ರಸ್ತೆ ಸುರಕ್ಷತಾ ಕ್ರಮ ಪಾಲಿಸದ ಟೋಲ್ ಸಿಬ್ಬಂದಿ ವಿರುದ್ಧ ಪ್ರತಿಭಟನೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ರಸ್ತೆ ನಿಯಮಗಳನ್ನು ಪಾಲಿಸದೆ ವಾಹನಸವಾರರಿಗೆ ಸಮಸ್ಯೆ ಮಾನಡುತ್ತಿರುವ ಟೋಲ್ ಸಿಬ್ಬಂದಿ ವಿರುದ್ದ ರಾಜ್ಯ ರೈತ ಸಂಘ ಮತ್ತು ವಿವಿಧ ಕನ್ನಡಪರ ಸಂಘಟನೆಗಳಿಂದ ಯಲಹಂಕ-ಹಿಂದೂಪುರ ರಾಜ್ಯ ಹೆದ್ದಾರಿ ಹಾದುಹೋಗಿರುವ ನಗರದ ಡಿ.ಕ್ರಾಸ್ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವನಾಯಕ್, ಟೋಲ್ ನಿರ್ವಾಹಕರು ರಸ್ತೆ ಮತ್ತು ಸುರಕ್ಷತಾ ನಿಯಮಗಳನ್ನು ಪಾಲಿಸದೇ ಈ ರಸ್ತೆಯಲ್ಲಿ ಸಂಚರಿಸುವ ಹಲವು ಮಂದಿ ವಾಹನಸವಾರರು ಹಾಗೂ ಪಾದಚಾರಿಗಳು ಸಾವು-ನೋವುಗಳನ್ನು ಅನುಭವಿಸುತ್ತಿದ್ದಾರೆ. ಅವೈಜ್ಞಾನಿಕವಾಗಿ ಡಿವೈಡರ್ ಮತ್ತು ಯು-ಟರ್ನ್‌ಗಳನ್ನು ಅಳವಡಿಸಿದ್ದು, ಪಾದಚಾರಿ ಮಾರ್ಗದ ಮೇಲೆ ಅಂಗಡಿ-ಮುಂಗಟ್ಟುಗಳನ್ನು ತೆರೆಯಲು ಅವಕಾಶನೀಡಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ದೂರಿದರು.

- Advertisement - 

ರಸ್ತೆಗಾಗಿ ಭೂಮಿ ನೀಡಿದ ರೈತರಿಗೆ ಐದು ವರ್ಷಕಳೆದರೂ ಸೂಕ್ತಪರಿಹಾರ ನೀಡಿಲ್ಲ. ಟೋಲ್ ಸಮೀಪದಲ್ಲಿ ಶೌಚಾಲಯ, ವಿದ್ಯುತ್‌ದೀಪ, ಸ್ವಚ್ಛತೆ ಸೇರಿ ಮೂಲಸೌಕರ್ಯಗಳನ್ನು ಕಲ್ಪಿಸಿಲ್ಲ. ಅಪಘಾತಗಳಾದಾಗ ಗಾಯಾಳುಗಳನ್ನು ಸಾಗಿಸಲು ಆಂಬುಲೆನ್ಸ್ ಮತ್ತು ಟೋಯಿಂಗ್ ವಾಹನದ ಸೌಲಭ್ಯಗಳಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿದ ನಂತರವಷ್ಟೇ ಟೋಲ್ ಸಂಗ್ರಹ ಮಡಬೇಕೆಂದು ಹಲವು ಬಾರಿ ಸೂಚಿಸಿದ್ದರೂ ನಿರ್ಲಕ್ಷ್ಯವಹಿಸಿದ್ದಾರೆ. ಸಮಸ್ಯೆಗಳನ್ನು ಬಗೆಹರಿಸದೆ ಟೋಲ್ ಸಂಗ್ರಹ ಮಾಡಬಾರದು ಎಂದು ಆಗ್ರಹಿಸಿದರು.

