ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಜೆಟ್ ಮಂಡನೆ ಸಂದರ್ಭದಲ್ಲಿ ಪ್ರತಿಪಕ್ಷದ ಶಾಸಕರು ಸಾಂಕೇತಿಕವಾಗಿ ಖಾಲಿ ಚೊಂಬು ತಂದು ಪ್ರತಿಭಟನೆ ಮಾಡಿದ್ದಕ್ಕೆ ಸದನದಲ್ಲಿ ಮಹಾನ್ ಸತ್ಯಹರಿಶ್ಚಂದ್ರನ ರೀತಿ ಆಕ್ಷೇಪಣೆ ಮಾಡಿದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು, ಬಿಜೆಪಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಪಕ್ಷ ಏನು ಮಾಡಿತ್ತು ಎಂಬುದನ್ನ ಮರೆತಂತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟಾಂಗ್ ನೀಡಿದರು.
ಡಿ.ಕೆ.ಶಿವಕುಮಾರ್ ಅವರೇ, ನಾವು ಬಜೆಟ್ ಮಂಡನೆ ಆದ ನಂತರ ಚೊಂಬು ಹಿಡಿದು ಪ್ರತಿಭಟನೆ ಮಾಡಿದೆವು. ಆದರೆ, 2023ರಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್ ಮಂಡಿಸುವಾಗಲೇ ಇಡೀ ಕಾಂಗ್ರೆಸ್ ಪಕ್ಷದ ಶಾಸಕರು ಕಿವಿಯ ಮೇಲೆ ಹೂವಿಟ್ಟುಕೊಂಡು ಸದನದಲ್ಲಿ ಕೂತಿದ್ದನ್ನ ಕರ್ನಾಟಕದ ಜನತೆ ಮರೆತಿಲ್ಲ. ಸಭ್ಯತೆ, ಶಿಷ್ಟಾಚಾರ, ನೈತಿಕತೆ ಬಗ್ಗೆ ತಮ್ಮಿಂದ ನಾವು ಪಾಠ ಕಲಿಯಬೇಕಾಗಿಲ್ಲ ಸ್ವಾಮಿ ಎಂದು ಅಶೋಕ್ ಟೀಕಿಸಿದ್ದಾರೆ.
ನೀವು ಅಧಿಕಾರಕ್ಕೆ ಬಂದಿರುವುದೇ ಸುಳ್ಳು, ಅಪಪ್ರಚಾರ, ತೇಜೋವಧೆಯ ಆಧಾರದ ಮೇಲೆ. ಬಜೆಟ್ ಮಾತ್ರವಲ್ಲ, ತಮ್ಮ ಇಡೀ ಕಾಂಗ್ರೆಸ್ ಸರ್ಕಾರ ನಡೆಯುತ್ತಿರುವುದೇ ಸುಳ್ಳಿನ ಕಂತೆಯ ಮೇಲೆ. ಕರ್ನಾಟಕದ ಪ್ರಜ್ಞಾವಂತ ಮತದಾರರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಸ್ವಾಮಿ. ಕಾಂಗ್ರೆಸ್ ಪಕ್ಷದ ಪಾಪದ ಕೊಡ ತುಂಬಿದೆ. ಅಂತ್ಯ ಸಮೀಪಿಸುತ್ತಿದೆ. ಇದು ಗ್ಯಾರೆಂಟಿ. ಬರೆದಿಟ್ಟುಕೊಳ್ಳಿ ಎಂದು ಅಶೋಕ್ ಎಚ್ಚರಿಸಿದರು.

