ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಸಲ್ಮಾನರನ್ನು ಮುಟ್ಟಿದರೆ ನಮಗೆ ಪ್ರಮೋಷನ್ ಇಲ್ಲ ಅಂತಾ ಕರ್ನಾಟಕದ ಪೊಲೀಸರು ಭಯಗೊಂಡಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪರಪ್ಪನ ಅಗ್ರಹಾರದ ಕರ್ಮಕಾಂಡಗಳು ಒಂದೊಂದಾಗಿ ಬಯಲಾಗುತ್ತಿವೆ. ಉಗ್ರರು, ನಟೋರಿಯಸ್ ರೇಪಿಸ್ಟ್ ಹಾಗೂ ಅಪಾಯಕಾರಿ ಕೈದಿಗಳಿಗೆ ಸಿಗ್ತಿರೋ ಸವಲತ್ತು ಸಮಾಜವನ್ನ ಆತಂಕಕ್ಕೆ ದೂಡುವಂತೆ ಮಾಡಿದೆ.
ಈ ಅಕ್ರಮ ಚಟುವಟಿಕೆಗಳ ವಿರುದ್ಧ ಬಿಜೆಪಿ ಹೋರಾಟ ನಡೆಸಿದೆ ಎಂದು ಅವರು ತಿಳಿಸಿದರಲ್ಲದೆ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ್ ಅವರನ್ನ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹ ಮಾಡಿದರು.
ಯಾವ ಸ್ಟೇಷನ್ ಗಳಲ್ಲೂ ಈಗ ಮುಸಲ್ಮಾನರ ಮೇಲೆ ಏನೂ ಕೇಸ್ ಮಾಡಲ್ಲ. ಈಗ ಅದು ಪರಪ್ಪನ ಅಗ್ರಹಾರದವರೆಗೆ ಹೋಗಿದೆ. ಪರಪ್ಪನ ಅಗ್ರಹಾರದಲ್ಲಿ ಮುಸಲ್ಮಾನರಿಗೆ, ಭಯೋತ್ಪಾದಕರಿಗೆ ಎಲ್ಲಾ ಸೌಲಭ್ಯ ಕೊಡುತ್ತಾರೆ ಎಂದು ಅವರು ದೂರಿದರು.
ದೇಶದಲ್ಲಿರುವ ಎಲ್ಲಾ ಭಯೋತ್ಪಾದಕರು ನಮಗೆ ಕರ್ನಾಟಕ ಕೊಡಿ ಎಂದು ಅರ್ಜಿ ಹಾಕುತ್ತಿದ್ದಾರಂತೆ. ದರ್ಶನ್ ಬೀಡಿ ಸೇದಿದ್ದಕ್ಕೆ ಸುಪ್ರೀಂ ಕೋರ್ಟ್ ಗೆ ಹೋಗಿ ಬೇಲ್ ಕ್ಯಾನ್ಸಲ್ ಮಾಡಿಸಿದರು.
ಇದರಲ್ಲಿ ಸುಪ್ರೀಂ ಕೋರ್ಟ್ ಗೆ ಸರ್ಕಾರ ಹೋಗಲ್ಲ. ದರ್ಶನ್ ಗೆ ಒಂದು ಕಾನೂನು, ಭಯೋತ್ಪಾದಕರಿಗೆ ರಾಜಾತಿಥ್ಯ. ಯಾಕೆಂದರೆ ದರ್ಶನ್ ಹಿಂದೂ, ಇವರು ಮುಸಲ್ಮಾನರು. ದರ್ಶನ್ ತಪ್ಪು ಮಾಡಿದ್ದಾರೆ, ಇಲ್ಲ ಅಂತಾ ಹೇಳಲ್ಲ. ಆದರೆ ಕಾನೂನು ಎಲ್ಲರಿಗೂ ಒಂದೇ ತಾನೇ. ದೇಶದ್ರೋಹಿಗೆ ಒಂದು ಕಾನೂನು, ದರ್ಶನ್ ಗೆ ಒಂದು ಕಾನೂನಾ? ಎಂದು ಅಶೋಕ್ ತೀಕ್ಷ್ಣವಾಗಿ ಪ್ರಶ್ನಿಸಿದರು.

