ಚಂದ್ರವಳ್ಳಿ ನ್ಯೂಸ್, ತುಮಕೂರು:
ಕೆ.ಎನ್. ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿರುವುದನ್ನು ಖಂಡಿಸಿ ಜಿಲ್ಲೆಯ ಅಭಿಮಾನಿಗಳು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದಲ್ಲದೆ ಬೆಂಬಲಿಗನೊಬ್ಬ ಅರೆಬೆತ್ತಲೆ ಉರುಳು ಸೇವೆ ಮಾಡಿ ಗಮನ ಸೆಳೆದರು.
ಹೈಕಮಾಂಡ್ ಆದೇಶದ ಮೇರೆಗೆ ಕೆ.ಎನ್ ರಾಜಣ್ಣ ಅವರನ್ನು ಸಿಎಂ ಸಿದ್ದರಾಮಯ್ಯ ವಜಾ ಮಾಡಿದ್ದಾರೆ. ಈ ಕುರಿತು ರಾಜಭವನವೂ ಆದೇಶ ಹೊರಡಿಸಿದೆ. ರಾಜಣ್ಣ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ.
ನಗರದ ಎಂಜಿ ರಸ್ತೆಯಲ್ಲಿ ಸೇರಿದ್ದ ಸಾವಿರಾರು ಜನರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ಮಾರ್ಗದಲ್ಲಿದ್ದ ಎಲ್ಲ ಅಂಗಡಿ – ಮುಗ್ಗಟ್ಟುಗಳು ಸ್ವಯಂಪ್ರೇರಿತವಾಗಿ ಬಾಗಿಲು ಹಾಕಿದ್ದವು. ಈ ಮೂಲಕ ವ್ಯಾಪಾರಿಗಳು ಪ್ರತಿಭಟನೆಗೆ ಪರೋಕ್ಷ ಬೆಂಬಲ ನೀಡಿದ್ದರು. ಪ್ರತಿಭಟನೆ ಹಿನ್ನೆಲೆ ಈ ಭಾಗದಲ್ಲಿ ಕೆಲಕಾಲ ಅಘೋಷಿತ ಬಂದ್ ಪರಿಸ್ಥಿತಿ ನಿರ್ಮಾಣವಾಗಿತ್ತು.
ಅರೆಬೆತ್ತಲೆ ಉರುಳು ಸೇವೆ: ಮಾಜಿ ಸಚಿವ ರಾಜಣ್ಣ ಅವರ ಬೆಂಬಲಿಗನೊಬ್ಬ ಅರೆಬೆತ್ತಲೆಯಾಗಿ ಉರುಳು ಸೇವೆ ಮಾಡಿದರು. ರಾಜಣ್ಣ ಅವರ ಭಾವಚಿತ್ರ ಹಿಡಿದಿದ್ದ ಆತ, ರಾಜಣ್ಣ ಅವರನ್ನು ಮರಳಿ ಸಂಪುಟಕ್ಕೆ ಸೇರಿಸಿಕೊಳ್ಳಿ ಎಂದು ಘೋಷಣೆ ಕೂಗುತ್ತಾ ಉರುಳು ಮಾಡಿದರು.
ಮಾಜಿ ಸಚಿವ ರಾಜಣ್ಣ ಬೆಂಬಲಿಗರು ಮಧುಗಿರಿ, ಕೊರಟಗೆರೆ, ತುಮಕೂರು, ಪಾವಗಡ ಸೇರಿದಂತೆ ಜಿಲ್ಲೆಯ 10 ತಾಲೂಕುಗಳಿಂದ ಆಗಮಿಸಿದ್ದರು. 60 ಬಸ್ಗಳಲ್ಲಿ ಆಗಮಿಸಿದ್ದ ರಾಜಣ್ಣ ಅವರ ಅಭಿಮಾನಿಗಳು ನಗರದ ಟೌನ್ ಹಾಲ್ ಸರ್ಕಲ್ನಿಂದ ಬಿ.ಎಚ್. ರಸ್ತೆ, ಎಂಜಿ ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿಯ ಕಡೆಗೆ ಮೆರವಣಿಗೆ ನಡೆಸಿದರು.
ಸಾವಿರಾರು ಮಂದಿ ರಾಜಣ್ಣ ಅವರ ಭಾವ ಚಿತ್ರದ ಕಟೌಟ್, ಪೋಸ್ಟರ್ ಹಿಡಿದು ಘೋಷಣೆ ಕೂಗುತ್ತಾ ಮಾಜಿ ಸಚಿವರಿಗೆ ಬೆಂಬಲ ಘೋಷಿಸಿದರು.

