ಚಂದ್ರವಳ್ಳಿ ನ್ಯೂಸ್, ಹೊಸಪೇಟೆ:
ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ)ಎಸ್ಸಿ/ಎಸ್ಟಿ ಮತ್ತು ಒಬಿಸಿ ವಿಧ್ಯಾರ್ಥಿಗಳಿಗೆ ಸಮಾನ ಪ್ರೋತ್ಸಾಹ ನಿಯಮಾವಳಿಗಳ ಜಾರಿ ಸೇರಿದಂತೆ ಇತರೆ ಬೇಡಿಕೆಗಳನ್ನು ಸರ್ಕಾರ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ವಿಶ್ವವಿದ್ಯಾಲಯಗಳ ಅನುದಾನ ಆಯೋಗ ಎಸ್ಸಿ/ಎಸ್ಟಿ ಮತ್ತು ಓ.ಬಿ.ಸಿ ವಿದ್ಯಾರ್ಥಿಗಳಿಗೆ ಸಮಾನತೆ ಪ್ರೋತ್ಸಾಹಿಸಲು ತಂದಿರುವ ನಿಯಮಾವಳಿ (೨೦೨೬) ಗಳಿಗೆ ಸುಪ್ರೀಂ ಕೋರ್ಟ್ ನೀಡಿರುವ ತಡೆ ಆಜ್ಞೆಯನ್ನು ತೆರವುಗೊಳಿಸಬೇಕು. ಎಸ್ಸಿ/ಎಸ್ಟಿ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಜಾತಿ, ಧರ್ಮ, ಇನ್ನಿತರ ತಾರತಮ್ಯ ವಾಗುತ್ತಿರುವುದನ್ನು ತಡೆಗಟ್ಟಲು ಮಾಡಿರುವ ಯುಜಿಸಿ ನಿಯಮಾವಳಿಗಳನ್ನು ಜಾರಿ ತರಬೇಕು.ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ನಿಯಮಾವಳಿಗಳು ಯುಜಿಸಿ ಹೊರಡಿಸಬೇಕು .
ಕೇಂದ್ರ ಸರ್ಕಾರ ಈ ಮೇಲ್ಕಂಡ ಬೇಡಿಕೆಗಳನ್ನು ಕೂಡಲೇ ಜಾರಿಗೆ ತರಬೇಕು. ಕರ್ನಾಟಕ ಸರ್ಕಾರ ರಾಜ್ಯದಲ್ಲಿ ದಲಿತ ವಿದ್ಯಾರ್ಥಿಗಳು ಗಮನದಲ್ಲಿಟ್ಟುಕೊಂಡು ತರುತ್ತಿರುವ ಕಾನೂನು ವಿಳಂಬ ಮಾಡದೇ ಜಾರಿಗೆ ತರಬೇಕು. ರೋಹಿತ್ ವೇಮುಲ ಕಾಯಿದೆ’ ಯನ್ನು ಕರ್ನಾಟಕ ರಾಜ್ಯ ಸರ್ಕಾರ ಜಾರಿಗೊಳಿಸಬೇಕು.ರಾಜ್ಯದ ಮುಖ್ಯಮಂತ್ರಿಗಳಿಗೆ ಪ್ರತ್ಯೇಕ ಮನವಿಯನ್ನು ಇದೇ ಸಂದರ್ಭದಲ್ಲಿ ಜಲ್ಲಾಧಿಕಾರಿಗಳ ಮುಖಾಂತರ ನೀಡಲಾಗಿದೆ.
ಕೇಂದ್ರ ರಾಜ್ಯ ಸರ್ಕಾರ ವಿಳಂಬ ನೀತಿಯನ್ನು ಅನುಸರಿಸದೇ ದಲಿತ ವಿದ್ಯಾರ್ಥಿಗಳ ಸಮಾನತೆ ಉತ್ತೇಜನೆಗಾಗಿ ಕ್ರಮ ತೆಗೆದುಕೊಳ್ಳಲು ಮುಂದಾಗಬೇಕೆಂದು ಆಗ್ರಹಿಸಿ, ಅಪರ ಜಿಲ್ಲಾಧಿಕಾರಿ ಬಾಲಕೃಷ್ಣ ಅವರಿಗೆ ಮನವಿ ಸಲ್ಲಿಸಿದರು.
ಮುಖಂಡರಾದ ಮರಿಸ್ವಾಮಿ, ಸೋಮಶೇಖರ, ಕೊಟಾಲ್ ವೀರೇಶ, ಹೆಚ್.ನಾಗಪ್ಪ, ಮರಿಮ್ಮನಹಳ್ಳಿ ಜಗನ್ನಾಥ, ಮರಿಯಮ್ಮನಹಳ್ಳಿ ಮಂಜಪ್ಪ, ಸಂತೋಷ ಕುಮಾರ್, ಉದಯಕುಮಾರ್.ಹೆಚ್.ಆರ್. ಪರಶುರಾಮ.ಎಂ. ಜಯರಾಮ, ಮರಿದಾಸ ಹಾಗೂ ಇತರರಿದ್ದರು.

