ಚಂದ್ರವಳ್ಳಿ ನ್ಯೂಸ್, ಮುಂಬೈ:
ಮುಂಬೈನ ನೌಕನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಯುದ್ಧ ನೌಕೆಗಳಾದ ಐಎನ್ಎಸ್ ಸೂರತ್, ಐಎನ್ಎಸ್ ನೀಲ್ಗಿರಿ ಮತ್ತು ಐಎನ್ಎಸ್ ವಾಘ್ಶೀರ್ ಇವುಗಳನ್ನು ದೇಶಕ್ಕೆ ಸಮರ್ಪಣೆ ಮಾಡಿದರು.
ದೇಶದ ರಕ್ಷಣಾ ಕ್ಷೇತ್ರದಲ್ಲಿ ಜಾಗತಿಕ ನಾಯಕ ಆಗುವ ನಿಟ್ಟಿನಲ್ಲಿ ಈ ಮೂರೂ ಯುದ್ಧ ನೌಕೆಗಳು ಬಲ ತುಂಬಲಿವೆ. ಸ್ವಾವಲಂಬಿ ರಕ್ಷಣಾ ವಲಯ ನಿರ್ಮಿಸಲು ಭಾರತ ಬದ್ಧತೆಯನ್ನು ಇದು ಒತ್ತಿ ಹೇಳುತ್ತದೆ ಎಂದು ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ.
ಈ ಯುದ್ದ ನೌಕೆಗಳನ್ನು ಆತ್ಮನಿರ್ಭರ್ ಭಾರತದ ಗೌರವಾರ್ಥವಾಗಿ ಮಜಾಗನ್ ಡಾಕ್ ಶಿಪ್ ಸಂಸ್ಥೆಯ ನೇತೃತ್ವದಲ್ಲಿ ನಿರ್ಮಿಸಲಾಗಿದೆ. ಐಎನ್ಎಸ್ ಸೂರತ್ ಪಿ15ಬಿ ಮಾರ್ಗಸೂಚಿತ ಕ್ಷಿಪಣಿ ವಿಧ್ವಂಸಕ ವ್ಯವಸ್ಥೆ ನಾಲ್ಕನೇ ಮತ್ತು ಅಂತಿಮ ನೌಕೆಯಾಗಿದೆ. ಇದನ್ನು ಶೇ 75ರಷ್ಟು ದೇಶಿಯವಾಗಿ ನಿರ್ಮಾಣ ಮಾಡಲಾಗಿದ್ದು, ಇದು ಅತ್ಯಾಧುನಿಕ ಶಸ್ತ್ರಾಸ್ತ್ರ- ಸೆನ್ಸರ್ ಪ್ಯಾಕೇಜ್ ಹಾಗೂ ಸುಧಾರಿತ ನೆಟ್ವರ್ಕ್ ಕೇಂದ್ರಿತ ಸಾಮರ್ಥ್ಯ ಹೊಂದಿದೆ ಎಂದು ರಕ್ಷಣಾ ಪಡೆ ಹೇಳಿದೆ. INS ನೀಲಗಿರಿ ಪಿ17ಎ ಸ್ಟೆಲ್ತ್ ಫ್ರಿಗೇಟ್ ಪ್ರಾಜೆಕ್ಟ್ನ ಮೊದಲ ಶಿಪ್ ಆಗಿದ್ದು,
ಇದನ್ನು ಭಾರತೀಯ ನೌಕ ವಾರ್ಶಿಪ್ ಡಿಸೈನ್ ಬ್ಯುರೋ ವಿನ್ಯಾಸ ಮಾಡಿದೆ. ಇದು ಸಾಗರ ಮೇಲ್ವಿಚಾರಣೆಗಾಗಿಯೇ ಅಭಿವೃದ್ಧಿ ಮಾಡಲಾಗಿದ್ದು, ದೇಶೀಯ ಫ್ರಿಗೇಟ್ನ ಮುಂದಿನ ಪೀಳಿಗೆಯನ್ನು ಪ್ರತಿಬಿಂಬಿಸುತ್ತದೆ. ಇದು ಎಂಟು ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಗಳನ್ನು ಒಳಗೊಂಡಂತೆ ಸುಧಾರಿತ ಶಸ್ತ್ರಾಸ್ತ್ರಗಳನ್ನು ಒಳಗೊಂಡಿದೆ. 8 ಸೆಪ್ಟೆಂಬರ್ 2019 ರಂದು ಪ್ರಾರಂಭಿಸಲಾಯಿತು. ಈ ನೌಕೆ ಸುಮಾರು 6,670 ಟನ್ ತೂಕ ಹೊಂದಿದ್ದು, 149 ಮೀಟರ್ ಉದ್ದ ಹೊಂದಿದೆ.
ಐಎನ್ಎಸ್ ವಾಘಶೀರ್: ಇದು ಪಿ75 ಸ್ಕೋರ್ಪೆನೆ ಯೋಜನೆಯ ಆರು ಮತ್ತು ಅಂತಿಮ ಹಂತದ ಜಲಾಂತರ್ಗಾಮಿ ಆಗಿದೆ. ಇದನ್ನು ಫ್ರಾನ್ಸ್ನ ನೇವಲ್ ಗ್ರೂಪ್ನ ಸಹಯೋಗದೊಂದಿಗೆ ನಿರ್ಮಿಸಲಾಗಿದೆ. ಈ ಜಲಾಂತರ್ಗಾಮಿ ಭಾರತೀಯ ನೌಕಾಪಡೆಯ ಬಲವನ್ನು ಮತ್ತಷ್ಟು ಹೆಚ್ಚಿಸಿದೆ. ಈ ನೌಕೆ 67 ಮೀಟರ್ ಉದ್ದ ಮತ್ತು 1,550 ಟನ್ ಬಾರ ಹೊಂದಿದೆ (ಐಎಎನ್ಎಸ್).
ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಉಪಮುಖ್ಯಮಂತ್ರಿಗಳಾದ ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಹಾಜರಿದ್ದರು.
ರಕ್ಷಣಾ ಉತ್ಪಾದನೆ ಮತ್ತು ಸಾಗರ ಭದ್ರತೆಯಲ್ಲಿ ಜಾಗತಿಕ ನಾಯಕನಾಗಬೇಕು ಎಂಬ ಭಾರತದ ದೂರದೃಷ್ಟಿಗೆ ಈ ಮೂರು ಪ್ರಮುಖ ಯುದ್ಧ ನೌಕೆಗಳು ಪ್ರಮುಖ ಮುನ್ನೆಡಯಾಗಿದೆ ಎಂದು ಸರ್ಕಾರದ ಪ್ರಕಣೆಯಲ್ಲಿ ತಿಳಿಸಿದೆ.