ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಮಾನ ಸ್ಫೋಟಗೊಂಡು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸೇರಿದಂತೆ ಇತರರು ಮೃತಪಟ್ಟಿರುವ ಘಟನೆ ಬುಧವಾರ ಬೆಳಿಗ್ಗೆ ಮಹಾರಾಷ್ಟ್ರದಲ್ಲಿ ಜರುಗಿದೆ.
ವಿಮಾನ ದುರಂತದಲ್ಲಿ ಡಿಸಿಎಂ ಅಜಿತ್ ಪವಾರ್, ವಿದಿಪ್ ಯಾದವ್, ಪಿಂಕಿ ಮಾಲಿ, ವಿಮಾನ ಸಿಬ್ಬಂದಿ ಕ್ಯಾ.ಸುಮಿತ್ ಕಪೂರ್, ಕ್ಯಾ.ಶಾಂಭವಿ ಪಾಠಕ್ ಇವರುಗಳು ಮೃತಪಟ್ಟಿದ್ದಾರೆ.
ವಿಮಾನದ ರಾಡಾರ್ ಮಾಹಿತಿ ಪ್ರಕಾರ, ವಿಮಾನ ಬೆಳಗ್ಗೆ 8.10ಕ್ಕೆ ಮುಂಬೈನಲ್ಲಿ ಟೆಕ್ ಆಫ್ ಆಗಿದ್ದು, 8.45ರ ಸುಮಾರಿಗೆ ರಾಡಾರ್ ಕಣ್ಗಾವಲಿನಿಂದ ತಪ್ಪಿಸಿಕೊಂಡಿದೆ.
ಮಹಾರಾಷ್ಟ್ರದಲ್ಲಿ ಫೆ.5ರಂದು ನಿಗದಿಯಾಗಿರುವ ಜಿಲ್ಲಾ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಮತಪ್ರಚಾರ ಸಭೆಯಲ್ಲಿ ಭಾಗಿಯಾಗಲು ಅಜಿತ್ ಪವಾರ್ ಬಾರಾಮತಿಗೆ ಪ್ರಯಾಣಿಸುತ್ತಿದ್ದರು.
ವಿಮಾನ 8.50ರ ಸುಮಾರಿಗೆ ದುರಂತಕ್ಕೀಡಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ವಿಎಸ್ಆರ್ ಏವಿಯೇಷನ್ ನಿರ್ವಹಿಸುವ ವಿಟಿ ಎಸ್ಎಸ್ಕೆ ಲಿಯರ್ಜೆಟ್ 45 (ಎಲ್ಜೆ 45) ಸಂಸ್ಥೆಗೆ ಸೇರಿದ ವಿಮಾನ ಇದಾಗಿದೆ ಎಂದು ಡಿಜಿಸಿಎ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಬಾರಾಮತಿ ವಿಮಾನದ ಸಮೀಪ ಆಗಸದಲ್ಲಿ ವಿಮಾನವೊಂದು ಅಸ್ಥಿರವಾದಂತೆ ಸುತ್ತುತ್ತಿತ್ತು. ಅದು ಲ್ಯಾಂಡ್ ಆಗಲು ರನ್ವೇಗೆ ಇಳಿಯುವ ಮುನ್ನ ನೆಲಕ್ಕೆ ಜೋರಾಗಿ ಅಪ್ಪಳಿಸಿ, ಸ್ಪೋಟಗೊಂಡ ಘಟನೆ ಮಹರಾಷ್ಟ್ರ ರಾಜ್ಯದಲ್ಲಿ ಜರುಗಿದೆ. ಸ್ಪೋಟದ ಸದ್ದು ನಮ್ಮ ಮನೆಯವರೆಗೂ ಕೇಳಿಸಿತು ಎಂದು ಪ್ರತ್ಯಕ್ಷದರ್ಶಿ ಮಹಿಳೆಯೊಬ್ಬರು ತಿಳಿಸಿದರು.
ಮತ್ತೊಬ್ಬ ಪ್ರತ್ಯಕ್ಷದರ್ಶಿ ಪ್ರತಿಕ್ರಿಯಿಸಿ, ವಿಮಾನ ಸ್ಪೋಟಗೊಂಡು ಭಾರಿ ಬೆಂಕಿ ಹೊತ್ತಿಕೊಂಡಿತು. ನೆಲಕ್ಕಪ್ಪಳಿಸಿದ ಬಳಿಕ ನಾಲ್ಕರಿಂದ ಐದು ಬಾರಿ ಸ್ಪೋಟಗೊಂಡಿದೆ ಎಂದರು.
ಸ್ಪೋಟದ ಸದ್ದು ಭಾರಿ ಜೋರಾಗಿ ಕೇಳಿಸಿತು. ವಿಮಾನದ ಅವಶೇಷಗಳು ನಮ್ಮ ಮನೆಯವರೆಗೂ ಬಂದು ಬಿದ್ದವು. ವಿಮಾನ ನೆಲಕ್ಕಿಳಿಯುವ ಸಂದರ್ಭದಲ್ಲಿ ಅದು ಸ್ಪೋಟಗೊಳ್ಳುವುದನ್ನು ಕಂಡು ಭಯವಾಯಿತು. ವಿಮಾನ ನಿಯಂತ್ರಣ ತಪ್ಪಿದಂತೆ ಕಂಡುಬಂತು ಎಂದು ಇನ್ನೊಬ್ಬ ಪ್ರತ್ಯಕ್ಷದರ್ಶಿ ಮಾಹಿತಿ ನೀಡಿದರು.
ವಿಮಾನ ಕೆಳಗಿಳಿಯುತ್ತಿದ್ದನ್ನು ಕಂಡು ಅದು ಸ್ಪೋಟಗೊಳ್ಳಲಿದೆ ಎಂಬ ಅನುಮಾನ ಮೂಡಿತು. ರನ್ವೇಗಿಂತ ಅಂದಾಜು 100 ಅಡಿ ಮೇಲೆ ವಿಮಾನ ಹಾರಾಡುತ್ತಿತ್ತು. ತಕ್ಷಣವೇ ಅದು ನೆಲಕ್ಕಪ್ಪಳಿಸಿತು. ಬಳಿಕ ಬೆಂಕಿಯ ಜ್ವಾಲೆಗಳು ಕಂಡುಬಂದವು. ಇದರ ಬೆನ್ನಲ್ಲೇ ನಾಲ್ಕರಿಂದ ಐದು ಬಾರಿ ಸ್ಫೋಟಿಸಿತು. ಇದರಿಂದಾಗಿ ವಿಮಾನದ ಬಳಿಗೆ ಹೋಗಲು ನಮಗೆ ಸಾಧ್ಯವಾಗಲಿಲ್ಲ.
ಆ ವಿಮಾನದಲ್ಲಿ ಅಜಿತ್ ಪವಾರ್ ಇದ್ದರೆಂಬ ವಿಚಾರ ನಮಗೆ ಆಮೇಲೆ ತಿಳಿದು, ಆಘಾತವಾಯಿತು ಎಂದು ಅವರು ಹೇಳಿದರು.