ಜನರಿಂದ ತೆರಿಗೆ ವಸೂಲಿ ಮಾಡಿ ಸಾರ್ವಜನಿಕರಿಗೆ ವೈಜ್ಞಾನಿಕವಾಗಿ ರಸ್ತೆ ನಿರ್ಮಿಸುವುದು ಸರ್ಕಾರದ ಜವಾಬ್ದಾರಿ. ಆದರೆ ಇದನ್ನು ಪರಿಗಣಿಸದೆ ಯಾವುದೋ ಖಾಸಗಿ ಸಂಸ್ಥೆ ರಸ್ತೆ ನಿರ್ಮಾಣ ಮಾಡಿ ಸುಂಕ ವಸೂಲಿ ಮಾಡಲು ಬಿಟ್ಟು ನಮಗೂ ರಸ್ತೆಗೂ, ಸಾರ್ವಜನಿಕರ ಜೀವಕ್ಕೂ ಗೌರವ ಇಲ್ಲದಂತೆ ಸರ್ಕಾರಗಳು ಮರೆತು ಬಿಟ್ಟಿದೆ. ದಿನೇ ದಿನೇ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ನಗರದಲ್ಲಿ ಕೈಗಾರಿಕೆಗಳಿಂದ ಜನಸಂಖ್ಯೆಯು ಹೆಚ್ಚಾಗುತ್ತಿರುವ ಕಾರಣ ವಾಹನಗಳ ದಟ್ಟಣೆ ಹೆಚ್ಚುತ್ತಿದೆ. ಇಲ್ಲಿ ಅವೈಜ್ಞಾನಿಕವಾಗಿ ಸಾರ್ವಜನಿಕರಿಂದ ಸುಂಕ ವಸೂಲಿ ಮಾಡಿ ತಮ್ಮ ಆದಾಯ ಹೆಚ್ಚು ಮಾಡಿಕೊಳ್ಳುತ್ತಿದ್ದಾರೆ. ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಒಂದು ವಾರಕ್ಕೆ ಕನಿಷ್ಠ ಒಂದೆರಡು ಅಪಘಾತಗಳಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು

- Advertisement - 

 

ಸಾರ್ವಜನಿಕರ ಹಕ್ಕೋತ್ತಾಯಗಳು:
ಸುಂಕ ಪಡೆಯುವ ರಸ್ತೆಗೆ ಸರ್ವಿಸ್ ರಸ್ತೆ ನಿರ್ಮಿಸಬೇಕು.

  1. 2. ರಸ್ತೆಯ ಮಧ್ಯ ಭಾಗದಲ್ಲಿ ಡಿವೈಡ‌ರ್ ಹಾಕಬೇಕು.
  2. ಕೆಲವು ಸರ್ಕಲ್‌ಗಳಲ್ಲಿ ಅಂಡರ್ ಪಾಸ್ ಮತ್ತು ಮೇಲು ಸೇತುವೆ ನಿರ್ಮಾಣ ಮಾಡಬೇಕು.
  3. ರಸ್ತೆ ಬದಿಯಲ್ಲಿ ಕೋಳಿ ತ್ಯಾಜ್ಯ ವಿಲೇವಾರಿ ಮಾಡುವುದನ್ನು ತಡೆಯುವುದು.
  4. ರಸ್ತೆ ಪಕ್ಕದಲ್ಲಿ ಗಿಡಗಂಟಿಗಳು ಬೆಳೆಯದಂತೆ ಸ್ವಚ್ಛ ಮಾಡುವುದು.
  5. ರಸ್ತೆ ಪಕ್ಕದಲ್ಲಿ ಖಾಸಗಿ ಜಾಹಿರಾತು ಫಲಕಗಳನ್ನು ಬೇಕಾಬಿಟ್ಟಿ ಹಾಕಿರುವುದನ್ನು ತೆಗೆಯಬೇಕು.
  6. ಕೆಲವು ಭಾಗಗಳಲ್ಲಿ ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಸಬೇಕು.
  7. ತಾಲ್ಲೂಕಿನ ಲೋಕೋಪಯೋಗಿ ಇಲಾಖೆಯವರು ತಮಗೆ ಸಂಬಂಧಪಟ್ಟ ರಸ್ತೆಗಳ ಬದಿಯಲ್ಲಿರುವ ಕುರುಚಲು ಗಿಡಗಳನ್ನು ತೆಗೆಯುವುದು.

ನಗರ ಪೊಲೀಸ್‌ಠಾಣೆ ಇನ್ಸೆಕ್ಟರ್ ಅಮರೇಶ್ ಗೌಡ ನೇತೃತ್ವದಲ್ಲಿ ಪ್ರತಿಭಟನಾ ನಿರತರನ್ನ ರಸ್ತೆಯಿಂದ ತೆರವು ಮಾಡಿ ಟೋಲ್ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸುವ ಮೂಲಕ ಪ್ರತಿಭಟನೆ ಅಂತ್ಯಗೊಂಡಿತು.

ಈ ವೇಳೆ ಜಿಲ್ಲಾ ರೈತ ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್, ಪ್ರಧಾನ ಕಾರ್ಯದರ್ಶಿ ಮುತ್ತೇಗೌಡ, ತಾಲ್ಲೂಕು ಅಧ್ಯಕ್ಷ ಹನುಮೇಗೌಡ, ಪ್ರಧಾನ ಕಾರ್ಯದರ್ಶಿ ಸತೀಶ್‌, ಕನ್ನಡ ಪಕ್ಷದ ಉಪಾಧ್ಯಕ್ಷ ಸಂಜೀವನಾಯಕ್‌, ಜಿಲ್ಲಾಧ್ಯಕ್ಷ ಮುನಿಪಾಪಯ್ಯ ತಾಲ್ಲೂಕು ಅಧ್ಯಕ್ಷ ವೆಂಕಟೇಶ್‌, ಕರವೇ ಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ ಮತ್ತಿತ್ತರರು ಇದ್ದರು.

 

Share This Article
error: Content is protected !!
";