ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಗಣಿಬಾದಿತ ಪ್ರದೇಶಗಳಲ್ಲಿ ವಾಸಿಸುತ್ತಿರುವವರಿಗೆ ಗಣಿ ಕಂಪನಿಗಳು ಮೂಲಭೂತ ಸೌಲಭ್ಯಗಳನ್ನು ಒದಗಿಸದೆ ವಂಚಿಸುತ್ತಿರುವುದನ್ನು ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೆಂಗುಂಟೆ ಜಯಪ್ಪ ಹೊಳಲ್ಕೆರೆ ತಾಲ್ಲೂಕಿನ ಗಣಿಬಾದಿತ ಪ್ರದೇಶಗಳಾದ ಮದಕರಿಪುರ, ಕಾಗಳಗೆರೆ, ಮುತ್ತುಗದೂರು, ತಣಿಗೆಹಳ್ಳಿ ಗ್ರಾಮಗಳ ನಿವಾಸಿಗಳು ಶಿಕ್ಷಣ, ಆರೋಗ್ಯ, ಉದ್ಯೋಗದಿಂದ ವಂಚಿತರಾಗಿದ್ದಾರೆ. ಗಣಿ ಕಂಪನಿಗಳು ಅದಿರು ಸಾಗಿಸುತ್ತಿರುವುದರಿಂದ ಬೆಳೆಗಳು ನಾಶವಾಗುತ್ತಿವೆ. ಗಣಿ ಬಾದಿತ ಪ್ರದೇಶಗಳ ಅಭಿವೃದ್ದಿಗಾಗಿಯೇ ಮೀಸಲಿರುವ ಹಣವನ್ನು ಪ್ರಭಾವಿಗಳು ಬಳಸಿಕೊಳ್ಳುತ್ತಿದ್ದಾರೆಂದು ಆಪಾದಿಸಿದರು.
ಗಣಿಬಾದಿತ ಪ್ರದೇಶಗಳಲ್ಲಿ ವಾಸಿಸುತ್ತಿರುವವರಿಗೆ ಮಂಜೂರಾಗಿರುವ ಮನೆಗಳು ಅನ್ಯರ ಪಾಲಾಗುತ್ತಿವೆ. ಆ ಭಾಗದ ಶಾಸಕರು ತಮಗೆ ಬೇಕಾದವರಿಗೆ ಮನೆಗಳನ್ನು ನೀಡಲು ಪಟ್ಟಿ ಮಾಡಿ ಜಿಲ್ಲಾಧಿಕಾರಿಗೆ ಕಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ನಿಜವಾಗಿಯೂ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವವರನ್ನು ಗುರುತಿಸಿ ಮನೆಗಳನ್ನು ಕಟ್ಟಿಸಿಕೊಡಬೇಕು. ಗಣಿ ಕಂಪನಿಗಳು ಅಧಿಕಾರಿಗಳೊಂದಿಗೆ ಕೈಜೋಡಿಸಿ ಗಣಿ ಬಾದಿತ ಪ್ರದೇಶಗಳಿಗೆ ಬಳಸಬೇಕಾಗಿರುವ ಹಣ ಲೂಟಿಯಾಗುತ್ತಿದೆ.
ಇಲ್ಲಿನ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆಯುತ್ತಿರುವ ಗಣಿಗಳು ಸ್ಥಳೀಯರಿಗೆ ಉದ್ಯೋಗ ನೀಡದೆ ಹೊರ ರಾಜ್ಯಗಳಿಂದ ಕೆಲಸಗಾರರನ್ನು ಕರೆಸಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಗಣಿ ಕಂಪನಿಗಳ ವಿರುದ್ದ ಉಗ್ರ ಹೋರಾಟ ನಡೆಸಲಾಗವುದೆಂದು ಕೆಂಗುಂಟೆ ಜಯಪ್ಪ ಎಚ್ಚರಿಸಿದರು.
ಜಿ.ಶಿವಣ್ಣ, ರಂಗಣ್ಣ, ಮದನ್, ಹರೀಶ್, ಸಿದ್ದೇಶ್, ಧನುನಾಯ್ಕ, ಅಜ್ಜಯ್ಯ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

