ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲೆಯಲ್ಲಿನ ಹಟ್ಟಿ, ತಾಂಡಾ ಸೇರಿದಂತೆ ಒಟ್ಟು 299 ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲಾಗಿದ್ದು, ಸರ್ಕಾರದ ಸೂಚನೆಯಂತೆ ಈ ಗ್ರಾಮಗಳ ಜನರ ಆಸ್ತಿಗಳನ್ನು ನೊಂದಣಿ ಮಾಡಿಸಿ, ಹಕ್ಕುಪತ್ರ ಹಾಗೂ ಇ-ಸ್ವತ್ತುಗಳನ್ನು ತಯಾರಿಸುವ ಕಾರ್ಯ ಜಿಲ್ಲೆಯಲ್ಲಿ ಭರದಿಂದ ಸಾಗಿದ್ದು, ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಹಾಗೂ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅವರು ಭಾನುವಾರ ಜಿಲ್ಲೆಯ ತಹಸಿಲ್ದಾರರ ಕಚೇರಿ,
ಉಪನೊಂದಣಾಧಿಕಾರಿಗಳ ಕಚೇರಿಗಳಿಗೆ ಖುದ್ದು ಭೇಟಿ ನೀಡಿ ಸಿದ್ಧತಾ ಕಾರ್ಯ ಪರಿಶೀಲನೆ ನಡೆಸಿದರು.
ಹಲವು ದಶಕಗಳಿಂದ ಆಸ್ತಿಗಳಿಗೆ ಹಕ್ಕುಪತ್ರವಿಲ್ಲದೆ ಪರಿತಪಿಸುತ್ತಿದ್ದ ಬಡ ಜನರ ಶ್ರೇಯೋಭಿವೃದ್ಧಿಗಾಗಿ ಹಟ್ಟಿ, ತಾಂಡಾ ಮುಂತಾದ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಿ, ಆ ಜನವಸತಿ ಪ್ರದೇಶಗಳ ಜನರಿಗೆ ಆಸ್ತಿಗಳನ್ನು ನೊಂದಣಿ ಮಾಡಿಸಿ, ಹಕ್ಕುಪತ್ರ ಹಾಗೂ ಇ-ಸ್ವತ್ತು ಕೂಡ ವಿತರಿಸುವಂತೆ ಸರ್ಕಾರ ಸೂಚನೆ ನೀಡಿದೆ.
ಪ್ರಸಕ್ತ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇದೇ ಮೇ. 20 ರಂದು ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಸರ್ಕಾರದ ಎರಡು ವರ್ಷಗಳ ಸಾಧನಾ ಸಮಾವೇಶ ಹಮ್ಮಿಕೊಂಡಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರ ಆಶಯದಂತೆ ಎಲ್ಲ ಕಂದಾಯ ಗ್ರಾಮಗಳ ಜನರಿಗೆ ಹಕ್ಕುಪತ್ರ ವಿತರಿಸುವ ಸಮಾರಂಭ ಆಯೋಜಿಸಲಾಗಿದೆ.
ಉಳುವವನೇ ಭೂಮಿಯ ಒಡೆಯ ಎನ್ನುವಂತೆ, ವಾಸಿಸುವವನೇ ಮನೆಯ ಒಡೆಯ ಎನ್ನುವ ರೀತಿ, ಹಟ್ಟಿ, ಹಾಡಿ, ತಾಂಡಾಗಳಲ್ಲಿ ವಾಸಿಸುತ್ತಿರುವ ಜನರಿಗೆ ಅವರ ಮನೆಯ ಆಸ್ತಿಯ ಹಕ್ಕುಪತ್ರಗಳನ್ನು ವಿತರಿಸಿ, ಬಡವರಿಗೆ ಆಸ್ತಿ ದಾಖಲೆಗಳನ್ನು ಒಪ್ಪಿಸಬೇಕು ಎನ್ನುವುದು ಸರ್ಕಾರದ ಆಶಯವಾಗಿದೆ.
