ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿತ್ತಾಪುರದಲ್ಲಿ ಪಾಳೇಗಾರಿಕೆ ರಾಜಕಾರಣ ಅಟ್ಟಹಾಸ ಮೆರೆಯುತ್ತಿದೆ, ಅಭಿವ್ಯಕ್ತಿ ಹಾಗೂ ವಾಕ್ ಸ್ವಾತಂತ್ರ್ಯವನ್ನು ದಮನ ಮಾಡಲು ಸರ್ಕಾರಿ ಅಧಿಕಾರಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಆರ್ ಎಸ್ಎಸ್ ಸಂಸ್ಥೆ ಶತಮಾನ ಪೂರೈಸಿದ ಸಂಭ್ರಮ ಆಚರಿಸಲು ಸಂಘ ಹಾಗೂ
ಹಿಂದೂ ಪರ ಸಂಘಟನೆಗಳು ನಿಯಮಾನುಸಾರ ಅನುಮತಿ ಪಡೆದು ಆಯೋಜಿಸಿದ್ದ ಸಂಘದ ಪಥಸಂಚಲನ ಕಾರ್ಯಕ್ರಮದ ಮೇಲೆ ಕೆಂಗಣ್ಣು ಬೀರಿರುವ ಸ್ಥಳೀಯ ಶಾಸಕರೂ ಆಗಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ದ್ವೇಷ ರಾಜಕಾರಣ ಮುಂದುವರೆಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆರೋಪಿಸಿದ್ದಾರೆ.
ಚಿತ್ತಾಪುರದಲ್ಲಿ ನಿನ್ನೆ ತಡರಾತ್ರಿ ಪುರಸಭೆಯ ಸಿಬ್ಬಂದಿ ಸಂಘದ ಪಥ ಸಂಚಲನದ ಆಕರ್ಷಣೆಗಾಗಿ ಅನುಮತಿ ಪಡೆದು ಕಟ್ಟಲಾಗಿದ್ದ ಭಗವಾಧ್ವಜಗಳು, ಬಂಟಿಂಗ್, ಬ್ಯಾನರ್ ಗಳನ್ನು ಕಿತ್ತೆಸೆದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವಂತಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವದ ಆಚರಣೆಯನ್ನು ದುರುದ್ದೇಶ ಪೂರ್ವಕವಾಗಿ ತಡೆಯಲು ಯತ್ನಿಸಿರುವ ಘಟನೆ ಅತ್ಯಂತ ಖಂಡನೀಯ.
ಚಿತ್ತಾಪುರದಿಂದ ನಿಯಂತ್ರಿಸುತ್ತಿರುವ ರಿಪಬ್ಲಿಕ್ ಆಫ್ ಕಲಬುರಗಿಯನ್ನು ಧಿಕ್ಕರಿಸಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಘನತೆಯನ್ನು ಎತ್ತಿ ಹಿಡಿಯಲು ಬಿಜೆಪಿ ಜನರ ದನಿಯಾಗಿ ಹೋರಾಡಲಿದೆ. ಅಧಿಕಾರದ ಮದ ನೆತ್ತಿಗೇರಿಸಿಕೊಂಡಂತೆ ವರ್ತಿಸುತ್ತಿರುವ ಪ್ರಿಯಾಂಕ್ ಖರ್ಗೆ ಅವರೇ, ಈ ನೆಲದಲ್ಲಿ ‘ದೇಶಭಕ್ತರನ್ನು ಕೆಣಕಿ ಉಳಿದವರಿಲ್ಲ‘ ಎಂಬ ವಾಸ್ತವಿಕ ಸತ್ಯ ನೆನಪಿರಲಿ ಎಂದು ವಿಜಯೇಂದ್ರ ಎಚ್ಚರಿಸಿದ್ದಾರೆ.

