ಚಂದ್ರವಳ್ಳಿ ನ್ಯೂಸ್, ಕಾರವಾರ(ಉತ್ತರ ಕನ್ನಡ):
ಕಾರವಾರದ ಕದಂಬ ನೌಕಾನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಾಣಿಸಿಕೊಳ್ಳುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.
ಭಾರತೀಯ ನೌಕಾಪಡೆಯ ಅತ್ಯಾಧುನಿಕ ಐಎನ್ಎಸ್ ವಾಗ್ಶೀರ್ ಜಲಾಂತರ್ಗಾಮಿಯಲ್ಲಿ ಸಮುದ್ರಯಾನ ಕೈಗೊಳ್ಳುವ ಮೂಲಕ, ಜಲಾಂತರ್ಗಾಮಿಯಲ್ಲಿ ಪ್ರಯಾಣಿಸಿದ ದೇಶದ ಎರಡನೇ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾದರು.
ವೀಕ್ಷಣೆ:
ಕಾರವಾರದ ನೌಕಾ ದಕ್ಕೆಯಿಂದ ಭಾನುವಾರ ಬೆಳಗ್ಗೆ ಸಮುದ್ರದ ಆಳಕ್ಕೆ ಇಳಿದ ‘ವಾಗ್ಶೀರ್‘ ಜಲಾಂತರ್ಗಾಮಿಯಲ್ಲಿ ರಾಷ್ಟ್ರಪತಿ ಸಂಚರಿಸಿದರು.

ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಈ ಸಮುದ್ರಯಾನದ ವೇಳೆ, ನೌಕಾಪಡೆಯ ಕಾರ್ಯಾಚರಣೆ, ಜಲಾಂತರ್ಗಾಮಿಯ ತಾಂತ್ರಿಕ ಸಾಮರ್ಥ್ಯ ಮತ್ತು ಸಾಗರದ ಅಡಿಯಲ್ಲಿ ನೌಕಾಪಡೆ ಎದುರಿಸುವ ಸವಾಲುಗಳ ಬಗ್ಗೆ ದ್ರೌಪದಿ ಮುರ್ಮು ಮಾಹಿತಿ ಪಡೆದರು.
ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರು ಈ ಹಿಂದೆ ಜಲಾಂತರ್ಗಾಮಿಯಲ್ಲಿ ಪ್ರಯಾಣಿಸಿದ ಮೊದಲ ರಾಷ್ಟ್ರಪತಿಯಾದರೆ, ಮುರ್ಮು ಅವರು 2ನೇ ರಾಷ್ಟ್ರಪತಿಯಾಗಿದ್ದಾರೆ.
ಈ ಐತಿಹಾಸಿಕ ಕ್ಷಣದಲ್ಲಿ ರಾಷ್ಟ್ರಪತಿಗಳ ಜೊತೆಗೆ ನೌಕಾಪಡೆಯ ಮುಖ್ಯಸ್ಥರಾದ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ ಹಾಗೂ ಕರ್ನಾಟಕ ನೌಕಾ ವಲಯದ ಫ್ಲಾಗ್ ಆಫೀಸರ್ ಕಮಾಂಡಿಂಗ್ ರಿಯರ್ ಅಡ್ಮಿರಲ್ ವಿಕ್ರಂ ಮೆನನ್ ಉಪಸ್ಥಿತರಿದ್ದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಇವರಿಗೆ ನೌಕಾಪಡೆಯ ಹಿರಿಯ ಅಧಿಕಾರಿಗಳು ಜಲಾಂತರ್ಗಾಮಿಯ ಕಾರ್ಯವೈಖರಿಯ ಬಗ್ಗೆ ವಿವರಿಸಿದರು.
