಶ್, ಎಐಡಿವೈಓ. ಸಂಘಟನಾ ಸಂಚಾಲಕ ಕೃಷ್ಣ ಭರತ್, ಶಿವಕುಮಾರ್, ಗಿರಿಜಮ್ಮ, ಗುರುಶಾಂತ, ಲಕ್ಷ್ಮಿ, ಭಗತ್ಸಿಂಗ್ ಅಭಿಮಾನಿಗಳು, ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಟ್ಯಾಕ್ಸಿ ಚಾಲಕರುಗಳು ಜನ್ಮದಿನಾಚರಣೆಯಲ್ಲಿ ಭಾಗವಹಿಸಿದ್ದರು.

