ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಚುನಾವಣಾ ಪೂರ್ವದಲ್ಲಿ ಘೋಷಿಸಿದ ಪ್ರಣಾಳಿಕೆಯಂತೆ ಸರ್ಕಾರಿ ನೌಕರರಂತೆ ಸಾರಿಗೆ ನೌಕರರಿಗೂ ಏಳನೆ ವೇತನ ಆಯೋಗದ ಮಾದರಿಯಲ್ಲಿ ಸಮಾನ ವೇತನ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ ಬೆಂಗಳೂರಿಗೆ ಪಾದಯಾತ್ರೆ ಆರಂಭಿಸಲಾಯಿತು.
ದಿನಾಂಕ : ೧-೧-೨೦೨೦ ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಿಸಲಾಗಿದ್ದು, ೩೮ ತಿಂಗಳ ಹಿಂಬಾಕಿಯನ್ನು ನೀಡಬೇಕು. ಈಗಾಗಲೆ ಸರ್ಕಾರ ೨೬ ತಿಂಗಳ ಬಾಕಿ ವೇತನ ನೀಡಲು ಸುತ್ತೋಲೆ ಹೊರಡಿಸಿದ್ದು, ಬಾಕಿ ೧೨ ತಿಂಗಳ ವೇತನವನ್ನು ಸರ್ಕಾರ ಅಥವಾ ಸಂಸ್ಥೆ ಭರಿಸಬೇಕು. ಸಾರಿಗೆ ಸಂಸ್ಥೆಗಳಲ್ಲಿ ಸಂಘಗಳ ಮಾನ್ಯತೆಗಾಗಿ ಕಾರ್ಮಿಕ ಸಂಘಟನೆಗಳ ಚುನಾವಣೆಯನ್ನು ನಡೆಸಬೇಕೆಂದು ಪ್ರತಿಭಟನಾನಿರತರು ಒತ್ತಾಯಿಸಿದರು.
ಏ.೮ ರಿಂದ ಆರಂಭಗೊಂಡಿರುವ ಪಾದಯಾತ್ರೆ ೨೧ ರಂದು ಬೆಂಗಳೂರು ತಲುಪಿ ಫ್ರೀಡಂ ಪಾರ್ಕ್ನಲ್ಲಿ ಅನಿರ್ಧಿಷ್ಠಾವಧಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದೆಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ರಾಜ್ಯಾಧ್ಯಕ್ಷ ಆರ್.ಚಂದ್ರಶೇಖರ್ ತಿಳಿಸಿದರು.
ಪ್ರೊ.ಕೆ.ಇ.ರಾಧಕೃಷ್ಣ, ಆಂಜಿನಪ್ಪ, ಜಯರಾಂ ರಾಥೋಡ್, ಲೋಕೇಶ್, ಹನುಮಂತಪ್ಪ, ಸಿಬ್ಬಂದಿಗಳ ಕುಟುಂಬದವರಾದ ರೇಣುಕ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

