ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹದಿನಾರು ವರ್ಷಗಳಿಂದಲೂ ಬಡ್ತಿಯಿಲ್ಲದೆ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯದ ಎಲ್ಲಾ ಪಿಡಿಓ.ಗಳಿಗೆ ಏಕಕಾಲದಲ್ಲಿ ಬಿ ಗ್ರೇಡ್ಗೆ ಮುಂಬಡ್ತಿ ನೀಡಬೇಕೆಂದು ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಬಿ ಗ್ರೇಡ್ ಹುದ್ದೆ ಉನ್ನತಿಕರಿಸಿದ ಸಂಘದ ರಾಜ್ಯಾಧ್ಯಕ್ಷ ರಮೇಶ್ ನಡಗೇರಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ೧೫೦೦ ಪಿಡಿಓ.ಗಳನ್ನು ಮಾತ್ರ ಸರ್ಕಾರ ಬಿ ಗ್ರೇಡ್ ಹುದ್ದೆಗೇರಿಸಿದೆ. ಅದರಂತೆ ಉಳಿದ ಎಲ್ಲಾ ಪಂಚಾಯಿತಿಯ ಅಭಿವೃದ್ದಿ ಅಧಿಕಾರಿಗಳಿಗೂ ಬಡ್ತಿ ಸಿಗಬೇಕು. ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಅನಿವಾರ್ಯವಾಗಿ ಹೋರಾಟಕ್ಕಿಳಿಯಬೇಕಾಗುತ್ತದೆಂದು ಎಚ್ಚರಿಸಿದರು.
ರಾಜ್ಯದಲ್ಲಿ ೫೬೯೪ ಗ್ರಾಮ ಪಂಚಾಯಿತಿಗಳಲ್ಲಿರುವ ಪಿಡಿಓ.ಗಳನ್ನು ತ್ವರಿತಗತಿಯಲ್ಲಿ ಅಪ್ಗ್ರೇಡ್ಗೇರಿಸಬೇಕು. ರಾಷ್ಟ್ರಪಿತ ಮಹಾತ್ಮಗಾಂಧಿ ಕಂಡ ಕನಸು ನನಸಾಗಬೇಕಾದರೆ ಸ್ಥಳೀಯ ಸರ್ಕಾರಗಳು ಬಲಿಷ್ಟವಾಗಬೇಕು. ಒಂದೆ ಇಲಾಖೆಯಲ್ಲಿ ತಾರತಮ್ಯವಿರುವುದರಿಂದ ಸಾರ್ವಜನಿಕರ ಬದುಕನ್ನು ಹಸನಾಗಿಸುವುದು ಕಷ್ಟವಾಗುತ್ತಿದೆ ಎಂದು ಪಿಡಿಓ.ಗಳಿಗಿರುವ ಸಂಕಷ್ಟಗಳನ್ನು ತೋಡಿಕೊಂಡರು.
ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಬಿ ಗ್ರೇಡ್ ಹುದ್ದೆ ಉನ್ನತೀರಕರಿಸಿದ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಮಾತನಾಡಿ ೨೦೧೦ ರಲ್ಲಿ ಪಿಡಿಓ.ಹುದ್ದೆಗಳನ್ನು ಸೃಷ್ಠಿಸಲಾಯಿತು. ಇಲ್ಲಿಯವರೆಗೂ ಬಡ್ತಿ ಸಿಗದ ಕಾರಣ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಸಹಾಯಕ ನಿರ್ದೇಶಕರುಗಳ ಹುದ್ದೆಗೇರಲು ಅಡಚಣೆಯಾಗಿದೆ. ಹೈದರಾಬಾದ್ ಕರ್ನಾಟಕದಲ್ಲಿ ೬೧೩ ಪಿಡಿಓ.ಗಳಿಗೆ ಬಡ್ತಿ ಸಿಕ್ಕಿದೆ. ಜೇಷ್ಠತಾ ಪಟ್ಟಿ ನ್ಯಾಯಾಲಯದಲ್ಲಿರುವುದರಿಂದ ವಿಳಂಭವಾಗುತ್ತಿದೆ. ಬಿ ಗ್ರೇಡ್ನಿಂದ ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆಯಾಗುವುದಿಲ್ಲ. ಹಾಗಾಗಿ ಎಲ್ಲಾ ಪಿಡಿಓ.ಗಳಿಗೆ ಮುಂಬಡ್ತಿ ನೀಡಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಜಯಗೌಡ ಪಾಟೀಲ್, ಹನುಮಂತ ಕರ್ನಕೋಟೆ, ಹುಸೇನ್ಸಾಬ್, ಚಿತ್ರದುರ್ಗ ಜಿಲ್ಲಾಧ್ಯಕ್ಷ ನಾಗರಾಜ್ ಇವರುಗಳು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