ಅದ್ಧೂರಿ ಸ್ವಾಗತ:
ನೌಕಾನೆಲೆಗೆ ಇದಕ್ಕೂ ಮೊದಲು ಆಗಮಿಸಿದ ರಾಷ್ಟ್ರಪತಿಗಳಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್.ವೈದ್ಯ ಆತ್ಮೀಯವಾಗಿ ಬರಮಾಡಿಕೊಂಡು ಸ್ವಾಗತ ಕೋರಿದರು.
ಈ ಸಂದರ್ಭದಲ್ಲಿ ಪ್ರಾದೇಶಿಕ ಆಯುಕ್ತೆ ಜಯಂತಿ, ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ, ಎಡಿಜಿಪಿ ಹಿತೇಂದ್ರ, ಐಜಿಪಿ ಅಮಿತ್ ಸಿಂಗ್ ಹಾಗೂ ಎಸ್ಪಿ ದೀಪನ್ ಎಂ.ಎನ್ ಉಪಸ್ಥಿತರಿದ್ದರು.
ರಾಷ್ಟ್ರಪತಿಗಳ ಭೇಟಿಯ ಹಿನ್ನೆಲೆಯಲ್ಲಿ ಕಾರವಾರದಾದ್ಯಂತ ಮತ್ತು ಅರಬ್ಬಿ ಸಮುದ್ರದ ವ್ಯಾಪ್ತಿಯಲ್ಲಿ ಅಭೂತಪೂರ್ವ ಭದ್ರತೆ ಕಲ್ಪಿಸಲಾಗಿತ್ತು. ಸೀಬರ್ಡ್ ನೌಕಾನೆಲೆಯ ಸುತ್ತಮುತ್ತಲಿನ ಪ್ರದೇಶಗಳನ್ನು ಸಂಪೂರ್ಣವಾಗಿ ನೌಕಾಪಡೆ ಮತ್ತು ಪೊಲೀಸರ ಕಣ್ಗಾವಲಿನಲ್ಲಿ ಇರಿಸಲಾಗಿತ್ತು.
ಈ ಭೇಟಿಯು ಕದಂಬ ನೌಕಾನೆಲೆಯ ಮಹತ್ವವನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ಹಿಡಿದಿದ್ದು, ಭಾರತೀಯ ನೌಕಾಪಡೆಯ ನೈತಿಕ ಸ್ಥೈರ್ಯ ಹೆಚ್ಚಿಸಿದೆ.
ಐಎನ್ಎಸ್ ವಾಗ್ಶೀರ್:
ದ್ರೌಪದಿ ಮುರ್ಮು ಅವರು ಕಲ್ವರಿ ಕ್ಲಸ್ ಜಲಾಂತರ್ಗಾಮಿ ನೌಕೆಯಲ್ಲಿ ನಡೆಸಿದ ಈ ಚೊಚ್ಚಲ ಪ್ರಯಾಣ, ಎ.ಪಿ.ಜೆ. ಅಬ್ದುಲ್ ಕಲಾಂ ನಂತರ ರಾಷ್ಟ್ರಪತಿಯೊಬ್ಬರು ಕೈಗೊಂಡ ಎರಡನೇ ಸಂಚಾರವಾಗಿದೆ.
ಆರನೇ P75 ಕಲ್ವರಿ- ಕ್ಲಸ್ ಜಲಾಂತರ್ಗಾಮಿ ಐಎನ್ಎಸ್ ವಾಗ್ಶೀರ್ ಅನ್ನು 2025 ಜನವರಿ 15 ರಂದು ಭಾರತೀಯ ನೌಕಾಪಡೆಗೆ ಅಧಿಕೃತವಾಗಿ ನಿಯೋಜಿಸಲಾಯಿತು. ಇದನ್ನು ಭಾರತೀಯ ಶಿಪ್ಯಾರ್ಡ್ ಮಜಗಾಂವ್ ಡಾಕ್ ಶಿಪ್ಬಿಲ್ಡರ್ಸ್ ಲಿಮಿಟೆಡ್ ನಿರ್ಮಿಸಿದೆ.