ಮೇ. 20 ರಂದು ಜರುಗುವ ಸಾಧನಾ ಸಮಾವೇಶ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಜಿಲ್ಲೆಯ 299 ಕಂದಾಯ ಗ್ರಾಮಗಳ ಸುಮಾರು 10 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೂ ಹಕ್ಕುಪತ್ರ ವಿತರಿಸಲು ಸಿದ್ಧತೆಗಳನ್ನು ಪ್ರಾರಂಭಿಸಲಾಗಿದೆ. ಈಗಾಗಲೆ ಜಿಲ್ಲೆಯಲ್ಲಿ ಸುಮಾರು 6500 ಕ್ಕೂ ಹೆಚ್ಚು ಹಕ್ಕುಪತ್ರಗಳು ಸಿದ್ಧಗೊಂಡಿದ್ದು, ಭಾನುವಾರದಂದೂ ಕೂಡ ಆಸ್ತಿಗಳ ನೊಂದಣಿ ಮತ್ತು ಹಕ್ಕುಪತ್ರ ತಯಾರಿಸುವ ಕಾರ್ಯ ನಡೆದಿದೆ.
ಇದರನ್ವಯ, ಜಿಲ್ಲೆಯಲ್ಲಿ ಈ ಕಾರ್ಯ ಭರದಿಂದ ಸಾಗಿದೆ. ಭಾನುವಾರದಂದೂ ಕೂಡ ಜಿಲ್ಲೆಯ ಉಪನೊಂದಣಾಧಿಕಾರಿಗಳ ಕಚೇರಿ, ತಹಸಿಲ್ದಾರರ ಕಚೇರಿ ಹಾಗೂ ಗ್ರಾಮ ಪಂಚಾಯತಿಗಳು ಕಾರ್ಯ ನಿರ್ವಹಿಸಿದ್ದು, ರಾಜ್ಯದಲ್ಲಿಯೇ ಹೆಚ್ಚು ಹಕ್ಕುಪತ್ರ, ನೊಂದಣಿ ಹಾಗೂ ಇ-ಸ್ವತ್ತು ತಯಾರಿಕೆಯಲ್ಲಿ ಜಿಲ್ಲೆ ಮುಂಚೂಣಿಯಲ್ಲಿದೆ.
ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅವರು ಭಾನುವಾರದಂದು ಜಿಲ್ಲೆಯ ವಿವಿಧ ತಹಸಿಲ್ದಾರರ ಕಚೇರಿ, ಉಪನೊಂದಣಾಧಿಕಾರಿಗಳ ಕಚೇರಿಗಳಿಗೆ ಖುದ್ದು ಭೇಟಿ ನೀಡಿ, ಆಸ್ತಿ ನೋಂದಣಿ, ಹಕ್ಕುಪತ್ರ, ಇ-ಸ್ವತ್ತುಗಳ ತಯಾರಿಕೆ ಕಾರ್ಯದ ಪ್ರಗತಿ ಕುರಿತಂತೆ ಪರಿಶೀಲಿಸಿ, ಸಿಬ್ಬಂದಿಗಳಿಗೆ ಸೂಕ್ತ ಸಲಹೆ, ಸೂಚನೆಗಳನ್ನು ನೀಡಿದರು.
ನಿಗದಿತ ಅವಧಿಯೊಳಗೆ ಜಿಲ್ಲೆಯ ಎಲ್ಲ 299 ಕಂದಾಯ ಗ್ರಾಮಗಳ ಫಲಾನುಭವಿಗಳ ಹಕ್ಕುಪತ್ರ, ಇ-ಸ್ವತ್ತುಗಳನ್ನು ಸಿದ್ಧಪಡಿಸಿ, ಮೇ. 20 ರಂದು ವಿಜಯನಗರ ಜಿಲ್ಲೆ, ಹೊಸಪೇಟೆಯಲ್ಲಿ ಜರುಗುವ ಸರ್ಕಾರದ 2 ವರ್ಷಗಳ ಸಾಧನಾ ಸಮಾವೇಶದಲ್ಲಿ ಜಿಲ್ಲೆಯ ಎಲ್ಲ ಅರ್ಹ ಫಲಾನುಭವಿಗಳಿಗೆ ಆಸ್ತಿ ದಾಖಲೆಗಳನ್ನು ವಿತರಿಸಿ, ಸರ್ಕಾರದ ಆಶಯಕ್ಕೆ ಜಿಲ್ಲಾಡಳಿತ ಕೈಜೋಡಿಸಲಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು.